Wednesday, 2 August 2017

ಕರಾವಳಿಯಲ್ಲಿ ನರ್ತೆ ವಿಶೇಷತೆ

         
ಪೃಥ್ವಿಯ ಪ್ರಾಣಿ ಸಮ್ರಾಜ್ಯದಲ್ಲಿ ಬೆನ್ನೆಲುಬುಗಳಿಲ್ಲದ ಪ್ರಾಣಿಗಳ ಪ್ರಧಾನ ವರ್ಗ ಮೃದ್ವಂಗಿಗಳದು. ಹೆಸರೇ ಸೂಚಿಸುವಂತೆ ಈ ವರ್ಗದ ಪ್ರಾಣಿಗಳದು ಮೆತ್ತನೆಯ ಮುದ್ದೆಯಂತಹ ಶರೀರ, ಅಸ್ಥಿಪಂಜರ ರಹಿತ ದೇಹ ನಿರ್ಮಿತಿ. ತಮ್ಮ ಇಡೀ ಶರೀರವನ್ನು ಆವರಿಸುವಂತೆ, ತಮ್ಮ ಶರೀರ ರಕ್ಷಣೆಗೂ ಆಹಾರ ಗಳಿಕೆಗೂ, ಚಲನಶೀಲತೆಗೂ ಒಪ್ಪವಾಗುವಂತೆ ಗಟ್ಟಿಯಾದ ಬಾಹ್ಯ ಕವಚವೊಂದು ರಚನೆಗೊಂಡಿರುತ್ತದೆ. ಆ ಚಿಪ್ಪಿನೊಳಗೆ ಬದುಕುತ್ತವೆ. ಹೀಗೆ ಬೇಸಿಗೆಯಲ್ಲಿ ಮಣ್ಣಿನಡಿಯಲ್ಲಿ ಮಾಯವಾಗಿ, ಮುಂಗಾರು ಮಳೆ ಪ್ರಾರಂಭವಾಗಿ, ಗದ್ದೆಗಳಲ್ಲಿ ನೀರು ನಿಲ್ಲುತ್ತಿದ್ದಂತೆ, ಮಣ್ಣು ಮೆದುವಾಗತೊಡಗುತ್ತದೆ. ಆಗ ಮೆಲ್ಲಗೆ ಮಣ್ಣಿನಿಂದ ಹೊರಬಂದು, ಒಂದುಕಡೆಯಿಂದ ಇನ್ನೊಂದು ಕಡೆಗೆ ನೀರಿನ ಹರಿವಿನೊಂದಿಗೆ ಸಂಚರಿಸಲು ಶುರು ಮಾಡುವುದೇ ಸುಂದರ ಮೃದ್ವಂಗಿ ನರ್ತೆ. ಕರಾವಳಿಯ ಆಡುಭಾಷೆ ತುಳುವಿನಲ್ಲಿ ಇದು ನರ್ತೆ ಎಂದೇ ಚಿರಪರಿಚಿತ. ಗಾತ್ರದಲ್ಲಿ ತುಂಬಾ ಚಿಕ್ಕದಿದ್ದರೆ ಅವುಗಳನ್ನು ಗುಳ್ಳ ಎಂದು ಕರೆಯುತ್ತಾರೆ.
          ಸಾಮಾನ್ಯವಾಗಿ ಹೊಲ ಗದ್ದೆಗಳಲ್ಲಿ, ಗದ್ದೆ ಬದುಗಳಲ್ಲಿ, ನೀರಿನ ಚಿಕ್ಕ ಕಣಿವೆಗಳ ಬದಿಯಲ್ಲಿ, ಮಾತ್ರ ಕಾಣಸಿಗುವ ನರ್ತೆಗಳಿಗೆ ಎಲೆ, ಕೆಸರು, ಮಣ್ಣು, ಪಾಚಿಗಳೇ ಆಹಾರ. ಹುಲ್ಲು ತೋಪುಗಳಲ್ಲಿ ಅಂಟಿಕೊಂಡು, ನಿಧಾನವಾಗಿ, ತನ್ನ ಅಂಟು ದೇಹಕ್ಕೆ ರಕ್ಷಣಾ ಕವಚವನ್ನು ಸುತ್ತಿಕೊಂಡು ಸಾಗುವ ಇವುಗಳು, ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಆಕರ್ಷಣೀಯ ಮೃದ್ವಂಗಿ. ಆದರೀಗ ಮಳೆಗಾಲದಲ್ಲಿಯೂ ಅಪರೂಪದ ಜೀವಿಯಾಗಿ ಬಿಟ್ಟಿವೆ ಇವುಗಳು.    
          ಹಟ್ಟಿ ಗೊಬ್ಬರ ಹಾಕುತ್ತಿದ್ದ ಒಂದು ಕಾಲದಲ್ಲಿ ಧಾರಾಳವಾಗಿ ಸಿಗುತ್ತಿದ್ದ ನರ್ತೆ, ಈಗ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಅದರ ಸಂತತಿ ಅಳಿವಿನಂಚಿನಲ್ಲಿದೆ. ಇಷ್ಟೇ ಅಲ್ಲದೆ ಅವುಗಳು ಭೂಮಿ ಮೇಲೆ ಬಂದು ಸಂತಾನಭಿವೃದ್ಧಿ ಮಾಡುವ ಅವಧಿಯಲ್ಲೇ ಅವುಗಳನ್ನು ಹಿಡಿದು, ನಾವು ಆಹಾರವಾಗಿ ಬಳಸುವುದರಿಂದ ಹಾಗೂ ಗದ್ದೆಗಳೇ ಮಾಯವಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ನರ್ತೆ ಅಪರೂಪದ ಅತಿಥಿಯಾಗಿ ಪರಿಣಮಿಸಿದೆ.
          ಗದ್ದೆಯಲ್ಲಿರುವ ಕ್ರಿಮಿಕೀಟಗಳನ್ನು ತಿಂದು ಬದುಕುವ ಇವುಗಳು ಮಣ್ಣಿನ ಒಳಗೂ ಕ್ರಿಯಾಶೀಲವಾಗಿರುವುದರಿಂದ ರೈತನಿಗೆ ತುಂಬಾ ಸಹಕಾರಿಯಾಗಿದ್ದವು. ಹಾಗಾಗಿ ಇವುಗಳನ್ನು ಗದ್ದೆಯಲ್ಲಿ ಬಿಟ್ಟು ಬೆಳೆಸುತ್ತಿದ್ದರು. ಹೀಗೆ ಪರೋಕ್ಷವಾಗಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ, ಉತ್ತಮ ಬೆಳೆ ಬರುವಲ್ಲಿ ಇದೂ ಒಂದು ಕಾರಣವಾಗುತ್ತಿತ್ತು. ಆದ್ದರಿಂದ ನರ್ತೆಯನ್ನು ರೈತನ ಮಿತ್ರ ಎಂದೇ ಕರೆಯುತ್ತಿದ್ದರು. ಆದರೆ ಇದು ರೈತನಿಗೆ ಶತ್ರುವೂ ಹೌದು. ಯಾಕೆಂದು ಕೇಳುತ್ತೀರಾ? ನರ್ತೆ ಇರುವ ಗದ್ದೆಯಲ್ಲಿ ಬೀಜ ಬಿತ್ತನೆ ಮಾಡಿ, ಮೊಳಕೆಯೊಡೆಯುತ್ತಿದ್ದಂತೆ ನರ್ತೆಗಳು ಮೊಳಕೆ ತಿನ್ನಲು ಶುರು ಹಚ್ಚುತ್ತವೆ. ಬೆಳೆ ನಾಶಮಾಡುತ್ತವೆ. ಹಾಗಾಗಿ ಹೆಚ್ಚಿನ ಭಾಗಗಳಲ್ಲಿ ಉಳುಮೆ ಸಮಯದಲ್ಲಿಯೇ ನರ್ತೆಗಳನ್ನು ಗದ್ದೆಯಿಂದ ತೆಗೆದು ಹೊರಹಾಕಿ, ನಂತರ ಬಿತ್ತನೆ ಮಾಡುತ್ತಾರೆ. ಇಲ್ಲದಿದ್ದಲ್ಲಿ ನರ್ತೆ ಇರುವ ಗದ್ದೆಯಲ್ಲಿ ಹೆಚ್ಚಾಗಿ ನೇಜಿ ನೆಡುವುದನ್ನೇ ರೂಢಿಸಿಕೊಂಡಿರುತ್ತಾರೆ. 15 ರಿಂದ 20 ವರ್ಷಗಳವರೆಗೆ ಬದುಕಬಲ್ಲ ನರ್ತೆ, ನೀರಿನಿಂದ ಬೇರ್ಪಡಿಸಿದ ಎರಡು ಮೂರು ದಿನಗಳವರೆಗೆ ಮಾತ್ರವೇ ಜೀವಂತವಾಗಿರುತ್ತವೆ. ಈಗ ಗದ್ದೆ ಉಳುಮೆಗೆ ರೈತರು ಯಂತ್ರೋಪಕರಣಗಳನ್ನು ಅವಲಂಭಿಸಿರುವುದರಿಂದ, ಒಂದು ರೀತಿಯಲ್ಲಿ ರೈತರೇ ಇದರ ನಾಶಕರಾಗಿದ್ದಾರೆ.
          ಉದ್ದ ಮೀಸೆಯನ್ನು ಹೊರಹಾಕುತ್ತಾ, ಮಳೆಹನಿ ಬೀಳುತ್ತಿದ್ದಂತೆ, ಗದ್ದೆಗಳಲ್ಲಿ ಅಲ್ಲಿ ಇಲ್ಲಿ ನರ್ತೆಗಳು ಕಾಣತೊಡಗುತ್ತದೆ. ಉಲುಮೆ ಮಾಡಿದ ನಂತರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ.  ನೇಜಿ ನೆಡುವ ಹೊತ್ತಲ್ಲಿ ಮಹಿಳೆಯರೆಲ್ಲಾ ನೇಜಿ ನೆಡುತ್ತಾ ತಮ್ಮ ಸೆರಗಿನಲ್ಲಿ ನರ್ತೆಗಳನ್ನು ಆಯ್ದು ತುಂಬಿಸುವ ವೈಖರಿ ಬೇರೆಲ್ಲೂ ನೋಡಲು ಸಿಗದ ವೈಭವ. ಆದರೆ ಅದೆಲ್ಲಾ ಈಗ ತಾಂತ್ರಿಕ ಯುಗದ ಸೆರೆಯಾಗಿಬಿಟ್ಟಿವೆ. ಆದರೆ ಇತ್ತೀಚೆಗೆ ಉಳುಮೆ ಮಾಡಿದ ಹೊಲದಿಂದ ಪಾಳುಬಿದ್ದ ಗದ್ದೆಯಲ್ಲಿ ಹೆಚ್ಚು ದೊರೆಯುತ್ತದೆ. ರಾಸಾಯನಿಕಗಳ ಹಾವಳಿಯಿಂದ ಆ ಗದ್ದೆಗಳು ದೂರವಿರುವುದೇ ಇದಕ್ಕೆ ಪ್ರಮುಖ ಕಾರಣ. ಉಳುಮೆ ಮಾಡದ ಹೊಲಗಳಲ್ಲಿ ನೀರು ತಿಳಿಯಾಗಿರುವುದರಿಂದ ಬಹುಬೇಗನೆ ನರ್ತೆಗಳು ಕಣ್ಣಿಗೆ ಗೋಚರಿಸುತ್ತವೆ. ತಂಪಾದ ಜಾಗವನ್ನು ನರ್ತೆಗಳು ಬಯಸುವುದರಿಂದ, ಸೂರ್ಯನ ಬಿಸಿಲು ಬೀಳುತ್ತಿದ್ದಂತೆ, ಹುಲ್ಲಿನೆಡೆಗೋ, ಮಣ್ಣಿನಡಿಗೋ ಹೋಗಿ ಅವಿತುಕುಳಿತುಕೊಳ್ಳುತ್ತವೆ. ರಾತ್ರಿಯ ಹೊತ್ತಲ್ಲಿ ಎಲ್ಲವೂ ಹೊರಬರುತ್ತವೆ. ಮುಂಜಾವಿನಲ್ಲಿ ಮತ್ತು ಇಳಿಸಂಜೆ ಹೊತ್ತಲ್ಲಿ ತಂಪು ವಾತಾವರಣಕ್ಕೆ ಮಣ್ಣಿನೊಳಗೆ, ಹುಲ್ಲಿನೆಡೆಯಲ್ಲಿ ಅವಿತುಕುಳಿತ ನರ್ತೆಗಳೆಲ್ಲವೂ ಮೆಲ್ಲಗೆ  ಹೊರಬರತೊಡಗುತ್ತವೆ ನರ್ತೆಗಳು ಮೂರು ನಾಲ್ಕು ಒಂದಕ್ಕೊಂದು ಅಂಟಿಕೊಂಡು ಇರುವುದನ್ನು ನೋಡಲು ಬಲು ಸೊಗಸು. ಬೆಳ್ಳಂಬೆಳಗ್ಗಿನ ಹೊತ್ತಲ್ಲೇ ಹೆಚ್ಚಿನವರು ನರ್ತೆಗಳನ್ನರಸಿ ಗದ್ದೆಗಿಳಿಯುತ್ತಾರೆ. ಆರಾಮವಾಗಿ ಚಿಪ್ಪಿನೊಳಗಿಂದ ತನ್ನ ದೇಹವನ್ನು ಹೊರಹಾಕಿ ವಿರಮಿಸುತ್ತಾ ವಿಹಾರ ಮಾಡುತ್ತಿರುವ ನರ್ತೆಗಳಿಗೆ ಮಾನವನ ಸುಳಿವು ಬೇಗನೆ ತಿಳಿಯುತ್ತದೆ. ನೀರಿನಲ್ಲಾಗುವ ಶಬ್ಧ ಮತ್ತು ಬೇರೆ ವಸ್ತುಗಳಿಂದ ಅಥವಾ ಕೈಗಳಿಂದ ಅವುಗಳನ್ನು ಸ್ಪರ್ಶಿಸುತ್ತಿದ್ದಂತೆ, ಬಸವನಹುಳು, ಸಹಸ್ರಪದಿಗಳಂತೆ ಇವುಗಳೂ ನಾಚಿಕೆಯಿಂದಲೋ, ಜೀವ ಭಯದಿಂದಲೋ ತಕ್ಷಣ ದೇಹವನ್ನು ತನ್ನ ಗಟ್ಟಿಯಾದ ಶಂಖಾಕೃತಿಯ ಚಿಪ್ಪಿನೊಳಗೆ ಹಾಕಿ ಮುಚ್ಚಳದಿಂದ ಗಟ್ಟಿಯಾಗಿ ಮುಚ್ಚಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ತನ್ನ ದೇಹವನ್ನು ಮಾತ್ರವೇ ರಕ್ಷಾ ಕವಚದೊಳಗೆ ಭದ್ರ ಮಾಡಿಕೊಳ್ಳುತ್ತವೆಯೇ ಹೊರತಾಗಿ ಮನುಷ್ಯನಿಂದ ತಪ್ಪಿಸಿಕೊಂಡು ತಕ್ಷಣ ಮಣ್ಣಿನೊಳಗೆ ಸೇರಿಕೊಳ್ಳುವ ಸಾಮಥ್ರ್ಯ ನರ್ತೆಗಳಿಗಿಲ್ಲ. ನೀರಿನಲ್ಲೂ, ಮಣ್ಣಿನೊಳಗೂ ಜೀವಿಸಬಲ್ಲ ಇದೊಂದು ಉಭಯವಾಸಿ ಪ್ರಾಣಿ.
          ಹಿಂದಿನ ಕಾಲದಲ್ಲಿ ಕರಾವಳಿ ಭಾಗದ ಕೆಲವೆಡೆ, ಮಳೆಗಾಲದ ಸಮಯದಲ್ಲಿ ಹೆಚ್ಚಿನ ಮನೆಗಳಲ್ಲಿ ದಿನನಿತ್ಯದ ವಿಶೇಷ ಆಹಾರ ಇದಾಗಿತ್ತು. ಇಂದಿಗೂ ನರ್ತೆಯ ರುಚಿ ಬಲ್ಲ ಕೆಲವರು, ನರ್ತೆ ಹುಡುಕಾಟಕ್ಕಿಳಿಯುತ್ತಾರೆ. ಇವುಗಳನ್ನು ಹುಡುಕುವುದು ಸುಲಭದ ಮಾತಲ್ಲ. ಕೆಸರೇ ಆಹಾರವಾಗಿರುವ ಇದನ್ನು ಗದ್ದೆಯಿಂದ ಆಯ್ದ ತಕ್ಷಣ ಆಹಾರವಾಗಿ ಉಪಯೋಗಿಸಲು ಸಾಧ್ಯವಿಲ್ಲ. ಆಯ್ದ ನರ್ತೆಗಳನ್ನು ಒಂದು ಪಾತ್ರದಲ್ಲಿ ಹಾಕಿ, ನೀರನ್ನು ಹಾಕಿ ಮುಚ್ಚಳದಿಂದ ಎರಡು ದಿನಗಳವರೆಗೆ ಹಾಗೇ ಬಿಡಬೇಕು. ಎರಡು ದಿನದಲ್ಲಿ ನರ್ತೆಯೊಳಗಿದ್ದ ಕೆಸರು, ಪಾಚಿ ಬೇರ್ಪಟ್ಟಿರುವುದನ್ನು ಕಾಣಬಹುದು. ನಂತರ ಇದನ್ನು ಶುಚಿಗೊಳಿಸಿ ಖಾದ್ಯದಲ್ಲಿ ಬಳಸುವುದು ವಾಡಿಕೆ. ಖಾಲಿ ನೀರಿನಲ್ಲಿ ಬೇಯಿಸಿದಾಗ ಚಿಪ್ಪಿನ ಮುಚ್ಚಳ ಸುಲಭವಾಗಿ ತೆಗೆಯಲು ಸಾಧ್ಯ. ಚಿಪ್ಪಿನೊಳಗಿಂದ ಮಾಂಸವನ್ನು ತೆಗೆದು ಅಥವಾ ಚಿಪ್ಪಿನೊಂದಿಗೆ ನರ್ತೆಯನ್ನು ವಿವಿಧ ಖಾದ್ಯಗಳಲ್ಲಿ ಬಳಸಬಹುದು. ಇಂದಿಗೂ ಕರಾವಳಿ ಭಾಗದಲ್ಲಿ ನರ್ತೆಯಿಂದ ಬಗೆ ಬಗೆಯ ರುಚಿ ರುಚಿಯಾದ ಖಾದ್ಯಗಳನ್ನು ಮಾಡುವವರಿದ್ದಾರೆ. ಇದೊಂದು ಮಳೆಗಾಲದ ಒಳ್ಳೆಯ ಆಹಾರವೂ ಹೌದು. ಸೌತೆನರ್ತೆ, ಬಸಲೆನರ್ತೆ, ನರ್ತೆಪುಂಡಿ, ನರ್ತೆಗಸಿ ಇತ್ಯಾದಿಗಳಿಂದ ನರ್ತೆ ಇಂದಿಗೂ ಜನರ ಬಾಯಲ್ಲಿ ನೀರೂರಿಸುತ್ತದೆ. ಇದರ ರುಚಿ ತಿಂದವನೇ ಬಲ್ಲ. ನರ್ತೆ ಖಾದ್ಯ ರುಚಿಕರ ಮಾತ್ರವಲ್ಲದೆ ಆರೋಗ್ಯಕರವೂ ಹೌದು. ನರ್ತೆಯ ಖಾದ್ಯ ಸೊಂಟನೋವು, ಬೆನ್ನುನೋವು, ಮುಂತಾದ ನೋವುಗಳಿಗೆ ಸಿದ್ಧೌಷಧ ಎನ್ನುವುದು ಹಳ್ಳಿಗರ ನಂಬಿಕೆ. ಹಳ್ಳಿ ಪ್ರದೇಶದಲ್ಲಿ ಸಾಮಾನ್ಯವೆನಿಸಿಕೊಂಡಿರುವ ನರ್ತೆ, ಪೇಟೆಗಳಲ್ಲಿ ಬಲು ಬೇಡಿಕೆಯನ್ನು ಉಳಿಸಿಕೊಂಡಿದೆ. ಹಳ್ಳಿಯ ಕೆಲ ಮಹಿಳೆಯರು ಮಳೆಗಾಲದಲ್ಲಿ ನರ್ತೆಗಳನ್ನು ಹಿಡಿದು ಮಾರಾಟ ಮಾಡುವುದನ್ನೂ ಒಂದು ಉದ್ಯೋಗವನ್ನಾಗಿಸಿಕೊಂಡಿರುವರು. ಎಲ್ಲಾ ಕಾಲದಲ್ಲಿ ಸಿಗದೆ, ಮಳೆಗಾಲದಲ್ಲಿ ಮಾತ್ರ ಸಿಗುವುದರಿಂದ ಹೆಚ್ಚಿನ ಬೇಡಿಕೆಯನ್ನು ಇದು ನಿರ್ಮಿಸಿಕೊಂಡಿದೆ. ಹಾಗೂ ಉಳಿದ ಮೀನು, ಮರುವಾಯಿಗಳಿಗಿಂತಲೂ ಅಧಿಕ ಬೆಲೆಗೆ ಮಾರಾಟವಾಗುವುದೇ ಒಂದು ವಿಶೇಷ.
          ಗದ್ದೆ ಬದುಗಳಲ್ಲಿ ಬೆಳೆದ ಹುಲ್ಲುಗಳ ಎಡೆಯಲ್ಲಿ, ಬಿಲಗಳಲ್ಲಿ ರಾಶಿ ರಾಶಿ ಮೊಟ್ಟೆಗಳನ್ನಿಟ್ಟು ತನ್ನ ಸಂತತಿಯನ್ನು ಬೆಳೆಸತೊಡಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮೊಟ್ಟೆಗಳ ಗುಂಪು, ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಸುಮಾರು 200 ರಿಂದ 300 ಮೊಟ್ಟೆಗಳನ್ನಿಟ್ಟು ಸಂತತಿಯನ್ನು ವೃದ್ಧಿಸುತ್ತವೆ ಇವುಗಳು.
ನರ್ತೆಯನ್ನು ತಿಂದ ನಂತರ ಚಿಪ್ಪನ್ನು ಎಸೆಯುವ ಬದಲು ಅದರಿಂದ ಕಲಾತ್ಮಕ ಚಿತ್ರಗಳನ್ನು ಬರೆಯಬಹುದು. ಚಿಪ್ಪುಗಳನ್ನು ಪೋಣಿಸಿ ಉದ್ದನೆಯ ಹಾರಗಳಾಗಿ ಮಾಡುತ್ತಾರೆ. ಚಿಪ್ಪಿನ ಮುಚ್ಚಳದಿಂದ ವಿವಿಧಾಕೃತಿಗಳನ್ನು ಬರೆದು ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸುವರು. ಇವುಗಳು ನೋಡಲು ತುಂಬಾ ಆಕರ್ಷಣೀಯವಾಗಿರುವುದು. ಜೊತೆಗೆ ಮನೆಯ ಅಂದವನ್ನೂ ಹೆಚ್ಚಿಸುತ್ತವೆ.

