Tuesday, 28 February 2017

ಕಂಬನಿಯೊರೆಸುವ ಒಲವಿನ ಹೃದಯಕೆ


          ಹೌದು! ನೀನೆ ನನ್ನ ಮನದ ಭಾವನೆಗಳ ಸರದಾರ. ನೀನಾರೋ ನಾನಾರೋ ಜೊತೆಯಾದದ್ದೇ ಅಪರೂಪ. ನಿಜವಾದ ಪ್ರೀತಿ, ಸ್ನೇಹ ಎಂದರೆ ಏನು ಎಂದು ಅರ್ಥೈಸಿದವನೇ ನೀನು. ನಾವಿಬ್ಬರು ಮೊದಲ ಹೆಜ್ಜೆ ಇಟ್ಟದ್ದು ಸ್ನೇಹಿತರಾಗಿ. ಆದರೆ ಆ ಸ್ನೇಹ ಯಾವ ರೀತಿ ಪ್ರೀತಿಯ ಹೊಳಪನ್ನು ಪಡೆದುಕೊಂಡಿತೋ ಗೊತ್ತಿಲ್ಲ. ನಮ್ಮಿಬ್ಬರ ಅತಿಯಾದ ನಿಶ್ಕಲ್ಮಶ ಸ್ನೇಹದ ಸಲುಗೆಯೇ ಸ್ನೇಹಕ್ಕೆ ಪ್ರೀತಿಯ ಹೊಳಪನ್ನು ನೀಡುವ ಕೆಲಸ ಮಾಡಿರಬಹುದು ಅಲ್ಲವೇ? ಒಬ್ಬರಿಗೊಬ್ಬರ ಮುಖ ಪರಿಚಯವಿಲ್ಲದೆಯೇ ಸ್ನೇಹ ಗಾಢವಾಗಿ ಬೇರೂರಿತ್ತು. ನಮ್ಮಿಬ್ಬರ ನಡುವಿನ ಗೆಳೆತನದ ಭಾವಕ್ಕೆ ಮೊಬೈಲ್ ಕರೆಗಳು ಬಿಟ್ಟರೆ ಮೆಸ್ಸೇಜ್‍ಗಳು ಮಾತ್ರವೇ ಗಟ್ಟಿ ಸೇತುವೆಯಾಗಿದ್ದವು. ಯಾವುದೇ ಮೋಸ ಕಪಟವಿಲ್ಲದ ಸ್ನೇಹದಲ್ಲಿ ಯಾವುದನ್ನೂ ಮುಚ್ಚಿಡದೆ ನಿನ್ನ ಕೆಲಸ, ಮನೆ ಬಗ್ಗೆ, ಕಷ್ಟ ಸುಖ ನೋವುಗಳನ್ನೆಲ್ಲಾ ಮುಕ್ತವಾಗಿ ನನ್ನೊಡನೆ ಹಂಚಿಕೊಳ್ಳುತ್ತಿದ್ದೆ. ಎಷ್ಟೋ ಸಾರಿ ನೀನೇ ಹೇಳಿದ್ದಿದೆ ‘ನಾನು ಬೆಂಗಳೂರಿಗೆ ಕೆಲಸಕ್ಕೆಂದು ಬರುವ ಮುನ್ನ ಮನಸ್ಸಿಗೇನೇ ಬೇಜಾರಾದ್ರು ಅಮ್ಮನ ಮಡಿಲು ನಿರಾಳತೆಯನ್ನು ಒದಗಿಸುತ್ತಿತ್ತು. ಅದೇ ರೀತಿ ನನ್ನ ನೋವುಗಳಿಗೆ ನಿನ್ನ ಸಾಂತ್ವನದ ನುಡಿಗಳು ಅಮ್ಮಾ ಎನ್ನುವ ಬೆಚ್ಚನೆಯ ಭಾವವನ್ನು ನೀಡುತ್ತಿದೆ’ ಎಂದು ಆಗೆಲ್ಲಾ ನನಗೆ ನಾನೇ ಬೆನ್ನು ತಟ್ಟಿ ಬೀಗುತ್ತಿದ್ದೆ.