ಬಿದಿರಿನ ಕುಡಿ ಕಣಿಲೆ

          ಕೃಷ್ಣನ ಕೈಯ್ಯಲ್ಲಿರುವ ಕೊಳಲಿನಿಂದ ಹಿಡಿದು, ಬಿಳಿಹಾಳೆಗಳು, ಪೀಠೋಪಕರಣಗಳು, ಮನೆಗಳು, ಕರಕುಶಲವಸ್ತುಗಳ ನಿರ್ಮಾಣದ ವರೆಗೆ ವಿವಿಧ ಕ್ಷೇತ್ರದಲ್ಲಿ ಉಪಯೋಗಿಸಲ್ಪಡುವ ಬಿದಿರು ಆಹಾರವಾಗಿಯೂ ಉಪಯೋಗಿಸಲ್ಪಡುತ್ತವೆ. ಕರಾವಳಿಯಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಆಹಾರದಲ್ಲಿ ಬಳಸಲಾಗುತ್ತಿರುವ ವಿಶೇಷ ತರಕಾರಿ ಕಳಲೆ. ಆದರೆ ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿನ, ಅದ್ಭುತ ಆಹಾರ ಪದಾರ್ಥ ಎಂದರೆ ಎಳೆ ಬಿದಿರು. ತುಳುವಿನಲ್ಲಿ ಕಣಿಲೆ ಎನ್ನುವ ಇದು ಘಟ್ಟಪ್ರದೇಶ, ಮಲೆನಾಡಿನಲ್ಲಿ ಪುಷ್ಕಳವಾಗಿ ದೊರೆಯುವ ಸಸ್ಯರಾಶಿ.
          ವರ್ಷಋತುವಿನ ನೆಂಟನಿವನು. ಮಳೆಯೊಂದಿಗೆ ಆಗಮಿಸುವ ಇದು ಸಪ್ಟಂಬರ್ ತಿಂಗಳವರೆಗೆ ಲಭ್ಯವಿರುತ್ತದೆ. ದಟ್ಟವಾಗಿ ಬೆಳೆದ ಬಿದಿರ ಮೆಳೆಗಳ ಬುಡದಲ್ಲಿ, ಮಳೆ ಬಿದ್ದು ಮಣ್ಣು ಮೆದುವಾದಂತೆ ಹೊರ ಬರುವ ಬಿದಿರ ಮೊಳಕೆಗಳು ನೋಡಲೂ ಬಹಳ ಆಕರ್ಷಣೀಯವಾಗಿ ಕಾಣಿಸುತ್ತವೆ. ಮೊಳಕೆ ಬಂದ ಒಂದರಿಂದ ಎರಡು ವಾರಗಳ ನಂತರದಲ್ಲಿ ತಿನ್ನಲು ಯೋಗ್ಯವಾದ ಕಳಲೆಯಾಗಿ ದೊರೆಯುತ್ತದೆ.
          ಶ್ರಾವಣ ಮಾಸ(ಸೋನ ತಿಂಗಳು) ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನವರು ಗುಡ್ಡ ಕಾಡುಗಳಲ್ಲಿರುವ ಬಿದಿರ ಮೆಳೆಗಳ ಬುಡದಲ್ಲಿರುತ್ತಾರೆ. ಕಣಿಲೆಯನ್ನು ಹುಡುಕಿ ತರುವುದು ಅಷ್ಟು ಸುಲಭದ ಮಾತಲ್ಲ. ಇದು ಸುಲಭವಾಗಿ ಕಣ್ಣಿಗೆ ಗೋಚರಿಸಿದರೂ ಕೈಗೆಟಕುವುದು ಕಷ್ಟ. ವರ್ಷವಿಡೀ ಸೊಂಪಾಗಿ ಬೆಳೆದ ಬಿದಿರು ತನ್ನ ಮುಳ್ಳಿನ ಕೊಂಬೆಗಳನ್ನು ಸ್ವತಂತ್ರವಾಗಿ ಎಲ್ಲೆಂದರಲ್ಲಿ ತನಗಿಷ್ಟ ಬಂದಂತೆ ಚಾಚಿಕೊಂಡಿರುತ್ತದೆ. ಹೀಗೆ ಚಾಚಿಕೊಂಡ ಮುಳ್ಳಿನ ಕೊಂಬೆಗಳ ನಡುವೆ ಒಂದೊಂದೆ ಕೊಂಬೆಗಳನ್ನು ಬಿಡಿಸುತ್ತಾ, ಮುಳ್ಳಿನಿಂದ ದೇಹವನ್ನು ರಕ್ಷಿಸುತ್ತಾ ಪೊದೆಯೊಳಗೆ ನುಗ್ಗುವುದೇ ಒಂದು ಸಾಹಸದ ಕೆಲಸ.
          ಮಳೆಗಾಲದಲ್ಲಿ ಊರೆಲ್ಲಾ ತಿರುಗಿ, ಕಾಣಿಸಿದ ಎಲ್ಲಾ ಬಿದಿರ ಮೆಳೆಗಳನ್ನೆಲ್ಲಾ ತಡಕಾಡಿ ಕಣ್ಣಿಗೆ ಗೋಚರಿಸಿದ ಕಣಿಲೆಗಳನ್ನೆಲ್ಲಾ ಕೊಯ್ದು ಕೊಂಡ್ಹೋಗಿ ಪೇಟೆಯಲ್ಲಿ ಮಾರಾಟ ಮಾಡುವ ಸಾಹಸಿಗರು ಹಲವರಿದ್ದಾರೆ. ಪಟ್ಟಣಗಳಲ್ಲಿ ಕಣಿಲೆ ಸಿಗದಿರುವುದರಿಂದ, ಇವುಗಳಿಗೆ ಬೇಡಿಕೆ ಹೆಚ್ಚು. ದರ ಕೂಡ ಅಧಿಕವಾಗಿರುತ್ತದೆ. ಕಣಿಲೆಯನ್ನು ಇಷ್ಟ ಪಡುವ ಪಟ್ಟಣಿಗರು ಎಷ್ಟೇ ಹಣವಾದರೂ ಕೊಟ್ಟು ಖರೀದಿಸುತ್ತಾರೆ. ಹೀಗೆ ಮಳೆಗಾಲದಲ್ಲಿ ಕಣಿಲೆಯಿಂದ ಸಂಪಾದನೆ ಮಾಡಿಕೊಳ್ಳುವರು ಕೆಲವು ಚಾಣಾಕ್ಷರು. ಹೆಚ್ಚಾಗಿ ಪುರುಷರು ಕಣಿಲೆಯನ್ನು ಕಡಿದು ತಂದರೆ, ಮಹಿಳೆಯರು ಸಂತೆಯಲ್ಲಿ ಕುಳಿತು ಮಾರಾಟ ಮಾಡುತ್ತಾರೆ. ಬಂಡವಾಳವಿಲ್ಲದೆ, ಲಾಭ ಪಡೆಯುವ ಉದ್ಯೋಗವಿದು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಕಣಿಲೆ ವ್ಯಾಪಾರಿಗಳನ್ನು ಕಾಣುವುದು ಅತಿ ವಿರಳ. ಅದಕ್ಕೆ ಲಾರಣವೂ ಇದೆ. ಬಿದಿರನ್ನು ಕಡಿಯುವುದು ಕಾನೂನಿನ ರೀತಿಯಲ್ಲಿ ಅಪರಾಧವೂ ಹೌದು. ಮಾತ್ರವಲ್ಲದೆ ಬಿದಿರ ಕಣಿಲೆ ಪಡೆಯಬೇಕಾದರೆ ಹರಸಾಹಸವೇ ಮಾಡಬೇಕಾಗುತ್ತದೆ. ಅಂತಹ ಸಾಹಸಕ್ಕೆ ಕೈ ಹಾಕುವ ಮನಸ್ಸಿನವರೂ ಕಡಿಮೆಯಾಗಿದ್ದಾರೆ. ಇಷ್ಟಲ್ಲದೆ ಸಸ್ಯರಾಶಿಗಳಲ್ಲಿ ಅತೀವೇಗವಾಗಿ ಬೆಳೆಯುವ ಸಸ್ಯ ಬಿದಿರು ಎನಿಸಿಕೊಂಡಿದ್ದರೂ, ಅತಿಯಾದ ಬಳಸುವಿಕೆಯಿಂದ ಸಂತತಿ ನಾಶವಾಗುತ್ತಾ ಬಂದಿದೆ. ಹಾಗಾಗಿ ಕಣಿಲೆ ಅಪರೂಪವಾಗಿ ಬಿಟ್ಟಿವೆ.
          ಇಂಗ್ಲೀಷ್‍ನಲ್ಲಿ ಬ್ಯಾಂಬೂ ಶೂಟ್ಸ್ ಎಂದು ಕರೆಯಲ್ಪಡುವ ಬಿದಿರಿನ ಕುಡಿಗೆ ಕಳಲೆ, ಕಳಿಲು ಎಂತಲೂ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಮಳೆ ನೀರು ಮಾಡುತ್ತಿದ್ದಂತೆ ಹಳ್ಳಿಗರು ಬೇಸಾಯದಲ್ಲಿ ತೊಡಗುತ್ತಿದ್ದರು. ಜೊತೆಗೆ ಬಿಡದೇ ಮಳೆ ಸುರಿಯುತ್ತಿದ್ದ ಕಾರಣ, ತರಕಾರಿಗಾಗಿ ಪಟ್ಟಣ್ಣಕ್ಕೆ ಹೋಗಲು ಸಮಯವಿರುತ್ತಿರಲಿಲ್ಲ. ಆಗ ಹಳ್ಳಿಗರೆಲ್ಲಾ ಕಾಡಿನಲ್ಲಿ ದೊರೆಯುವ ಸಸ್ಯ ತರಕಾರಿಗಳನ್ನೇ ಅವಲಂಬಿಸುತ್ತಿದ್ದರು. ಅವುಗಳಲ್ಲಿ ಕಣಿಲೆಯೂ ಒಂದು. ಮಳೆಗಾಲದ ವಿಶೇಷ ಆಹಾರವಾಗಿ ಕಳಲೆಯನ್ನು ಬಳಸುತ್ತಿದ್ದರು. ವಿವಿಧ ಬಗೆಯ ರುಚಿಕರ ಖಾದ್ಯಗಳನ್ನು ತಯಾರಿಸುತ್ತಿದ್ದರು. ಹೀಗೆ ಕಣಿಲೆ ಆಹಾರದಲ್ಲಿ ಬಳಕೆಯಾಯಿತು ಎನ್ನುತ್ತಾರೆ. ಕಣಿಲೆ ಖಾದ್ಯಗಳು ಆರೋಗ್ಯಕರವೂ ಹೌದು. ಯಾಕೆಂದರೆ ಕಣಿಲೆ ಉಷ್ಣಾಂಶ ಹೊಂದಿರುವುದರಿಂದ ಮಳೆಗಾಲದಲ್ಲಿ ಶಿತದಿಂದ ಶರೀರವನ್ನು ಬೆಚ್ಚಗೆಯಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ್ಯವಾದ ತರಕಾರಿ ಇದು. ಹಾಗೆಂದು ಅತಿಯಾಗಿ ತಿನ್ನುವಂತಿಲ್ಲ. ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ.
ವರ್ಷಋತುವಿನಲ್ಲಿ ಬಿದಿರಿಗೆ ಬಿಡುವಿಲ್ಲದ ಕೆಲಸ. ತನ್ನ ವಂಶವನ್ನು ವೃದ್ಧಿಗೊಳಿಸುವ, ಒಂದು ಬಿದಿರಿನ ಮೆಳೆಯಲ್ಲಿ ಸುಮಾರು 5 ರಿಂದ 10 ಕಣಿಲೆಗಳು ಮೂಡುತ್ತವೆ. ಭಾದ್ರಪದ ಮಾಸದಲ್ಲಿ ಕಣಿಲೆಯನ್ನು ಕೊಯ್ಯಬಾರದು ಎಂಬ ನಂಬಿಕೆಯಿದೆ. ಅದು ಅಳಿಯುತ್ತಿರುವ ಸಂತತಿಯನ್ನು ಉಳಿಸುವ ನಿಟ್ಟಿನಿಂದಲೂ ಆಗಿರಬಹುದು. ಕತ್ತಿಯಿಂದ ಕತ್ತರಿಸಿದ ಕಣಿಲೆಯನ್ನು ಅದರ ಬಿಳಿಯ ತಿರುಳನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಬೇಕು. ಹೊರಗಿನ ಕವಚ ತೆಗೆದಂತೆ ಒಳಗೆ ಬಿಳಿಯ ತಿರುಳು ಹೆಚ್ಚಾಗುತ್ತಾ ಹೋಗುತ್ತದೆ. ಗಟ್ಟಿ ಇರುವ ಭಾಗವನ್ನು ಕತ್ತರಿಸಿ ಎಸೆಯಬೇಕು. ಕಣಿಲೆಯನ್ನು ಕತ್ತಿಯಿಂದ ಸಣ್ಣಕ್ಕೆ ಕೊಚ್ಚಿಯೂ ಉಪಯೋಗಿಸಬಹುದು. ಸುಂದರವಾಗಿ ಚಕ್ರಾಕಾರವಾಗಿಯೂ ತುಂಡರಿಸಿ ಬಳಸಬಹುದು. ಕಣಿಲೆಯ ಕಚ್ಛಾ ಭಾಗಗಳನ್ನು ದನ ಕರುಗಳಿಗೆ ಹಾಕುವಂತಿಲ್ಲ. ಯಾಕೆಂದರೆ ಕತ್ತಿಯಿಂದ ಕಡಿಯುವುದರಿಂದ, ಕಬ್ಬಿಣ ಮುಟ್ಟಿದ ಬಿದಿರು ವಿಷ ಎನ್ನುತ್ತಾರೆ ತಿಳಿದವರು.
          ಕೊಚ್ಚಿದ ಕಣಿಲೆಯನ್ನು ಅವತ್ತೇ ಉಪಯೋಗಿಸುವಂತಿಲ್ಲ. ಮೂರು ದಿನ ನೀರಲ್ಲಿ ಹಾಕಿಟ್ಟು, ನಂತರ ಖಾದ್ಯದಲ್ಲಿ ಬಳಸುವುದು. ನೀರಲ್ಲಿ ಹಾಕಿಟ್ಟ ಪ್ರತಿದಿನವೂ ನೀರು ಬದಲಾಯಿಸಬೇಕು. ನೀರಲ್ಲಿ ಹಾಕಿಡುವುದರಿಂದ ಅದರಲ್ಲಿನ ವಿಷ ತೊಳೆದುಹೋಗುವುದು. ಅವತ್ತೇ ಉಪಯೋಗಿಸಬೇಕು ಎನ್ನುವವರು ಕಣಿಲೆಯನ್ನು ಬೇಯಿಸಿ ನೀರು ತೆಗೆದು ನಂತರ ಉಪಯೋಗಿಸಬಹುದು. ಕಣಿಲೆ ಉಷ್ಣಾಂಶವಾಗಿರುವುದರಿಂದ ಹೆಚ್ಚಾಗಿ ಕಣಿಲೆಯ ಜೊತೆಗೆ ಮೊಳಕೆ ಬರಿಸಿದ ಹೆಸ್ರು ಕಾಳನ್ನು ಹಾಕಿ, ವಿವಿದ ರುಚಿಯಾದ ಖಾದ್ಯಗಳನ್ನು ತಯಾರಿಸುತ್ತಾರೆ. ಕಣಿಲೆಯಿಂದ ಉಪ್ಪಿನಕಾಯಿ, ಪಲ್ಯ, ಸಾಂಬಾರು ಇತ್ಯಾದಿಗಳನ್ನು ಮಾಡುತ್ತಾರೆ.
          ಬಿದಿರು ಹೂ ಬಿಡುವ ಸಸ್ಯರಾಶಿ. ಒಮ್ಮೆ ಒಂದು ಬಿದಿರಿನ ಮೆಳೆ ಹೂಬಿಟ್ಟರೆ ನಂತರ ಆ ಬಿದಿರುಗಳೆಲ್ಲಾ ಸಾಯುತ್ತವೆ. ಹೂಬಿಟ್ಟ ಬಿದಿರಿನ ಮೆಳೆಯಲ್ಲಿ ಮತ್ತೆಂದೂ ಕಣಿಲೆ ಹುಟ್ಟುವುದಿಲ್ಲ. ಇತ್ತೀಚೆಗೆ ಹೆಚ್ಚಿನ ಬಿದಿರ ಮೆಳೆಗಳು ಹೂಬಿಟ್ಟು ಸಾಯುತ್ತಿವೆ. ಹಾಗಾಗಿ ಕಣಿಲೆಯ ಸಂಖ್ಯೆಯೂ ಕಡಿಮೆಯಾಗಿವೆ ಎನ್ನಬಹುದು.

ಬಲು ರುಚಿಕರ ಕುಂಟಾಲ ಹಣ್ಣು


          ವರ್ಷದಲ್ಲಿ ಒಂದೇ ಬಾರಿ ಹಣ್ಣು ಬಿಡುವ ಇದು, ಮಳೆಗಾಲವನ್ನು ತನ್ನ ಹಣ್ಣಿನ ಪರ್ವಕಾಲಕ್ಕೆ ಆಯ್ಕೆ ಮಾಡಿಕೊಂಡಿದೆ. ಎಲ್ಲರಿಗೂ ಬಲು ಇಷ್ಟದ ಹಣ್ಣು. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗಂತು ಅತಿ ಪ್ರಿಯವಾದ ಹಣ್ಣು ಈ ಕುಂಟಾಲ ಹಣ್ಣು. ಒಥಿಡಿಣಚಿಛಿeಚಿe ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು Syzygium caryophyllatum L.  ಭಾರತದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೇರಳವಾಗಿ ಕಂಡು ಬರುವ ಇದು, ಕೇರಳ, ಕರ್ನಾಟಕ, ತಮಿಳುನಾಡಿನ ಘಟ್ಟ ಪ್ರದೇಶಗಳಲ್ಲಿ ಕಾಡಿನಂತೆ ಬೆಳೆದು ನಿಂತಿವೆ. ಆದರೆ ಇದರ ತವರೂರು ಶ್ರೀಲಂಕಾದ ಪಶ್ಚಿಮ ಘಟ್ಟದ ಒಳ ಹೊರ ತಪ್ಪಲು, ಜಾವ, ಬರ್ನಿಯಾ ದ್ವೀಪಗಳು. ಪೊದೆಯಂತೆ ಬೆಳೆದು ಕಾಡನ್ನೇ ಸೃಷ್ಟಿಸುವ ಕುಂಟಾಲ ಗಿಡ ಕುರುಚಲು ಸಸ್ಯಗಳ ಜಾತಿಗೆ ಸೇರಿದೆ. ಇದನ್ನು ಕನ್ನಡದಲ್ಲಿ ಕುಂಟಾಂಗಿಲ, ಕುಂಟು ನೇರಳೆ, ನಾಯಿನೇರಳೆ, ಸಂಸ್ಕøತದಲ್ಲಿ ಭೂಮಿಜಂಬು, ತುಳುವಲ್ಲಿ ಕುಂಟಲ ಎಂದು ಕರೆಯಲಾಗುತ್ತದೆ.
          ಜೂನ್ ತಿಂಗಳಲ್ಲಿ ಕುಂಟಾಲ ಹಣ್ಣಿನ ಋತು ಪ್ರಾರಂಭ. ಎಪ್ರಿಲ್ ತಿಂಗಳ ಅಂತ್ಯದಲ್ಲಿ ಗಿಡ ಮರಗಳೆಲ್ಲವೂ ಹೂವಿನಿಂದ ಕಂಗೊಳಿಸುವ ದೃಶ್ಯ. ಅಂದಿನಿಂದ ಪಕ್ಷಿಗಳ ಜೊತೆಗೂಡಿ ಮಕ್ಕಳೂ ಕೂಡ ಹೂ ಕಾಯಾಗಿ, ಕಾಯಿ ಹಣ್ಣಾಗಲು ದಿನ ಲೆಕ್ಕ ಹಾಕಲು ಶುರು ಮಾಡುತ್ತಾರೆ. ಯಾಕೆಂದರೆ ಇದರ ಹಣ್ಣುಗಳು ಸವಿಯಲು ಅತ್ಯಂತ ರುಚಿಕರ ಮತ್ತು ಅದನ್ನು ತಿಂದೊಡನೆ ತಿಂದವರ ಬಾಯಿಯೂ ನೇರಳೆ ಮಯವಾಗಿಬಿಡುತ್ತದೆ. ಮಕ್ಕಳಿಗಂತು ನಾಲಗೆಯ ಬಣ್ಣವನ್ನು ಕಡುವಾಗಿಸಿಕೊಳ್ಳುವಲ್ಲಿ ಪೈಪೋಟಿ.
          ಕುಂಟಾಲ ಮರಗಳು ಸಣ್ಣ ಪೊದೆಯಾಗಿಯೂ ಹಬ್ಬಿಕೊಳ್ಳುತ್ತವೆ. ಕೆಲವೊಂದು ಮರವಾಗಿ ಎತ್ತರಕ್ಕೂ ಬೆಳೆದು ನಿಲ್ಲುತ್ತವೆ. ಕುಂಟಾಲ ಮರದ ಎಳೆ ಚಿಗುರು ತಿನ್ನಲು ರುಚಿಕರವೂ ಹೌದು. ಜೊತೆಗೆ ಪರಿಮಳ ಭರಿತವೂ ಹೌದು. ಬಾಲ್ಯದಲ್ಲಿ ಅಮ್ಮ ಕುಂಟು ನೇರಳೆಯ ಎಳೆಚಿಗುರಿನಿಂದ ಜೀರಿಗೆ, ಹಾಲು ಸೇರಿಸಿ ಆಹಾ! ಘಮ್ಮೆನ್ನುವ ರುಚಿಯಾದ ಕಾಫಿ ಮಾಡಿಕೊಡುತ್ತಿದ್ದ ನೆನಪು. ಅದು ಮಾತ್ರವಲ್ಲದೆ ಶಾಲೆಯಿಂದ ಮನೆಗೆ ಹೋಗಿ ಬರುವ ದಾರಿಯಲ್ಲಿ ಸಿಗುವ ಕುಂಟು ನೇರಳೆಯ ಚಿಗುರನ್ನು ಗೆಳಯರೆಲ್ಲಾ ಸೇರಿ ಬಾಯೊಳಗೆ ಹಾಕಿ ಜಗಿಯುತ್ತಾ ಬರುತ್ತಿದ್ದೆವು.
          ಮರವು ಗೊಂಚಲಾಗಿ ಬಿಳಿ ಬಣ್ಣದ ಹೂಗಳನ್ನು ಬಿಟ್ಟು, ಸುವಾಸನೆ ರಹಿತವಾಗಿವೆ. ಹಸಿರಾಗಿರುವ ಕಾಯಿಗಳಿಗಿಂತ, ಕಣ್ಣು ಕುಕ್ಕುವಂತೆ ಕಡು ನೇರಳೆ ಬಣ್ಣದಿಂದ ಕಂಗೊಳಿಸುವ ಹಣ್ಣನ್ನು ಗೊಂಚಲು ಗೊಂಚಲಾಗಿ ನೋಡುವಾಗ, ಬಾಯಿಯಲ್ಲಿ ನೀರೂರಿ, ಒಮ್ಮೆಲೆ ಗೊಂಚಲಿನ ಎಲ್ಲಾ ಹಣ್ಣುಗಳನ್ನು ಬಾಯೊಳಗೆ ಹಾಕಿ ಬಿಡುವ ಮನಸ್ಸಂತು ಖಂಡಿತಾ ಆಗುವುದು. ವಯಸ್ಸಿನ ಅರಿವನ್ನೂ ಮರೆಸಿಬಿಡುತ್ತವೆ. ಸಣ್ಣ ಸಣ್ಣ ಹಣ್ಣುಗಳಾಗಿರುವುದರಿಂದ ಏಕಕಾಲದಲ್ಲಿ ಬಾಯಿ ತುಂಬಾ ಸುಮಾರು ಹತ್ತು ಹಣ್ಣುಗಳನ್ನು ಹಾಕಿಕೊಂಡು ರುಚಿ ಸವಿಯಬಹುದು.
          ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಕಾಯಿಗಳು ಹಣ್ಣಾಗಲು ಶುರುವಾಗುತ್ತವೆ. ಮಳೆ ನೀರು ಬಿದ್ದ ಮೇಲೆ ಒಮ್ಮೆಲೆ ಎಲ್ಲಾ ಕಾಯಿಗಳು ಹಣ್ಣಾಗತೊಡಗುತ್ತವೆ. ಆಗ ನೋಡಬೇಕು, ಮರದ ತುಂಬಾ ಕಪ್ಪು ಮಣಿ ಪೋಣಿಸಿದಂತೆ, ಮಣಿ ಮೇಲೆ ಮಳೆ ಹನಿ ನಿಂತು ಸುಂದರವಾಗಿ ಮಿನುಗುವ ಸೊಬಗು. ಮಳೆ ಬೀಳುವ ಮೊದಲು ಬಲಿತ ಹಣ್ಣುಗಳು ಬಹಳ ರುಚಿಕರ. ಮಳೆ ನೀರು ಬಿದ್ದ ಮೇಲೆ ಹಣ್ಣುಗಳೆಲ್ಲವೂ ಮಳೆ ನೀರು ತುಂಬಿ, ಉಬ್ಬಿ ನೋಡಲು ಗುಂಡು ಗುಂಡಾಗಿ ಹೊಳೆಯುತ್ತಾ, ಹೊಳೆಯುತ್ತಾ ಕಣ್ಮನಗಳನ್ನು ಸೆಳೆಯುತ್ತವೆ. ಆದರೆ ರುಚಿ ಕಳೆದುಕೊಂಡು ನೀರು ತುಂಬಿ ಸಪ್ಪೆಯಾಗಿರುತ್ತವೆ. ಆದರೆ ಪೂರ್ತಿ ರುಚಿ ಕಳೆದುಕೊಳ್ಳುವುದಿಲ್ಲ. ಎಲ್ಲಾ ಮರದ ಹಣ್ಣುಗಳು ಒಂದೇ ರೀತಿಯಾದ ರುಚಿ ಹೊಂದಿರುದಿಲ್ಲ, ಕೆಲವು ಸಿಹಿಯಾದರೆ, ಕೆಲವು ಹುಳಿಯಾಗಿರುತ್ತವೆ. ಇನ್ನು ಕೆಲವು ರಸಭರಿತವಾಗಿರುತ್ತವೆ. ಮಳೆ ನೀರು ತುಂಬಿದ ಕುಂಟಾಲ ಹಣ್ಣು ತಿನ್ನು ಎನ್ನುತ್ತಿರುತ್ತವೆ, ತಿಂದರೆ ಶೀತ, ಕೆಮ್ಮು, ಗಂಟಲು ನೋವು ನಮ್ಮ ಬೆನ್ನು ಹಿಡಿಯುವುದು. ಸ್ವಲ್ಪ ತಿನ್ನುವುದರಲ್ಲಿ ಯಾವುದೇ ದೋಷವಿಲ್ಲ.
                    ತಿರುಳಿನಿಂದ ಕೂಡಿರುವ ಈ ಕುಂಟಾಲ ಹಣ್ಣಿನೊಳಗೆ ಸಣ್ಣದೊಂದು ಬೀಜ. ಆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಅದರಿಂದಲೂ ಕಾಫಿ ಮಾಡಿ ಕುಡಿಯಬಹುದು. ಚಿಗುರೆಲೆಯಿಂದ ಜೀರಿಗೆ ಸೇರಿಸಿ ಹಾಲು ಹಾಕಿ ಮಾಡಿದ ಕಾಫಿಯ ಮುಂದೆ ಉಳಿದೆಲ್ಲವೂ ಶೂನ್ಯ. ಹಿಂದೆ ಹಳ್ಳಿಯವರು ನಿರ್ವಿಷವಾಗಿ ದೊರೆಯುತ್ತಿದ್ದ ಈ ಕುಂಟಾಲದ ಚಿಗುರಿನಿಂಲೇ ಕಾಫಿ ಮಾಡಿ ಕುಡಿಯುತ್ತಿದ್ದರು. ಆರೋಗ್ಯಕರವೂ ಆಗಿತ್ತು. ಇಂದಿಗೂ ಹಳ್ಳಿ ಭಾಗದಲ್ಲಿ ಈ ರೀತಿಯ ಕಾಫಿ ಮಾಡಿ ಕುಡಿಯುವವರಿದ್ದಾರೆ. ಕುಂಟಾಲ ಚಿಗುರೆಲೆಯಿಂದ ಕಷಾಯ ಮಾಡಿ ಅದರಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ. ವಸಡು ಗಟ್ಟಿಯಾಗುತ್ತದೆ. ಜೊತೆಗೆ ಬಾಯಿ ವಾಸನೆಯನ್ನು ಹೋಗಲಾಡಿಸುವ ಉತ್ತಮ, ರಾಸಾಯನಿಕ ಮುಕ್ತ ಮೌತ್ ಫ್ರೆಶ್‍ನರ್ ಕೂಡ, ಎಂಬುದು ಹಳ್ಳಿಗರ ನಂಬಿಕೆ. ಇದರ ಚಿಗುರಿನಿಂದ ಮಾಡಿದ ಚಟ್ನಿಯು ಬಲು ರುಚಿಕರ. ಸಣ್ಣ ಮಕ್ಕಳ ನಾಲಗೆಯಿಂದ ಅಗ್ರ ನಿವಾರಿಸಲು ಕೇಪುಳ, ನೆಕ್ಕರೆ, ಮತ್ತು ಇತರ ಚಿಗುರುಗಳ ಜೊತೆಗೆ ಕುಂಟಾಲದ ಚಿಗುರನ್ನೂ ಸೇರಿಸಿ ಜಜ್ಜಿ ರಸ ತೆಗೆದು ಶುದ್ಧ ಬಟ್ಟೆಗೆ ರಸವನ್ನು ಹಾಕಿ ನಾಲಗೆಯನ್ನು ಉಜ್ಜುತ್ತಾರೆ. ಕಫದೋಷಕ್ಕೂ ಇದನ್ನು ಉಪಯೋಗಿಸುತ್ತಾರೆ. ದೇಹದಿಂದ ನಂಜಿನಂಶವನ್ನು ಹೋಗಲಾಡಿಸುತ್ತದೆ. ಇದರ ರೆಂಬೆಗಳನ್ನು ಬಳ್ಳಿ ತರಕಾರಿಗಳಿಗೆ ಆಧಾರಗಳಾಗಿ ಬಳಸಲಾಗುತ್ತದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳಾದಾಗ ಇದರ ಚಿಗುರೆಲೆಯ ಕಷಾಯವೇ ಔಷಧಿಯಾಗಿತ್ತು ಎನ್ನುತ್ತಾರೆ ಹಿರಿಯರು.
          ಕಾಡುಗಳೇ ನಾಶವಾಗುತ್ತಿರುವ ಈ ಹೊತ್ತಲ್ಲಿ, ಹೆಚ್ಚಿನವರಿಗೆ ಇದು ಅಪರೂಪವಾಗಿ ಬಿಟ್ಟಿದೆ. ಅದಕ್ಕಿಂತ ಹೆಚ್ಚಾಗಿ ಪೇಟೆ ಹಣ್ಣುಗಳ ಮಧ್ಯೆ ಈ ಕಾಡು ಹಣ್ಣುಗಳಿಗೆ ಬೆಲೆಯೇ ಇಲ್ಲವಾಗಿದೆ. ಮತ್ತು ಅಪರಿಚಿತವಾಗಿವೆ.

Saturday, 22 April 2017

ಬಹು ಬೇಡಿಕೆಯ ನೇರಳೆ

ನೇರಳೆ ಹಣ್ಣನ್ನು ಸಾಸ್, ಜಾವರ್, ಜೆಲ್ಲಿ, ಪಾನಕ, ಶರಬತ್ತು ತಯಾರಿಸಲು ಉಪಯೋಗಿಸುತ್ತಾರೆ. ಇದರ ಎಲೆಯನ್ನು ಜಾನುವಾರುಗಳಿಗೆ ಮೇವಾಗಿ ಮತ್ತು ರೇಷ್ಮೆಹುಳುಗಳಿಗೆ ಆಹಾರವಾಗಿಯೂ ಬಳಸುತ್ತಾರೆ.

ತನ್ನೊಳಗೆ ಔಷಧೀಯ ಗುಣಗಳನ್ನು ಹುದುಗಿಸಿಕೊಂಡಿರುವ ಈ ಮರಕ್ಕೆ ಪ್ರಸ್ತುತ ತುಂಬಾ ಬೇಡಿಕೆ ಇದೆ. ಅದರಲ್ಲೂ ಡಯಾಬಿಟಿಸ್‍ಗೆ ಇದು ರಾಮಬಾಣವಾಗಿರುವುದರಿಂದ ಇದರ ಹಣ್ಣು, ಬೀಜ, ತೊಗಟೆ, ಎಲೆ ಎಲ್ಲಾ ಭಾಗಗಳಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ತಿಂದಾಗ ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯನ್ನು ನೀಡುವ ಈ ಹಣ್ಣು ನಾಲಗೆಗೂ ರಂಗನ್ನು ನೀಡುತ್ತದೆ. ಕಪ್ಪು ವರ್ಣದ ಈ ಹಣ್ಣು ಸಿಹಿಯಾಗಿರುವುದು ಮಾತ್ರವಲ್ಲದೆ ಪೋಷಕಾಂಶ ಭರಿತವೂ ಹೌದು. ಇಂಡೋನೇಷ್ಯಾ ಮತ್ತು ಭಾರತ ಮೂಲದ ಹಣ್ಣಾಗಿರುವ ನೇರಳೆ ಹಣ್ಣು ಈಗ ದಕ್ಷಿಣ ಅಮೇರಿಕಾದ ಸುರಿನಾಮ್ ಲ್ಲಿ ಹೇರಳವಾಗಿ ಬೆಳೆಯುತ್ತದೆ. ಪಕ್ಷಿಗಳು ಇದರ ಹಣ್ಣನ್ನು ತಿಂದು ಬೀಜಗಳನ್ನು ಕೊಂಡುಹೋಗಿ ಹಾಕುವ ಕಾರಣ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಮತ್ತು ಕಾಡು ಹಣ್ಣಾಗಿಯೆ ಇತ್ತು. ಆದರೆ ಪ್ರಸ್ತುತ ನೇರಳೆ ಮರದ ಪ್ರತಿಯೊಂದು ಭಾಗಕ್ಕೂ ಬೇಡಿಕೆ ಇರುವುದರಿಂದ ಇದನ್ನು ಕೃಷಿ ಮಾಡುವುದು ಹೆಚ್ಚಾಗಿದೆ. ಕಾಡುಹಣ್ಣು ನಾಡಿನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಸಾಮಾನ್ಯವಾಗಿ ಜಾವಾಪ್ಲಮ್, ಜಂಬುಲ್, ಬ್ಲಾಕ್‍ಬೆರಿ, ಜ್ಯಾಂಬೋಲನ್, ಜಮೈಕಾ, ಡ್ಯಾಮನ್ಸ್ ಹಣ್ಣು, ನೇರಳೆಹಣ್ಣು ಎಂದು ಕರೆಯಲ್ಪಡುವ ಇದು ಮಿಟ್ರ್ಲ್ ಕುಟುಂಬದ ಮಿರ್ಟೇಸಿಯಾ ಜಾತಿಗೆ ಸೇರಿದ ಒಂದು ಮರ. ಇದರ ವೈಜ್ಞಾನಿಕ ಹೆಸರು ಸೈಯೀಸಿಯಂ.

ಉಷ್ಣವಲಯದ ಮರವಾದ್ದರಿಂದ ಉಷ್ಣವಲಯದ ಹವಾಮಾನದಲ್ಲಿ ಬಹುಸುಲಭವಾಗಿ ಬೆಳೆಯುತ್ತದೆ.  ನಿತ್ಯಹರಿದ್ವರ್ಣ ಉಷ್ಣವಲಯದ ಮರಗಳು 50 ರಿಂದ 100 ಅಡಿ ಎತ್ತರ ಬೆಳೆಯುತ್ತದೆ. ನೇರಳೆ ಮರದ ಎಲೆಗಳು ದಟ್ಟವಾಗಿ, ನಯವಾಗಿ, ಉದ್ದವಾಗಿರುತ್ತವೆ. ಅವುಗಳು ಒಂದು ತೆರನಾದ ಟರ್ಪಂಟೈನ್ ವಾಸನೆಯನ್ನು ಹೊಂದಿರುತ್ತದೆ. ಮರದ ಕಾಂಡ  ಅಗಲವಾಗಿ ಬೆಳೆದು ಚಿಪ್ಪುಗಳುಳ್ಳ ಬೂದು ಮಿಶ್ರಿತ ಕಂದು ದಪ್ಪ ತೊಗಟೆಗಳಿಂದ ಆವರಿಸಿರುತ್ತದೆ. ಫಿಲಿಪೈನ್ ಮಧ್ಯಭಾಗದಲ್ಲಿ ಮೇ ತಿಂಗಳಲ್ಲಿ ಹೂ ಬಿಟ್ಟು ಜೂನ್‍ನಲ್ಲಿ ಹಣ್ಣಾಗುತ್ತದೆ. ದಕ್ಷಿಣಫ್ಲೋರಿಡಾದಲ್ಲಿ ಜೂನ್ ತಿಂಗಳಲ್ಲಿ ಹೂಬಿಟ್ಟು ಜುಲೈಯಲ್ಲಿ ಹಣ್ಣಾಗುತ್ತದೆ. ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಹೂಬಿಟ್ಟು ಎಪ್ರಿಲ್ ತಿಂಗಳಲ್ಲಿ ಕಾಯಿ ಹಣ್ಣಾಗಿ ಮಾರುಕಟ್ಟೆಯಲ್ಲಿರುತ್ತದೆ. 

ಕವಲೊಡೆದ ಗೊಂಚಲುಗಳಲ್ಲಿ ಪರಿಮಳಯುಕ್ತ ಹಸಿರು ಮಿಶ್ರಿತ ಬಿಳಿ ಹೂಗಳನ್ನು ಬಿಟ್ಟು ಎರಡು ವಾರಗಳಲ್ಲಿ ಸಣ್ಣ ಕಾಯಿಗಳು ಕಾನಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಮುಂದೆ ಎರಡು ವಾರಗಳಲ್ಲಿ ಕಾಯಿ ಬೆಳೆದು ಹಸಿರು ಬಣ್ಣದಿಂದ ತಿಳಿನೇರಳೆ ಬಣ್ಣಕ್ಕೆ ಬಂದು ಕಾಯಿ ಹಣ್ಣಾಗುವಾಗ ಕಪ್ಪ ಬಣ್ಣಕ್ಕೆ ತಿರುಗುತ್ತದೆ. ರಸಭರಿತ ಹಣ್ಣಿನ ತಿರುಳು ಕಡುನೇರಳೆ ಬಣ್ಣದಲ್ಲಿದ್ದು ತಿಂದಾಗ ನಾಲಗೆಗೆ ನೇರಳೆಬಣ್ಣ ಹಚ್ಚಿದಂತಾಗುತ್ತದೆ. ಹಣ್ಣಿನ ತಿರುಳು ಗಾಲಿಕ್ ಆಮ್ಲ ಮತ್ತು ಟ್ಯಾನಿನ್ ಅಂಶವನ್ನು ಹೊಂದಿದೆ. ಹಣ್ಣು ಒಂದೇ ಬೀಜವನ್ನು ಹೊಂದಿರುತ್ತದೆ. 

ಈ ಮರದ ಎಲ್ಲಾ  ಭಗಗಳು ಔಷಧೀಯ ಗುಣಗಳನ್ನು ಹೊಂದಿದೆ. ಹಿಂದಿನಿಂದಲೂ ಇದು ಪರ್ಯಾಯ ಔಷಧಿಯಾಗಿ ಉಪಯೋಗಿಸಲ್ಪಡುತ್ತಿದೆ. ಪ್ರಸ್ತುತ ಡಯಾಬಿಟಿಸ್ (ಸಕ್ಕರೆಖಾಯಿಲೆ) ಬಹುಪಾಲು ಜನರನ್ನು ಭಾದಿಸುತ್ತಿರುವ ಖಾಯಿಲೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ತ್ವರಿತವಾಗಿ ಕಡಿಮೆ ಮಾಡಲು, ತೊಗಟೆ, ಬೀಜ, ಎಲೆ, ಹೂ, ಎಲ್ಲವನ್ನೂ ಉಪಯೋಗಿಸಲಾಗುತ್ತದೆ. ಹಾಗಾಗಿ ನೇರಳೆಮರಕ್ಕೆ ಅದರಲ್ಲೂ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ.

ಇದಲ್ಲದೆ ಇದರ ತೊಗಟೆ ಉರಿಯೂತಕ್ಕೆ, ರಕ್ತಹೀನತೆಗೆ, ಇದರ ಹಣ್ಣು ಬೇದಿ, ಕಿಬ್ಬೊಟ್ಟೆ ನೋವಿಗೆ, ಹಣ್ಣಿನ ರಸ ವಸಡಿನ ರಕ್ತಸ್ರಾವಕ್ಕೆ, ಎಲೆಗಳು ಜ್ವರಕ್ಕೆ ಮತ್ತು ಬೀಜ ರಕ್ತದೊತ್ತಡಕ್ಕೆ ಬಹುಪಯೋಗಿ. ಫಿಲಿಪಿನ್ಸ್ ಮತ್ತು ಸುರಿನಾಮ್ ಗಳಲ್ಲಿ ನೇರಳೆ ಹಣ್ಣಿನಿಂದ ವೈನ್ ತಯಾರಿಸುತ್ತಾರೆ. ಸುರಿನಾಮ್ ದೇಶದಲ್ಲಿ ಮಗುವಿಗೆ ಜನ್ಮನೀಡಿದ ನಂತರ ಮತ್ತು ತಿಂಗಳ ಋತುಸ್ರಾವದ ನಂತರ ಇದರ ಎಲೆಯಿಂದ ಸ್ನಾನ ಮಾಡುತ್ತಾರೆ. ಇದರಿಂದ ದೇಹದ ವಾಸನೆ ಹೋಗುತ್ತದೆ. ಹಣ್ಣಿನಲ್ಲಿ ಗ್ಲೂಕೋಸ್ ಫ್ರಕ್ಟೋಸ್ ಸಮೃದ್ಧವಾಗಿದೆ. ಹಣ್ಣು ಮತ್ತು ಎಲೆ ಬಾಯಿಯ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ. ಇದು ವೈದ್ಯಕೀಯ ಇತಿಹಾಸವನ್ನು ಹೊಂದಿದೆ. ಇಷ್ಟೇ ಅಲ್ಲದೆ ಇದು ಭಾರತದಾದ್ಯಂತ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. 

ಬೀಜರಹಿತ ಹಣ್ಣುಗಳನ್ನು ಹೊಂದಿರುವ  ಕೆಲವು ಸಧಾರಿತ ಜನಾಂಗಗಳು ಇವೆ. ಭಾರತದಲ್ಲಿ ಗುಲಾಬಿ, ಸಿಹಿತಿರುಳು ಮತ್ತು ಸಣ್ಣಬೀಜಗಳು, ಕಪ್ಪುನೇರಳೆ ಅಥವಾ ನೀಲಿ ದೊಡ್ಡ ಆಯತಾಕಾರದ ಹಣ್ಣು, ಸಣ್ಣ ಆಮ್ಲ ಹಣ್ಣುಗಳ ತಳಿಗಳು ಇವೆ. ಕೃಷಿ ಮಾಡುವವರು ಬೀಜ ಹಾಗೂ ಕಸಿ ಮಾಡಿ ಸಸಿ ಮಾಡುತ್ತಾರೆ. ಸಮಾನ್ಯವಾಗಿ ನೇರಳೆ ಹಣ್ಣಿನ ಮರ 4 ರಿಂದ 7 ವರ್ಷಗಳಲ್ಲಿ ಹಣ್ಣು ಕೊಡಲು ಪ್ರಾರಂಭಿಸುತ್ತದೆ. ಕೃಷಿ ಮಾಡುವವರಿಗೆ ಕಪ್ಪು ಎಲೆ ಚುಕ್ಕೆ, ಹಸಿರು ಪೊರೆ ಅಥವಾ ಪಾಚಿಯ ಎಲೆಚುಕ್ಕೆ, ಅಣಬೆ ಬೇರು ಕೊಳೆತ ಆಂತ್ರಾಕ್ನೋನ್ ರೋಗಗಳ ತೊಂದರೆ ಇದೆ. ಮರ ಹೂಬಿಡುವ ಕಾಲದಲ್ಲಿ ಮರಪೂರ್ತಿ ಜೇನುಹುಳುಗಳಿಂದ ತುಂಬಿರುತ್ತವೆ. ಜೇನು ಕೃಷಿಗೆ ನೇರಳೆ ಹೂಗಳು ಹೆಚ್ಚು ಮಕರಂದವನ್ನು ಒದಗಿಸುತ್ತದೆ.

ನೇರಳೆ ಹಣ್ಣನ್ನು ಸಾಸ್, ಜಾವರ್, ಜೆಲ್ಲಿ, ಪಾನಕ, ಶರಬತ್ತು ತಯಾರಿಸಲು ಉಪಯೋಗಿಸುತ್ತಾರೆ. ಇದರ ಎಲೆಯನ್ನು ಜಾನುವಾರುಗಳಿಗೆ ಮೇವಾಗಿ ಮತ್ತು ರೇಷ್ಮೆಹುಳುಗಳಿಗೆ ಆಹಾರವಾಗಿಯೂ ಬಳಸುತ್ತಾರೆ. ಮರ ಹಗುರವಾಗಿರುವುದರಿಂದ ಕೃಷಿ ಉಪಕರಣಗಳ ಮತ್ತು ಬಂಡಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಹಿಂದೂ ಸಂಪ್ರದಾಯದ ಪ್ರಕಾರ ಇದರ ಹಣ್ಣು ಕಪ್ಪಾಗಿರುವುದರಿಂದ ಇದು ಶ್ರೀಕೃಷ್ಣನಿಗೆ ಪ್ರಿಯವೆಂದು ಪರಗಣಿಸಲ್ಪಡುತ್ತದೆ. ಇದು ಹೆಚ್ಚಾಗಿ ಹಿಂದೂ ದೇವಾಲಯಗಳ ಬಳಿ ಬೆಳೆಸಲಾಗುತ್ತದೆ. ಭಾರತದಲ್ಲಿ ಇದು ಎಲ್ಲಿ ಜಂಬೂನ್ ಎಂದು ಕರೆಯಲ್ಪಡುತ್ತದೋ ಅದರಲ್ಲಿ ಗುಜರಾತ್ ಒಂದು. ಅಲ್ಲಿ ಇದು ದೇವರುಗಳ ಹಣ್ಣು ಎಂದು ಪರಿಗಣಿಸಲ್ಪಡುತ್ತಿದೆ.


Tuesday, 28 February 2017

ಕಂಬನಿಯೊರೆಸುವ ಒಲವಿನ ಹೃದಯಕೆ


          ಹೌದು! ನೀನೆ ನನ್ನ ಮನದ ಭಾವನೆಗಳ ಸರದಾರ. ನೀನಾರೋ ನಾನಾರೋ ಜೊತೆಯಾದದ್ದೇ ಅಪರೂಪ. ನಿಜವಾದ ಪ್ರೀತಿ, ಸ್ನೇಹ ಎಂದರೆ ಏನು ಎಂದು ಅರ್ಥೈಸಿದವನೇ ನೀನು. ನಾವಿಬ್ಬರು ಮೊದಲ ಹೆಜ್ಜೆ ಇಟ್ಟದ್ದು ಸ್ನೇಹಿತರಾಗಿ. ಆದರೆ ಆ ಸ್ನೇಹ ಯಾವ ರೀತಿ ಪ್ರೀತಿಯ ಹೊಳಪನ್ನು ಪಡೆದುಕೊಂಡಿತೋ ಗೊತ್ತಿಲ್ಲ. ನಮ್ಮಿಬ್ಬರ ಅತಿಯಾದ ನಿಶ್ಕಲ್ಮಶ ಸ್ನೇಹದ ಸಲುಗೆಯೇ ಸ್ನೇಹಕ್ಕೆ ಪ್ರೀತಿಯ ಹೊಳಪನ್ನು ನೀಡುವ ಕೆಲಸ ಮಾಡಿರಬಹುದು ಅಲ್ಲವೇ? ಒಬ್ಬರಿಗೊಬ್ಬರ ಮುಖ ಪರಿಚಯವಿಲ್ಲದೆಯೇ ಸ್ನೇಹ ಗಾಢವಾಗಿ ಬೇರೂರಿತ್ತು. ನಮ್ಮಿಬ್ಬರ ನಡುವಿನ ಗೆಳೆತನದ ಭಾವಕ್ಕೆ ಮೊಬೈಲ್ ಕರೆಗಳು ಬಿಟ್ಟರೆ ಮೆಸ್ಸೇಜ್‍ಗಳು ಮಾತ್ರವೇ ಗಟ್ಟಿ ಸೇತುವೆಯಾಗಿದ್ದವು. ಯಾವುದೇ ಮೋಸ ಕಪಟವಿಲ್ಲದ ಸ್ನೇಹದಲ್ಲಿ ಯಾವುದನ್ನೂ ಮುಚ್ಚಿಡದೆ ನಿನ್ನ ಕೆಲಸ, ಮನೆ ಬಗ್ಗೆ, ಕಷ್ಟ ಸುಖ ನೋವುಗಳನ್ನೆಲ್ಲಾ ಮುಕ್ತವಾಗಿ ನನ್ನೊಡನೆ ಹಂಚಿಕೊಳ್ಳುತ್ತಿದ್ದೆ. ಎಷ್ಟೋ ಸಾರಿ ನೀನೇ ಹೇಳಿದ್ದಿದೆ ‘ನಾನು ಬೆಂಗಳೂರಿಗೆ ಕೆಲಸಕ್ಕೆಂದು ಬರುವ ಮುನ್ನ ಮನಸ್ಸಿಗೇನೇ ಬೇಜಾರಾದ್ರು ಅಮ್ಮನ ಮಡಿಲು ನಿರಾಳತೆಯನ್ನು ಒದಗಿಸುತ್ತಿತ್ತು. ಅದೇ ರೀತಿ ನನ್ನ ನೋವುಗಳಿಗೆ ನಿನ್ನ ಸಾಂತ್ವನದ ನುಡಿಗಳು ಅಮ್ಮಾ ಎನ್ನುವ ಬೆಚ್ಚನೆಯ ಭಾವವನ್ನು ನೀಡುತ್ತಿದೆ’ ಎಂದು ಆಗೆಲ್ಲಾ ನನಗೆ ನಾನೇ ಬೆನ್ನು ತಟ್ಟಿ ಬೀಗುತ್ತಿದ್ದೆ.
          ಮಾತಲ್ಲೇ ಮನೆಮಾಡುವ ಈ ಸ್ನೇಹಿತೆಯನ್ನು ನೋಡಬೇಕೆಂದು ಬೆಂಗಳೂರಿಂದ ಊರಿಗೆ ಬಂದಾಗ ನಮ್ಮಿಬ್ಬರ ಭೇಟಿಗೆ ಸಾಕ್ಷಿಯದದ್ದು ಶಿವ ಪರಮಾತ್ಮನ ದೇವಸ್ಥಾನ. ಭಗವಂತನ ಸಾನಿಧ್ಯದಲ್ಲಿ ನಮ್ಮಿಬ್ಬರ ಸ್ನೇಹ ಪ್ರೀತಿಯಾಗಿ ಹೊಸರೂಪ ಪಡೆಯಿತು. ಅದುವರೆಗೆ ಮೊಬೈಲ್‍ನಲ್ಲೇ ಗಂಟೆಗಳ ಸಮಯ ಪಟಾಕಿಯಂತೆ ಮಾತಿನ ಮುತ್ತುಗಳನ್ನೇ ಉದುರಿಸುತ್ತಿದ್ದ ನಮ್ಮಿಬ್ಬರಲ್ಲಿ ನೀರವ ಮೌನ. ಒಂದು ಹಂತದಲ್ಲಿ ಮೌನ ಉತ್ತರ ನಮ್ಮನ್ನು ತಡೆಹಿಡಿದಿತ್ತು. ಚಿಟಪಟ ಸುರಿಯುವ ಮಳೆಹನಿಯಂತೆ, ಮುತ್ತು ಪೋಣಿಸಿದಂತೆ ಸಾಲಾಗಿ ಸುರಿವ ಮಾತುಗಳೆಲ್ಲಾ ನಾಲಗೆ ತುದಿಯಲ್ಲಿ ಹಿಡಿದಿಟ್ಟಂತಾಗಿತ್ತು. ಪರಮೇಶ್ವರನ ಮುಂದೆ ನಾನೊಂದು ಕೊಡುವೆ ಅದನ್ನು ಜೋಪಾನವಾಗಿ ಕಾಪಾಡುತ್ತೀಯ ಎಂದು ಹಾರ್ಟ್‍ನ ಆಕಾರದ ಪೆಂಡೆಂಟನ್ನು, ಹೃದಯವನ್ನೇ ನನ್ನ ಕೈಯ್ಯಲ್ಲಿಡುವಂತೆ ನನ್ನ ಕೈಗಿತ್ತು, ನನ್ನನ್ನು ಮದುವೆಯಾಗುತ್ತೀಯ ಎಂದಾಗ ಮಾತಿನ ಮುತ್ತುಗಳೆಲ್ಲವೂ ಚಿಪ್ಪೊಳಗೆ ಮುದುಡಿ ಬಚ್ಚಿಟ್ಟುಕೊಂಡಂತಾಗಿತ್ತು. ನಿನಗೆ ಪ್ರೀತಿನಿವೇದನೆಯ ಚಡಪಡಿಕೆಯಾದರೆ ನನಗೆ ನಿನ್ನ ಭಾವನೆಗಳನ್ನು ಎದುರಿಸುವ ತಳಮಳ. ಆ ಮೌನದಲ್ಲಿ ನನ್ನ ಕಣ್ಣುಗಳೇ ನಿನಗೆ ಉತ್ತರ ನೀಡಿದ್ದವು. ನನ್ನ ಕಣ್ಣುಗಳ ಉತ್ತರಕ್ಕೆ ನಿನ್ನ ತುಟಿಗಳು ‘ಐ ಲವ್ ಯೂ’ ಎಂದು ಸಂತೋಷ ವ್ಯಕ್ತಪಡಿಸಿದ್ದವು. ಅದಕ್ಕೆ ನನ್ನ ತುಟಿಯಂಚಿನ ನಗು ಪ್ರತ್ಯುತ್ತರ.
          ಅದೇ ದಿನ ನೀನು ಬೆಂಗಳೂರಿಗೆ ಹೊರಡುವವನಿದ್ದೆ. ಆದರೆ ಆಗ ನನ್ನ ಪರಿಸ್ಥಿತಿ ಅದೆಷ್ಟು ಸಂದಿಗ್ಧ ಎಂದರೆ ನಿನ್ನನ್ನು ಬಿಟ್ಟು ತೆರಳಲು ಮನಸ್ಸೇ ಇರಲಿಲ್ಲ. ನಿನಗೂ ಹಾಗೇ ಆಗಿತ್ತು ಅನಿಸುತ್ತೆ. ಆದರೆ ನಿನಗದು ಅನಿವಾರ್ಯ. ನಿನ್ನ ಅನಿವಾರ್ಯವನ್ನು ಅರಿತೋ ಅರಿಯದೆಯೋ ಹೇಗೋ ಮನಸಿಲ್ಲದ ಮನಸಿನಲ್ಲಿ ಬೀಳ್ಕೊಟ್ಟು ಮನೆಗೆ ಬಂದಾಗ ಮನಸ್ಸಿನ ಭಾವನೆಗಳ  ಭಾರದಿಂದ ಕಣ್ಣಿಗೆ ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲಾಗದೆ, ಕೆನ್ನೆಯ ಪ್ರೀತಿ ಮಾತುಗಳಿಗೆ ಕಣ್ಣೀರು ಕೆನ್ನೆ ಜೊತೆ ಮಿಲನವಾಗಿತ್ತು. ಆ ಕಣ್ಣಿರಿಗಿದ್ದ ಭಾಗ್ಯ ಆಗ ನನಗಿಲ್ಲದಾಗಿತ್ತು.
          ನಾನು ಭಾವನಾಜೀವಿ. ಎದುರಿಸಲಾಗದ ನೋವುಗಳಿಗೆ ಮನಸ್ಸಲ್ಲೇ ಅತ್ತು ಕಂಬನಿ ಸುರಿಸುವುದಷ್ಟೇ ಗೊತ್ತು. ಆದರೆ ನೀನು ನಗುತ್ತಲೇ ಬದುಕುವವನು, ನೋವು ಮರೆಯುವವನು, ನೋವು ಮರೆಸುವವನು. ಅರಳುವ ಹೂಗಳ ಚಂದವನ್ನು ಬಣ್ಣಿಸುತ್ತಾ ನಿನ್ನ ಮಾತುಗಳಲ್ಲೇ, ಬೊಗಸೇ ಪ್ರೀತಿಯ ಸ್ಪರ್ಶದಲ್ಲೇ ನನ್ನ ನೋವುಗಳನ್ನೆಲ್ಲಾ ಮರೆಸುತ್ತಿರುವವನು. ಅಲ್ಲೆಲ್ಲೋ ದೂರದಲ್ಲಿರುವ ನಿನ್ನನ್ನು ನನ್ನ ವಿಶಾಲವಾದ ಹೃದಯಮಂದಿರದಲ್ಲಿ ಹಂತ ಹಂತವಾಗಿ ಬೆರೆಸುವ ಕೆಲಸ ಮಾಡಿದ್ದು ಈ ಮೊಬೈಲ್ ನಮ್ಮಿಬ್ಬರ ನಡುವಿನ ಪ್ರೀತಿ ಸೇತುವೆಯಾಗಿ ಮೊಬೈಲ್ ಅದೆಂಥಾ ಮಹತ್ಕಾರ್ಯ ಮಾಡಿದೆ ಅಲ್ವಾ!
ಅಂದಿನಿಂದ ನನಗೆ ಚಾತಕ ಪಕ್ಷಿಯ ಕೆಲಸ. ಸುರಿವ ಮಳೆಹನಿಗಾಗಿ ಭೂಮಿ ಕಾದಂತೆ, ಅರಳುವ ಹೂಗಳಿಗಾಗಿ ದುಂಬಿ ಕಾದಂತೆ ನನ್ನೊಳಗಿರುವ ನೀನು, ಹೊತ್ತು ತರುವ ಆ ಪ್ರೀತಿಯ ಮಹಾಪೂರಕ್ಕಾಗಿ ನಾನು ಹಾತೊರೆಯುತ್ತಿದ್ದೇನೆ. ಅದೊಂದು ದಿನ ಸರ್‍ಪ್ರೈಸ್ ಕೊಡುವ ನೆಪದಲ್ಲಿ ನೆನೆಯದೆ ಊರಿಗ ಬಂದಾಗ, ಆ ಕ್ಷಣದಲ್ಲಿ ನಿನ್ನನ್ನು ಕಂಡ ನನ್ನ ಕಂಗಳಿಗೆ, ತುಡಿಯುತ್ತಿದ್ದ ಮನದ ಭಾವನೆಗಳಿಗೆ, ಮರುಭೂಮಿಯಲ್ಲಿ ನೀರಿನ ಚಿಲುಮೆ ಪುಟಿದಂತಾಯಿತು. ಆಗಿನ ನನ್ನ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.
          ನಿಜ ಪ್ರೀತಿಯ ಭಾಷೆ ಅರಿಯೋಕ್ಕಾಗದ್ದು, ವಿವರಿಸಲಾಗದ್ದು ಅದನ್ನು ಅನುಭವಿಸಿಯೇ ತೀರಬೇಕು. ಅದು ನಿನ್ನಿಂದಲೇ ನನಗೆ ಅರಿವಾದದ್ದು. ನನ್ನದು ಹುಚ್ಚು ಮನಸ್ಸು. ಪ್ರೀತಿ ಎಂದರೆ ಕನಸಿನಲೋಕ. ಅದರಲ್ಲಿ ಎಲ್ಲವೂ ಸಂತೋಷ. ಎಂದೇ ನಾನು ಭಾವಿಸಿದ್ದೆ. ಅದಕ್ಕೆ ಕಾರಣವೂ ಇತ್ತು. ಕಾಲೇಜು ಓದುತ್ತಿರುವ ಹುಡುಗಿ ನಾನು. ಗೆಳೆಯ ಗೆಳತಿಯರ ಪ್ರೀತಿ ಪ್ರೇಮ ಸಲ್ಲಾಪಗಳ ಅರಿವು ಮಾತ್ರವೇ ಇತ್ತು. ಮೊದಮೊದಲಿಗೆ ನಿನ್ನ ಪ್ರತಿಯೊಂದು ಪ್ರೀತಿ ತುಂಬಿದ ಮಾತುಗಳು ನನ್ನಲ್ಲಿ ಸಂತೋಷವನ್ನು ಇಮ್ಮಡಿಯಾಗಿಸುತ್ತಿತ್ತು. ಅವುಗಳೆಡೆಯಲ್ಲಿ ನಿನ್ನ ಒಂದು ಬೈಗುಳದ ಮಾತು ಇಡೀ ದಿನ ನನ್ನನ್ನು ಕಣ್ಣಿರಿಡುತ್ತಾ ಕೂರುವಂತೆ ಮಾಡುತ್ತಿತ್ತು. ನನ್ನ ಮೂಗಿನ ಮೇಲಿನ ಕೋಪ, ನಿನ್ನ ಸಮಾಧಾನಿಸುವ ಮಾತುಗಳಿಗೆ ಪ್ರತಿಕ್ರಿಯಿಸುತ್ತಲೇ ಇರಲಿಲ್ಲ. ಆಗ ನನ್ನನ್ನು ಮುದ್ದಿಸುವ ನಿನ್ನ ಮುದ್ದು ಮನಸು ಅಮ್ಮನಂತೆ ಕಂಡಿತ್ತು. ‘ಪ್ರೀತಿ ಭಾವನೆಗಳ ಬಂಧನ ನಿಜ. ಆದರೆ ಜೀವನ ಹಾಗಲ್ಲ. ಜೀವನ ಎಂದರೆ ಕಷ್ಟ ಸುಖಗಳ ಸಮ್ಮಿಲನ ಆ ಕಷ್ಟ ಸುಖಗಳ ಸಾಗರದಲ್ಲಿ ನಾವಿಬ್ಬರು ಜೊತೆಯಾಗಿ ಈಜಿ ದಡ ಸೇರಬೇಕು. ಆಗಲೇ ನಮ್ಮ ಪ್ರೀತಿಗೆ ನಮ್ಮ ಜೀವನಕ್ಕೊಂದು ಸಾರ್ಥಕತೆ. ಮನಸ್ಸನ್ನು ಭಾವನೆಗಳ ಕೈಯ್ಯಲ್ಲಿ ಕೊಡಬೇಡ. ಬುದ್ಧಿಯಿಂದ ಮನಸ್ಸನ್ನು ಭಾವನೆಗಳಿಂದ ಹಿಡಿತದಲ್ಲಿಟ್ಟುಕೊಳ್ಳಬೇಕು. ಭಾವನೆಗಳ ಜೊತೆ ಬೆರೆತು ಓದಿಗೆ ಘಾಸಿ ಮಾಡಿಕೊಳ್ಳಬೇಡ. ನಾನೆಂದಿಗೂ ನಿನ್ನವನು. ನಾನು ನಿನ್ನನ್ನು ಮರೆತುಬಿಡುವುದಿಲ್ಲ. ಅದೇ ರೀತಿ ನೀನು ನನ್ನನ್ನು ತೊರೆದು ಬಿಡುವುದಿಲ್ಲ ಎಂಬ ನಂಬಿಕೆ ಇನಗಿದೆ ತಾನೇ? ಆ ನಂಬಿಕೆಯೊಂದಿದ್ದರೆ ಅದೇ ನಿಜವಾದ ಪ್ರೀತಿ. ಏಳು ಸಾಗರದಾಚೆ ಇದ್ದರೂ ನಮ್ಮನ್ನೆಂದೂ ಬೇರೆ ಆಗಲು ಬಿಡುವುದಿಲ್ಲ. ಪ್ರತಿಕ್ಷಣವೂ ನಾನು ನಿನ್ನ ಬಗ್ಗೆ, ನೀನು ನನ್ನ ಬಗ್ಗೆ ಕನಸು ಕಾಣುತ್ತಾ, ಯೋಚಿಸುತ್ತಿರುವುದು ಪ್ರೀತಿಯಲ್ಲ. ಆ ಪ್ರೀತಿಯಲ್ಲಿ ಭದ್ರತೆ ಇಲ್ಲ. ಕನಸು ಖಾಲಿಯಾದಾಗ ಪ್ರೀತಿ ಮರೆಯಾಗಿರುತ್ತದೆ. ನನ್ನ ಹೃದಯವನ್ನು ನಿನ್ನ ಹೃದಯದೊಳಗೆ ಆ ದಿನವೇ ಬಂಧಿಸಿ ಬೀಗ ಹಾಕಿ ಕೀಲಿಕೈ ಎಸೆದಾಗಿದೆ. ಬೆರೆತ ನಮ್ಮಿಬ್ಬರ ಹೃದಯಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಓದಿನತ್ತ ಗಮನ ಕೊಡು.’ ಎನ್ನುವಾ ನಿನ್ನ ಮಾತುಗಳು. ಆಗೆಲ್ಲಾ ನಿನ್ನ ಬುದ್ಧಿಮಾತುಗಳು ನಿನ್ನ ಮೇಲಿನ ಗೌರವವನ್ನು ದುಪ್ಪಟ್ಟು ಮಾಡುತ್ತಿತ್ತು.
          ನಿನ್ನದು ಮಗುವಿನಂಥಾ ಮನಸ್ಸು ಕಣೋ ನಾ ನೊಂದುಕೊಂಡರೆ ನೀನು ಕಣ್ಣೀರು ಸುರಿಸುವೆ. ನಿನ್ನ ಮನಸ್ಸಲ್ಲಿ ಮಡುಗಿರುವ ನೋವುಗಳನ್ನೆಲ್ಲಾ ಮರೆಮಾಚಿ ನಿಲ್ಲುವೆ. ಎಲ್ಲಿ ನಿನ್ನ ನೋವುಗಳಿಗೆ ನನ್ನ ಮನಸ್ಸು ಅಳುವುದೋ ಎಂದು ನಗು ನಗುತ್ತಲೇ ಮಾತಾಡಿಸುವೆ. ನಿನಗೋ ನನ್ನ ಮಡಿಲಲ್ಲಿ ಬೆಚ್ಚಗೆ ಮಲಗುವಾಸೆ. ನನಗೋ ನಿನ್ನ ಹೆಗಲಿಗೊರಗಿ ನಿಶ್ಚಿಂತೆಯಾಗಿ ನಿದ್ದೆ ಮಾಡುವಾಸೆ. ಪ್ರೀತಿ ಅನಿಯಮಿತವಾದಾಗ ಕೋಪ ಸಹಜವಂತೆ. ಆ ನಿನ್ನ ಕೋಪ ಕೆಂಡದಂತಿದ್ದರೂ ಅದು ಕ್ಷಣಿಕ ಅಷ್ಟೇ. ತಕ್ಷಣವೇ ಮುದ್ದು ಪೆದ್ದು ಪ್ರೀತಿ ಮಾತುಗಳಿಂದ ನಿನ್ನ ಕೆಂಡದಂಥ ಕೋಪದ ಮೇಲೋ ಅಥವಾ ನನ್ನ ಬಾಡಿದ ಮನಸ್ಸಿಗೋ ನೀರೆರೆಯುವ ಕೆಲಸ ಮಾಡುವೆ. ಈ ನಿನ್ನ ಅತಿಯಾದ ಮೌನದ ಪ್ರೀತಿಯ ಮುಂದೆ ನಾನು ಕುಬ್ಜಳು ಕಣೋ.
          ಮುಡಿಗೆ ಮಲ್ಲಿಗೆ ಮುಡಿಸಿದ, ನನ್ನೆದೆಯ ಸರದಾರ ನೀನು. ಅಂದು ಫೆಬ್ರವರಿ 14 ಪ್ರೇಮಿಗಳ ದಿನ. ಬೆಳ್ಳಂಬೆಳಗ್ಗೆಯೇ ಪ್ರೇಮಿಗಳ ದಿನಾಚರಣೆಯ ಶುಭಾಶಯದೊಂದಿಗೆ ಪ್ರೀತಿಯ ಮಾತುಗಳು ಹಾಗೂ ಸಿಹಿಮುತ್ತುಗಳು ರವಾನೆಯಾಗಿದ್ದವು. ದೂರವಿದ್ದರೂ ನಮ್ಮ ಆಚರಣೆಯೇನು ಕಡಿಮೆ ಇರಲಿಲ್ಲ.  ಜೊತೆಗೆ ಒಂದು ಶರತ್ತೂ ನಮ್ಮಿಬ್ಬರಲ್ಲಿ ರುಜುವಾಗಿತ್ತು ನೆನಪಿದೆ ತಾನೇ? ನೀನೆ ಹೇಳಿದಂತೆ ಪ್ರೇಮಿಗಳ ದಿನದಂದು ಇಬ್ಬರೂ ಒಂದೊಂದು ಉಡುಗೊರೆ ತೊಗೊಂಡು, ಯಾವ ಉಡುಗೊರೆಯೆಂದು ತಿಳಿಸದೆ, ನೀನು ಊರಿಗೆ ಬಂದಾಗ ವಿನಿಮಯ ಮಾಡಿಕೊಳ್ಳುವುದು. ಅದರಂತೆ ತೃತೀಯ ವರ್ಷದ ತರಗತಿಗಳೆಲ್ಲಾ ಮುಗಿದಿದೆ, ಪರೀಕ್ಷಾ ತಯಾರಿಯ ಜೊತೆ, ನಾನೊಂದು ಪುಟ್ಟ ಪ್ರೇಮದ ಕಾಣಿಕೆಯೊಂದನ್ನು ಹಿಡಿದು ಭಾವನೆಗಳನ್ನೆಲ್ಲ ಅದರಲ್ಲಿ ತುಂಬಿ, ನೀ ಹೊತ್ತು ತರುವ ಶೃತಿ ತುಂಬಿದ ಪೇಮದ ಕಾಣಿಕೆಯನ್ನು ಸ್ವೀಕರಿಸಿ ನನ್ನ ಭಾವನೆಗಳಿಗೆ ನಿನ್ನ ಶೃತಿ ಸೇರಿ ಭಾವಗೀತೆಯಾಗುವ ಆ ಘಳಿಗೆಗೆ ಕಾತರದಿಂದ ತುದಿಗಾಲಲ್ಲಿ ಕಾದು ನಿಂತಿರುವೆ. ನೀನು ನನ್ನ ಪ್ರೇಮದ ಕಾಣಿಕೆಗಾಗಿ ಓಡೋಡಿ ಬರುವೆ ತಾನೇ ಇನಿಯ...
ಇಂತಿ ನಿನ್ನೆದೆಯರಸಿ.

ಹನಿಯುದುರೋ ಮೋಡದಂತೆ...


          ನಿಜ. ಮೊದಲ ಪ್ರೀತಿ ಮೋಡದೊಳಗೆ ಮರೆಯಾದ ಸೂರ್ಯನಂತೆ. ಸೂರ್ಯ ಮರೆಯಾಗಿ ನೆರಳು ಆವರಿಸುತ್ತಿದ್ದಂತೆ, ಮೋಡವನ್ನು ಸರಿಸಿಕೊಂಡು ಸೂರ್ಯ ಮತ್ತೆ ಪ್ರಖರವಾಗಿ ಉರಿಯಲಾರಂಭಿಸುತ್ತಿದ್ದ. ಅದೇ ರೀತಿ ಪ್ರತಿಯೊಬ್ಬ ಹುಡುಗ ಹುಡುಗಿಯರು ಹೇಳುವುದು ಮೊದಲ ಪ್ರೀತಿಯನ್ನು ಮರೆತು ಬಿಡುವುದು ಅಸಾಧ್ಯದ ಮಾತು. ಈ ಪ್ರಪಂಚದಲ್ಲಿ ಮೊದಲ ಪ್ರೀತಿಯ ನೆನಪುಗಳನ್ನು ಏದೆಯೊಳಗೆ ಮೂಟೆಕಟ್ಟಿಟ್ಟು, ಬಿಚ್ಚಿಡಲು ಆಗದೆ ಇರುವವರು ಸಾವಿರಾರು. ಮೊದ ಮೊದಲು ಮತ್ತೊಂದು ಮನಸ್ಸಿಗಾಗಿ, ನಮ್ಮ ಪುಟ್ಟ ಮನಸ್ಸಿನ ಪ್ರೀತಿಯ ಕವಲುಗಳನ್ನು ಬಿಚ್ಚಿಟ್ಟುಕೊಂಡ, ಆ ಸವಿ ಸವಿ ನೆನಪುಗಳು ಸಾವಿರ ಕಾಲಕ್ಕೂ ಮರೆಯಲಾರದ ನೆನಪು. ಬಿಟ್ಟು ಬಿಟ್ಟು ಹನಿಯುದುರಿಸುವ ಕಾರ್ಮೋಡದಂತೆ. ಬೇಡ ಬೇಡವೆಂದರೂ ಪದೇಪದೇ ಕಾಡುತ್ತಿರುತ್ತವೆ. ಆದರೆ ಈ ಎಲ್ಲಾ ಭಾವನೆಗಳು, ಮೊದಲ ಪ್ರೀತಿ ಕೈಗೆಟುಕದೆ ಹೋದರೆ ಮಾತ್ರವೇ, ಪ್ರಥಮ ಪ್ರೇಮದ ನೋವು, ನಲಿವು ತಿಳಿಯಲು ಸಾಧ್ಯ.
          ಪ್ರಥಮ ಪ್ರೀತಿ ಜೊತೆಯಾಗೆದೆ ಇರಲು ಕಾರಣ ಬೇರೆ ಬೇರೆಯಾದರೂ ಅದರ ಹಿಂದಿನ ವೇದನೆ ಒಂದೇ. ಮಕ್ಕಳ ಪ್ರೀತಿ ಅಪ್ಪ ಅಮ್ಮನಿಗೆ ಸರಿ ತೋರದೆ, ಅಲ್ಲಿ ಪ್ರೇಮಿಗಳನ್ನು ಬೇರ್ಪಡಿಸುವ ವೈರಿಗಳು ಅಪ್ಪ ಅಮ್ಮ. ಇದು ಒಂದಾದರೆ, ಮತ್ತೊಂದೆಡೆ ಹುಡುಗ ಹುಡುಗಿಯರ ಮನಸ್ಸುಗಳ ನಡುವಿನ ಬಿರುಕು, ಅವರಿಗವರೇ ನಂತರ ವೈರಿಗಳು. ಇನ್ನೊಂದೆಡೆ ಜಾತಿ ಅಡ್ಡ ಬಂದುಬಿಡುವುದು. ಇದೆಂಥಾ ವಿಪರ್ಯಾಸ.
          ಆದರೆ ನಮ್ಮಿಬ್ಬರ ನಡುವಿನ ಅಂತರಕ್ಕೆ ಕಾರಣ ಏನೆಂದು ತಿಳಿಯಲು ನಾನು ಈ ನಿಮಿಷದವೆರೆಗೂ ಅಸಮರ್ಥಳು. ಯಾವ ಕ್ಷಣದಲ್ಲಿ ನಮ್ಮಿಬ್ಬರ ಪ್ರೀತಿ ವಿನಿಮಯಕ್ಕೆ ಪೂರ್ಣ ವಿರಾಮ ಬಿತ್ತೋ ನಾನರಿಯೆ.
          ಮೇಘಗಳ ಸಮ್ಮಿಲನಕೆ ಅರುಣರಾಗ ಮಿಡಿದ ಘಳಿಗೆ ನಮ್ಮಿಬ್ಬರ ಮನದಿಳೆಯಲ್ಲಿ ಪ್ರೇಮವರ್ಷಧಾರೆಯ ಸ್ಪರ್ಶವಾಗಿತ್ತು. ಆ ಮುಂಜಾನೆ ಸೂರ್ಯನಿಂದಲೇ ಪ್ರೇಮದಾವರೆಯ ದಳಗಳು ಚಿಗುರೊಡೆದಿದ್ದವು. ನನಗಾಗಿ ಒಂದು ಹೃದಯ ಮಿಡಿಯಬೇಕು, ನನ್ನೊಲವ ಜೇನಿಗಾಗಿ ತುಡಿಯಬೇಕು ಎನ್ನುವ ಆಸೆ ಹೊತ್ತ ವಯಸ್ಸಿನಲ್ಲೇ ನನ್ನೆದೆಯಲ್ಲಿ ಪ್ರೇಮಾಂಕುರವಾಗಿತ್ತು. ನಿನಗದು ಮೊದಲ ಪ್ರೀತಿ ಅಲ್ಲದೇ ಇರಬಹುದು. ಆದರೆ ನನ್ನೆದೆಯ ಪ್ರೇಮದ ಬಾಗಿಲನ್ನು ತಟ್ಟಿದವನು ನೀನೇ ಮೊದಲಿಗ.
          ನಮ್ಮಿಬ್ಬರ ಭೇಟಿ ಒಡನಾಟವು ಹತ್ತರ ಹರೆಯಕ್ಕೆ ಕಾಲಿಟ್ಟಿದ್ದರೂ ಪ್ರೀತಿಯ ಸ್ವಾತಿ ಮಳೆ ಸುರಿದೇ ಇರಲಿಲ್ಲ. ಅದ್ಯಾವ ಘಳಿಗೆಯಲ್ಲಿ ಸ್ವಾತಿಹನಿಯೊಂದು ಚಿಪ್ಪೊಳಗೆ ಬಿತ್ತೋ, ಹನಿಯನ್ನು ಚಿಪ್ಪು ಬಚ್ಚಿಟ್ಟುಕೊಂಡ ಕ್ಷಣವೇ ಪ್ರೀತಿಯ ಮುತ್ತಿನ ಜನನವಾಗಿತ್ತು. ನಮ್ಮಿಬ್ಬರ ನಡುವಿದ್ದ ಸಲಿಗೆಯ ಮರೆಮಾಚಿ ನಾಚಿಕೆ ಮನೆಮಾಡಿತ್ತು. ಪ್ರಥಮದ ಮಾತುಗಳಿಗೆ ತಡವರಿಸುತ್ತಿದ್ದ ತುಟಿಗಳು, ಅಂತರವನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡುತ್ತಾ ಬಂದವು. ಅಂತರ ಸರಿಯುತ್ತಿದ್ದಂತೆ ಮನಸ್ಸಲ್ಲಿ ಸಾವಿರಾರು ಆಸೆ, ಕನಸುಗಳ ಗೋಪುರವೇ ಸೃಸ್ಟಿಯಾಗಿತ್ತು. ತಡವರಿಸುತ್ತಿದ್ದ ತುಟಿಗಳಿಗೆ ನಂತರದಲ್ಲಿ ಮಾತುಗಳನ್ನು ಮಿತಗೊಳಿಸಲು ಗೊತ್ತಿರಲೇ ಇಲ್ಲ. ವಿರಾಮವಿಲ್ಲದೇ ಸಾಗುತ್ತಿದ್ದ ಮಾತು ಕೊನೆಗೊಂದು ದಿನ ಮಾತಿಗೂ ಸೇರಿಸಿ ಪ್ರೀತಿಗೂ ಪೂರ್ಣವಿರಾಮವಿಟ್ಟುಕೊಳ್ಳುತ್ತೇ ಎನ್ನುವ ಸತ್ಯದ ಅರಿವು ನನಗಾಗಲೇ ಇಲ್ಲ. ಮಿಂಚು ಹೊಡೆದಂತೆ, ಸುಳಿವಿಲ್ಲದಂತೆ ಘಟಿಸಿ ಹೋಗಿತ್ತು.
          ನಮಗರಿವಿಲ್ಲದಂತೆ ದಿನದಲ್ಲಿ ಅದೆಷ್ಟು ಸಂದೇಶಗಳು ರವಾನೆಯಾಗುತ್ತಿದ್ದವೋ, ಅದೆಷ್ಟು ಹೊತ್ತು ಮಾತಿನ ಹರಟೆ ನಡೆಯುತ್ತಿತ್ತೋ ಗೊತ್ತಿಲ್ಲ. ಮೌನದೊಳಗೆ ಸೇರದೆಯೇ ಮಾತನಾಡುತ್ತಲೇ ನನ್ನೊಳಗೆ ಒಂದಾಗುವ ನೀನು, ಹೊತ್ತು ತರುವ ಆ ಪ್ರೀತಿಯ ಕೆನೆಗಾಗಿ ಕೃಷ್ಣನಂತೆ ತವಕಿಸುತ್ತಿದ್ದೆ. ಆಗೆಲ್ಲಾ ವಿಶಾಲವಾದ ಈ ನನ್ನ ಹೃದಯದಲ್ಲಿ ನಿನ್ನದೇ ಸಿಂಹಪಾಲು.
ದೂರ ದೂರವಿದ್ದರೂ ಮಾತು, ಗಲಾಟೆ, ಹುಸಿ ಮುನಿಸು, ಚರ್ಚೆ, ಮತ್ತದೇ ಪ್ರೀತಿಯ ಮಹಾಪೂರಗಳಿಗೆಲ್ಲಾ ಎಡೆಯಿತ್ತು. ಆದರೆ ಈಗ ಅದೆಲ್ಲಾ ನನ್ನ ಕಣ್ಣೆದುರೆ ಮತ್ತೊಬ್ಬರ ಪಾಲಾಗಿದೆ. ಪ್ರೀತಿಯ ಒಂದು ವರ್ಷದಲ್ಲಿ ಕೇವಲ ಮೂರು ಭಾರಿಯ ನಮ್ಮಿಬ್ಬರ ಮುಖಾಮುಖಿ ಭೇಟಿ ಇಷ್ಟು ಗಾಢತೆಯನ್ನು ಸೃಷ್ಟಿಸಿದ್ದು ನಿಜಕ್ಕೂ ವಿಸ್ಮಯ. ಆ ಮೂರು ದಿನಗಳನ್ನು ಕೇವಲ ಎನ್ನುವ ಹಾಗಿಲ್ಲ. ಯಾಕೆಂದರೆ ಆ ಮೂರು ದಿನಗಳಲ್ಲಿ ನಾವಿಬ್ಬರು ಮಾತನಾಡಲು ಪಟ್ಟ ಪಾಡು ಮರೆಯಲಾರದ ನೆನಪು. ಆ ಮೂರು ಭೇಟಿ ನನ್ನ, ನಿನ್ನ ಮನೆಯಲ್ಲಿಯೇ ಆಗಿದ್ದ ಕಾರಣ ಮನೆಯವರ ಕಣ್ಣು ತಪ್ಪಿಸಿ ಮಾತನಾಡಲು ಹರಸಾಹಸ ಪಟ್ಟಿದ್ದೆವು, ನಮ್ಮಿಬ್ಬರ ಮೊದಲ ಭೇಟಿಯಲ್ಲಿ ನೀ ನೀಡಿದ ಪ್ರೇಮದ ಕಾಣಿಕೆ ತಾಳಿಭಾಗ್ಯವನ್ನೇ ನೀಡಿದಂತ್ತಿತ್ತು. ಆ ಮೂರು ದಿನಗಳು ನಮ್ಮಿಬ್ಬರ  ಪ್ರೀತಿಗೆ ಪುಷ್ಠಿಯನ್ನು ಒದಗಿಸಿದ್ದವು, ನಿನಗಿದು ನೆನಪಿದೆಯೋ ನಾನರಿಯೆ.
          ನೀ ಹರಿಸಿದ ಪ್ರೀತಿಯ ಧಾರೆ, ನನ್ನೆದೆಯಲ್ಲಿ ಅದೆಷ್ಟು ಹಸಿರನ್ನು ಚಿಗುರಿಸಿದ್ದವು, ಮದುವೆ ಎಂಬ ದೊಡ್ಡ ಕನಸನ್ನೇ ಸೃಷ್ಟಿಸಿ, ಬೆಳೆಸಿ ಪೋಷಣೆ ಮಾಡುತ್ತಾ ಬಂದಿತ್ತು. ನಾ ನಿನ್ನ ಮಡದಿಯಾಗಿ ಕನಸುಗಳ ಕವಲುಗಳನ್ನೇ ಹೆಣೆದಿದ್ದೆ. ಪ್ರೀತಿಗದುವೇ ಬೇರು. ಮದುವೆ ಎಂಬ ಬಂಧನ ಪ್ರೀತಿಯನ್ನು ಮತ್ತಷ್ಟು ಗಾಢವಾಗಿಸುತ್ತದೆ, ಆ ಮದುವೆ, ನಾ ನಿನ್ನ ಮಡದಿ ಎಂಬ ಕನಸುಗಳನ್ನೇ ಹೆಣೆಯುತ್ತಾ ಪ್ರೀತಿಯನ್ನು ಪೋಷಿಸಿದವಳು ನಾನು. ಆದರೆ ನಿನಗದು ತಿಳಿಯಲೇ ಇಲ್ಲ. ನೀ ಹರಿಸಿದ ಪ್ರೀತಿಯ ಧಾರೆ ನನ್ನೆದೆಯಲ್ಲಿ ಬತ್ತಿಹೋದರೂ, ಮಳೆ ಸುರಿದಿದೆ ಎನ್ನುವುದಕ್ಕೆ ಕುರುಹು ಈಗಲೂ ಇದೆ.
ಖಾಲಿಯಾದ ಬರಡು ಭೂಮಿಯಲ್ಲೂ ಈ ಪ್ರೀತಿ ಹರುಷದ ಬೀಜ ಬಿತ್ತುವುದಂತೆ, ಹಸಿರ ಹರಿಸುವುದಂತೆ, ಆದರೆ ಅದ್ಯಾಕೋ ನನ್ನ ಜೀವನದಲ್ಲಿ ಸುಳ್ಳಾಗಿ ಹೋಯ್ತು, ಮರುಭೂಮಿಯಲ್ಲಿ ನೀರ ಚಿಲುಮೆಯಂತೆ ಬಂದ ಪ್ರೀತಿ, ಕೊನೆಗೆ ಬರಡಾಗಿ ಹೋಯಿತು.
         ಬಿಡುವಿಲ್ಲದೆ ಮಾತನಾಡುತ್ತಿದ್ದವರಿಗೆ ಅಂತರ ನಿರಂತರವಾಗಿ, ಮಾತು ಮೌನವಾಗಿ ಹೋಯ್ತು. ಸುರಿಯುವ ಮಳೆಹನಿಗಾಗಿ ಭೂಮಿ ಕಾದಂತೆ, ಸೇರುವ ನದಿಗಳಿಗಾಗಿ ಸಾಗರ ತವಕಿಸಿದಂತೆ, ಬಿಡುವಿಲ್ಲದೆ ಹರಟುವ ದಿನ ಮತ್ತೆ ಬರುತ್ತವೆ ಎಂದು ಕಾಯುತ್ತಿದ್ದ ನನಗೆ, ನಿನ್ನ ಪ್ರೀತಿ ಮರೀಚಿಕೆಯಾಗಿಯೇ ಉಳಿಯಿತು. ಆ ದಿನಗಳಲ್ಲಿ ತಲೆದಿಂಬುಗಳೊರೆಸಿದ ನನ್ನ ಕಣ್ಣ ಹನಿಗಳೆಷ್ಟೋ, ಕಣ್ಣೆವೆ ಮುಚ್ಚದ ರಾತ್ರಿಗಳೆಷ್ಟೋ, ಮೈಮರೆತು ದುಃಖಿಸಿದ ಕ್ಷಣಗಳೆಷ್ಟೋ ಅಗಣಿತ. ಅರಳುವ ಹೂವಿಗೂ ಕೂಡ ದುಂಬಿಯ ಜೊತೆ ನಂಟಿದೆಯಂತೆ, ಆದರೆ ಅದೆಷ್ಟು ಹೊತ್ತು? ಹೂವು ಬಾಡಿ ಮುದುಡುವವರೆಗೆ, ಅಥವಾ ಹೂವಲ್ಲಿರೋ ಮಕರಂದ ಕರಗುವವರೆಗೆ, ಅದೇ ರೀತಿ ನನ್ನ ಬಾಳು.
          ನಿನಗದು ಸಂತಸದ ದಿನಗಳು. ಅಪ್ಪ ಅಮ್ಮ ಸೇರಿ ಚಂದದೊಂದು ಹುಡುಗಿಯನ್ನು ಹುಡುಕಿ ಮದುವೆ ನಿಶ್ಚಿತಾರ್ಥವನ್ನು ಮಾಡಿಬಿಟ್ಟರು. ಆದರೆ ನನಗದು ಹೃದಯ ಕರಗುವ ವಿಷಯ. ಅತ್ತು ಅತ್ತು ಕಣ್ಣೀರಿಟ್ಟು, ಕಣ್ಣೀರನ್ನು ಮರೆಮಾಚಿ, ಹೃದಯವ ಬಿಗಿಹಿಡಿದು ಅತ್ತರೂ, ನೀನಿನ್ನು ನನ್ನವನಲ್ಲ, ಎನ್ನುವ ಸತ್ಯ ಅರಗಿಸಿಕೊಳ್ಳುವ ಹೊತ್ತಿಗೆ ಕಣ್ಣೀರು ಬತ್ತಿಹೋಗಿತ್ತು. ನನ್ನ ಸ್ಥಾನದಲ್ಲಿ ಮತ್ತೊಬ್ಬಳನ್ನು ಕನಸಿನಲ್ಲಿಯೂ ಸಹಿಸದ ನನಗೆ ನೈಜತೆಯಲ್ಲಿ ಒಪ್ಪಿಕೊಳ್ಳುವುದು ಅನಿವಾರ್ಯ. ಅತ್ತು ರಂಪಾಟ ಮಾಡಿ ನನ್ನವನನ್ನು ಅಲ್ಲಲ್ಲ ನಿನ್ನನ್ನು ಪಡೆದುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲವೆನಿಸಿತ್ತು.
          ನನ್ನ ಕಣ್ಣೆದುರೇ ಮತ್ತೊಂದು ಹುಡುಗಿಗೆ ತಾಳಿ ಕಟ್ಟುವ ಘಳಿಗೆ ನನ್ನೆದೆಯ ನೆನಪುಗಳಿಗೆ ಕಾವು ಕೊಟ್ಟಂತಾಗಿತ್ತು. ಆ ಸಪ್ತಪದಿ ತುಳಿದು ನಿನ್ನೆದೆಯ ಅರಸಿಯಾಗಬೇಕಿದ್ದ ನಾನು, ಅವಳೋಂದಿಗಿನ ನಿನ್ನ ಸಪ್ತಪದಿಗೆ ಸಾಕ್ಷಿಯಾಗಿ ನಿಂತಿದ್ದೆ. ಉಕ್ಕಿ ಬರುತ್ತಿದ್ದ ಅಳೂವಿಗೂ, ಜಿನುಗುತ್ತಿದ್ದ ಕಣ್ಣೀರಿಗೂ ಹೊರಬರುವ ಸ್ವಾತಂತ್ರಯವೇ ಇರಲಿಲ್ಲ. ಬಿಗಿದಿಟ್ಟ ಕಣ್ಣೀರಿಗೂ ಬೇಸರವಾಗಿತ್ತು.
          ನಿಜ ತಾನೇ, ಆ ದಿನಗಳನ್ನು, ನೆನಪುಗಳನ್ನು ಮರೆತುಬಿಡಲು ಸಾಧ್ಯನಾ...? ಅಸಾಧ್ಯವಾದುದನ್ನು ಸಾಧ್ಯವಾಗಿಸುವಲ್ಲೂ ನಾನು ಸೋತು ಹೋದೆ. ನಿನ್ನೊಂದಿಗಿನ ಎಲ್ಲಾ ನೆನಪುಗಳನ್ನು ಮೂಟೆ ಕಟ್ಟಿ ಬೀಗ ಜಡಿದು ಸಾಗರದ ಪಾತಾಳಕ್ಕೆಸೆದರೂ ಅವುಗಳು ನನ್ನನ್ನು ಕಾಡುವುದನ್ನು ಬಿಡಲೇ ಇಲ್ಲ. ಯಾವುದೂ ಬೇಡವೆಂದು ಕ್ಷಣಹೊತ್ತು ಮರೆತರೆ, ಕಪ್ಪೇರಿದ ಮೋಡ ಮತ್ತೆ ಹನಿಯುದುರಿಸಿ, ನೆನಪುಗಳನ್ನು ಕೆದಕತೊಡಗುತ್ತವೆ. ನಾ ಭೂಮಿ ಮೇಲಿರುವವರೆಗೂ, ಕಪ್ಪೇರಿದ ಮೋಡ, ಅರುಣರಾಗಕೆ ನವಿಲು ಗರಿಬಿಚ್ಚಿ ನಲಿಯುವುದು ಸಹಜವಾದಷ್ಟು...ನನ್ನೆದೆಯ ನೆನಪುಗಳು ಮೊಳಕೆಯೊಡೆಯುದು ಅಷ್ಟೇ ಸಹಜ...

ಪ್ರೇಮವೊಂದು ಚಿಗುರಿದೆ ಮನದಲಿ


          ಹುಣ್ಣಿಮೆಯ ದಿನದ ತಣ್ಣನೆಯ ಗಾಳಿ ಮೈಯ ಬಳಸಲು ಬೀಸಿ ಸುಳಿಯುತಿದೆ. ಚಳಿಯನ್ನು ಸಹಿಸದೆ ಬೆಚ್ಚನೆಯ ಹೊದಿಕೆ ಹೊದ್ದು ಮಲಗೋಣವೆಂದರೆ ಕಣ್ಣಿಗೆ ನಿದ್ದೆಯೇ ಆವರಿಸುತ್ತಿಲ್ಲ. ಅತ್ತ ತಿರುಗಿ ಇತ್ತ ತಿರುಗಿ, ಒತ್ತಾಯಪೂರ್ವಕವಾಗಿ ಕಣ್ಣು ಮುಚ್ಚಿ ನಿದ್ರಾದೇವಿಯನ್ನು ಬಳಿ ಸೆಳೆಯಲು ಪ್ರಯತ್ನಿಸಿದರೂ ನಿದ್ರೆ ನನ್ನ ಬಳಿಗೆ ಸುಳಿಯತ್ತಿಲ್ಲ. ಯಾಕೆ? ಏನಾಗಿದೆ ನನಗೆ? ಮನದ ಅಚಲ ನಿರ್ಧಾರಗಳಿಗೆ ಎನೋ ಹೊಡೆತ ಬಿದ್ದಂತೆ. ಯಾಕೆ ಹೀಗಾಯಿತು ನನಗೆ? ಮನಸಿನಲ್ಲಿ ಸಾವಿರಾರು ಆಲೋಚನೆಗಳ ಕಳವಳ ತುಂಬಿದೆ. ಅಂಗಳದಲ್ಲಿ ನಿಂತು ನಕ್ಷತ್ರ ಎಣಿಸೋಣವೆಂದರೆ ಬೆಳ್ಳನೆಯ ಬೆಳಕನ್ನು ಚೆಲ್ಲುತ್ತಿರುವ ತುಂಟ ಚಂದಿರ ನನ್ನನ್ನೇ ನೋಡಿ ತುಟಿಯಂಚಿನಲಿ ಸಣ್ಣನೆಯ ನಗು ಬೀರುವಂತೆ ತೋರುತ್ತಿದೆ. ಮನ ಅತ್ತ ಸೆಳೆದು ಹಿಡಿದಿದೆ. ನಿದ್ದೆಯ ಪರಿವೇ ಇಲ್ಲದೆ, ಮೌನದ ಗೊಂಬೆಯಾಗಿ ಮನಸು, ಕನಸುಗಳನ್ನು ಹೆಣೆಯುತ್ತಾ ಬಾಳ ಚಂದಿರನೆಡೆಗೆ ಜಾರಿತ್ತು. ಒಮ್ಮೆಲೆ ಕಲ್ಪನಾಲೋಕದಿಂದ ಹೊರಬಂದವಳು ಮಲಗೋಣವೆಂದು ಹೊರಟೆರೆ ರೆಪ್ಪೆ ಮುಚ್ಚಲು ಆ ಸುಂದರವಾದ ವದನ ಬಿಡದೇ ಕಚಗುಳಿ ಇಡುತ್ತಿದೆ. ಯಾಕೆ ಹೀಗೆ? ನನ್ನ ಕೊಠಡಿಯ ಬಿಟ್ಟು ಹೊರ ನಡೆಯಲು ಮನಸ್ಸಾಗುತ್ತಿಲ್ಲ. ಒಂದೆಡೆ ನಿಂತರೆ ಕೂತರೆ ಅಲ್ಲೇ ಶಿಲೆಯಾಗಿ ಬಿಡುವೆನು. ಏನೋ ಗಾಢ ಆಲೋಚನೆ.
           ಪ್ರತಿದಿನವಿದ್ದಂತೆ ಕಂಪ್ಯೂಟರ್ ಬೇಡ, ಫೇಸ್ ಬುಕ್ ಬೇಡ, ಊಟ ಬೇಡವೆನಿಸಿವೆ. ಮಧುರವಾದ ಭಾವನೆಗಳ ಲೋಕದಲ್ಲೇ ಮೈಮರೆತರೆ ಸಾಕು ಎನಿಸಿದೆ. ಅದೇನಾಯ್ತು ನಾ ಕಾಣೆ. ಪ್ರೀತಿ ಪ್ರೇಮವೆಂದರೆ ಕೋಪ ಮಾಡಿಕೊಳ್ಳುತ್ತಿದ್ದ ನಾನು, ಪ್ರೀತಿಯಲ್ಲಿ ಬಿದ್ದ ಸ್ನೇಹಿತ ಸ್ನೇಹಿತೆಯರಿಗೆ ಬುದ್ಧಿ ಹೇಳುತ್ತಿದ್ದೆ, ಅವರತ್ತ ಹಾಸ್ಯವನ್ನೂ ಮಾಡುತ್ತಿದ್ದೆ, ಅವರ ಪಿಸುಪಿಸು ಮಾತುಗಳನ್ನು ಕೇಳಿಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ಗೆಳತಿಯರ ಜೊತೆಗೂಡಿ ನಗುತ್ತಿದ್ದವಳು ನಾನು. ಆದರೆ ಹಾಗಿದ್ದ ನನ್ನನ್ನೇ ಅದೇ ಆ ಪ್ರೀತಿ ಕರಗಿಸಿ ಬಿಟ್ಟಿತೇ? ಪ್ರೀತಿಗೆ ನನ್ನಲ್ಲೂ ಪ್ರೇಮವಾಯಿತೇ? ಪ್ರೀತಿಯೇ ನನ್ನನ್ನು ತನ್ನ ಬಳಿ ಸೆಳೆಯಿತೋ, ನಾನೇ ಪ್ರೀತಿಗೆ ಶರಣಾದೆನೋ... ಒಂದೂ ಅರಿಯೆ.
          ನನ್ನ ಮನದಲ್ಲಿ ಪ್ರೀತಿಯ ಬೀಜ ಬಿತ್ತಿದ ಆ ಚೋರ ಯಾರು? ಹಾ... ಅವನೇ ಅವನೇ ಅದೇ ಆ ಪರೀಕ್ಷಾದಿನ ನಾನು ಓದುವುದರಲ್ಲಿ ಮಗ್ನವಾಗಿದ್ದೆ. ಒಂದು ಕ್ಷಣ ಪುಸ್ತಕದಿಂದ ಕಣ್ತೆಗೆದು ತಲೆಯೆತ್ತಿ ನೋಡಿದಾಗ, ಕಣ್ಣ ಮುಂದೆ ದೂರದಲ್ಲಿ ಕಂಡವನು ಅವನು. ನನ್ನತ್ತ ನೋಡಿ ಪರಿಚಯದ ನಗು ಚೆಲ್ಲಿದ. ಆದರೆ ನಾ ಕಾಣೆ ಆತ ಯಾರೋ... ಆ ನಗುವಲ್ಲೇನೋ ಸೆಳೆತ ಇತ್ತು. ಆಗ ಅಲ್ಲಿಂದ ಮರೆಯಾದ ನಗು ನನ್ನಲ್ಲಿ ಮತ್ತೆ ಆ ನಗು ಮೊಗವನ್ನು ನೋಡುವ ತವಕ ಹೆಚ್ಚಿಸುತ್ತಾ ಬಂತು. ಅತ್ತಿತ್ತ ಬೇರಾವುದೋ ಕಾರ್ಯದ ನಿಮಿತ್ತ ಹೋದರೂ ನನ್ನ ಕಣ್ಣುಗಳು  ಅವನನ್ನೇ ಹುಡುಕುತ್ತಿದ್ದವು. ಅವನನ್ನು ಕಾಣುವ ಆಸೆ ಸುಳ್ಳು ನೆಪವನ್ನು ಸೃಷ್ಟಿಸುತ್ತಿತ್ತು. ದಿನದಲ್ಲೊಂದು ಬಾರಿ ನೋಡಿದೆನೆಂದರೆ ಅದೇನೋ ಸಂತೋಷ ನೆಮ್ಮದಿ ಮನಸ್ಸಿಗೆ. ಮುಖ ನೋಡುವುದರಲ್ಲೇ ದಿನಗಳೆದ ನನಗೆ ಮತ್ತೆ ಮನೆಗೆ ತೆರಳಿದಾಗ ಸಾವಿರ ಪ್ರಶ್ನೆಗಳು ಮನಸ್ಸನ್ನು ಕೆದಕಲು ಆರಂಭಿಸುವುದು. ಅವನ್ಯಾರು? ಹೆಸರೇನು? ಏನೊಂದನೂ ನಾ ತಿಳಿಯೆನು. ಆದರೆ ಪ್ರೀತಿಯೊಂದು ಅರಳಿದೆ ಮನದಲಿ ಎಂಬುದನ್ನೊಂದು ನಾನರಿತೆ. ಚಿಗುರಿ ಮೊಗ್ಗು ಹೂವಾಗಿ ಅರಳಿದ ಪ್ರೀತಿಯ ದೇವನಿಗೆಂತು ಅರ್ಪಿಸುವೆನೋ ನನಗಂತು ಅರಿತ್ತಿಲ್ಲ.
          ಪ್ರೀತಿ ಹೇಳುವ ಮುನ್ನ, ಒಂದು ಮಾತಾದರೂ ಆಡಬೇಕು. ಮಾತಿಲ್ಲದೆ ಪ್ರೇಮ ಶುರುವಾಗುವುದೆಂತು? ಹೆಸರ ತಿಳಿಯುವ ಪ್ರಯತ್ನದಲಿ ನಾ ಸೋತುಹೋದೆ. ಹೇಗೆ ತಿಳಿಯಲಿ ಹೃದಯದಲಿ ಮನೆ ಮಾಡಿರುವವನ ನಾಮಧೇಯ? ಎದುರು ನೀ ಬಂದಾಗ ಕೇಳುವೆನೆಂದರೆ ಅತಿಯಾದ ಹೃದಯದ ಬಡಿತ ಬಾಯಿ ತೆರೆಯಲು ಬಿಡುವಂತಿಲ್ಲ. ನಾನೇನು ಮಾಡಲಿ? ಕೊನೆಗೆ ಫೇಸ್ ಬುಕ್ ಮೊರೆ ಹೋದೆ ಆದರೂ ಹೇಗೆ  ಪ್ರಶ್ನೆ ಮೂಡಿತು. ತರಗತಿಯ ನನ್ನ ಸಹಪಾಠಿಯ ಗೆಳೆಯ ಅವನು ಎಂಬುದನ್ನೊಂದು ಅರಿತುಕೊಂಡೆ. ಫೇಸ್ ಬುಕ್ ನಲ್ಲಿ ನನ್ನ ಸಹಪಾಠಿಯ ಗೆಳ್ಯರ ಗುಂಪಿನಲ್ಲಿ ಅವನ ಛಾಯಾಚಿತ್ರವನ್ನು ನೋಡುತ್ತಾ, ಹುಡುಕುತ್ತಾ ಹಿಡಿದೇ ಬಿಟ್ಟೆ ನನ್ನ ಮನಗೆದ್ದ ಚೆಲುವನ.  ಸೆಳೆದಾಯಿತು ನನ್ನ ಸ್ನೇಹಜಾಲಕ್ಕೆ. ಮಾತುಗಳು ಸಂದೇಶಗಳ ರೂಪದಲ್ಲಿ ಪ್ರಾರಂಭವಾದವು. ಅವನಿಗೆ ನನ್ನ ಮುಖ ಪರಿಚಯವಿಲ್ಲದೆಯೇ, ಫೇಸ್ ಬುಕ್ ಸಂದೇಶದಲ್ಲಿಯೇ ನಮ್ಮ ಸ್ನೇಹ ಬೆಳೆಯಿತು.
           ಕಾಲೇಜಿನಲ್ಲಿ ಎದುರಿಗೆ ಬಂದರೂ ಮಾತನಾಡಲು ಭಯ. ಏನೆಂದು ಮಾತು ಪ್ರಾರಂಭಿಸುವುದು, ನಾನು ಯಾರೆಂದು ಪರಿಚಯ ಮಾಡಿಸಿಕೊಳ್ಳಲಿ ಎಂಬುದರಲ್ಲಿ ದ್ವಂದ್ವ ನಿರ್ಣಯಗಳು. ನನ್ನಲ್ಲೇನೋ ಅಳುಕು. ಕೊನೆಗೊಂದು ದಿನ ನಾ ಧೈರ್ಯ ಮಾಡಿ ಶುಭಮುಹೂರ್ತದಲ್ಲಿ ಮಾತು ಆರಂಭಿಸಿ ನನ್ನಲ್ಲೇ ನೆಮ್ಮದಿ ತಂದುಕೊಂಡೆ. ಆದರೆ ಆ ಹೊತ್ತಿಗಾಗಲೇ ನಮ್ಮಿಬ್ಬರ ಸ್ನೇಹದ ಬೇರು ಭೂಮಿಯಾಳಕ್ಕೆ ಇಳಿದಾಗಿತ್ತು. ಮತ್ತೆ ಸ್ನೇಹದ ಬೇರನ್ನು ಕಿತ್ತು ಪ್ರೀತಿಯ ಬೀಜವನ್ನು ಬಿತ್ತಲು ಧೈರ್ಯ ಸಾಲದು ನನಗೆ. ಪ್ರೀತಿ ಹೇಳಲು ಹೋಗಿ, ಆತನ ಸ್ನೇಹವು ನನ್ನಿಂದ ಮರೆಯಾಗಿ ಹೋದರೆ ಆ ನೋವನ್ನು ತಾಳುವ ಗಟ್ಟಿ ಹೃದಯ ನನ್ನದಲ್ಲ. ದೂರದಲ್ಲೇ ನಿಂತು ಅವನ ಮೊಗವನ್ನು, ನಗುವನ್ನು ನೋಡುತ್ತಾ ನಿಂತರೆ ಅಲ್ಲೇ ಮೈಮರೆಯುವೆನು. ಸ್ನೇಹವೋ, ಪ್ರೀತಿಯೋ ಎಂಬ ಉಭಯಸಂಕಟ. ಮನಸ್ಸುಗಳ ಬೆಸೆಯುವ ಪ್ರೀತಿಗಿಂತ, ಆತ್ಮೀಯತೆ ಬೆಳೆಸುವ ಪವಿತ್ರ ಸ್ನೇಹವೇ ಶ್ರೇಷ್ಠವೆಂದೆನಿಸಿ, ಮನದಲಿ ಚಿಗುರಿರುವ ಪ್ರೀತಿಯನ್ನು ಹೊಸಕಿ ಹಾಕಲು ಆಗದೆ ಪ್ರೀತಿಯನ್ನು ಎದೆಯ ಗೂಡಿನಲ್ಲೇ ಬಚ್ಚಿಟ್ಟುಕೊಂಡು ಸ್ನೇಹವನ್ನು ಮೆರೆಯುವ ಪ್ರಯತ್ನದಲ್ಲಿ ನಾನಿರುವೆ.
ಕಾಲೇಜು ದಿನಗಳು ಮುಗಿಯುವ ವರೆಗೆ ಸ್ನೇಹಿತನಾಗಿರದೆ, ಜೀವನದುದ್ದಕ್ಕೂ ನೋವಲ್ಲೂ, ನಲಿವಲ್ಲೂ ಸಮನಾಗಿ ಬೆರೆತು ಜೊತೆ ಬರುವೆ ತಾನೆ...?
                                                                                                                                    ಇಂತಿ,
                                                                                                                                              ಕನಸು...