          ಮಾತಲ್ಲೇ ಮನೆಮಾಡುವ ಈ ಸ್ನೇಹಿತೆಯನ್ನು ನೋಡಬೇಕೆಂದು ಬೆಂಗಳೂರಿಂದ ಊರಿಗೆ ಬಂದಾಗ ನಮ್ಮಿಬ್ಬರ ಭೇಟಿಗೆ ಸಾಕ್ಷಿಯದದ್ದು ಶಿವ ಪರಮಾತ್ಮನ ದೇವಸ್ಥಾನ. ಭಗವಂತನ ಸಾನಿಧ್ಯದಲ್ಲಿ ನಮ್ಮಿಬ್ಬರ ಸ್ನೇಹ ಪ್ರೀತಿಯಾಗಿ ಹೊಸರೂಪ ಪಡೆಯಿತು. ಅದುವರೆಗೆ ಮೊಬೈಲ್‍ನಲ್ಲೇ ಗಂಟೆಗಳ ಸಮಯ ಪಟಾಕಿಯಂತೆ ಮಾತಿನ ಮುತ್ತುಗಳನ್ನೇ ಉದುರಿಸುತ್ತಿದ್ದ ನಮ್ಮಿಬ್ಬರಲ್ಲಿ ನೀರವ ಮೌನ. ಒಂದು ಹಂತದಲ್ಲಿ ಮೌನ ಉತ್ತರ ನಮ್ಮನ್ನು ತಡೆಹಿಡಿದಿತ್ತು. ಚಿಟಪಟ ಸುರಿಯುವ ಮಳೆಹನಿಯಂತೆ, ಮುತ್ತು ಪೋಣಿಸಿದಂತೆ ಸಾಲಾಗಿ ಸುರಿವ ಮಾತುಗಳೆಲ್ಲಾ ನಾಲಗೆ ತುದಿಯಲ್ಲಿ ಹಿಡಿದಿಟ್ಟಂತಾಗಿತ್ತು. ಪರಮೇಶ್ವರನ ಮುಂದೆ ನಾನೊಂದು ಕೊಡುವೆ ಅದನ್ನು ಜೋಪಾನವಾಗಿ ಕಾಪಾಡುತ್ತೀಯ ಎಂದು ಹಾರ್ಟ್‍ನ ಆಕಾರದ ಪೆಂಡೆಂಟನ್ನು, ಹೃದಯವನ್ನೇ ನನ್ನ ಕೈಯ್ಯಲ್ಲಿಡುವಂತೆ ನನ್ನ ಕೈಗಿತ್ತು, ನನ್ನನ್ನು ಮದುವೆಯಾಗುತ್ತೀಯ ಎಂದಾಗ ಮಾತಿನ ಮುತ್ತುಗಳೆಲ್ಲವೂ ಚಿಪ್ಪೊಳಗೆ ಮುದುಡಿ ಬಚ್ಚಿಟ್ಟುಕೊಂಡಂತಾಗಿತ್ತು. ನಿನಗೆ ಪ್ರೀತಿನಿವೇದನೆಯ ಚಡಪಡಿಕೆಯಾದರೆ ನನಗೆ ನಿನ್ನ ಭಾವನೆಗಳನ್ನು ಎದುರಿಸುವ ತಳಮಳ. ಆ ಮೌನದಲ್ಲಿ ನನ್ನ ಕಣ್ಣುಗಳೇ ನಿನಗೆ ಉತ್ತರ ನೀಡಿದ್ದವು. ನನ್ನ ಕಣ್ಣುಗಳ ಉತ್ತರಕ್ಕೆ ನಿನ್ನ ತುಟಿಗಳು ‘ಐ ಲವ್ ಯೂ’ ಎಂದು ಸಂತೋಷ ವ್ಯಕ್ತಪಡಿಸಿದ್ದವು. ಅದಕ್ಕೆ ನನ್ನ ತುಟಿಯಂಚಿನ ನಗು ಪ್ರತ್ಯುತ್ತರ.
          ಅದೇ ದಿನ ನೀನು ಬೆಂಗಳೂರಿಗೆ ಹೊರಡುವವನಿದ್ದೆ. ಆದರೆ ಆಗ ನನ್ನ ಪರಿಸ್ಥಿತಿ ಅದೆಷ್ಟು ಸಂದಿಗ್ಧ ಎಂದರೆ ನಿನ್ನನ್ನು ಬಿಟ್ಟು ತೆರಳಲು ಮನಸ್ಸೇ ಇರಲಿಲ್ಲ. ನಿನಗೂ ಹಾಗೇ ಆಗಿತ್ತು ಅನಿಸುತ್ತೆ. ಆದರೆ ನಿನಗದು ಅನಿವಾರ್ಯ. ನಿನ್ನ ಅನಿವಾರ್ಯವನ್ನು ಅರಿತೋ ಅರಿಯದೆಯೋ ಹೇಗೋ ಮನಸಿಲ್ಲದ ಮನಸಿನಲ್ಲಿ ಬೀಳ್ಕೊಟ್ಟು ಮನೆಗೆ ಬಂದಾಗ ಮನಸ್ಸಿನ ಭಾವನೆಗಳ  ಭಾರದಿಂದ ಕಣ್ಣಿಗೆ ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲಾಗದೆ, ಕೆನ್ನೆಯ ಪ್ರೀತಿ ಮಾತುಗಳಿಗೆ ಕಣ್ಣೀರು ಕೆನ್ನೆ ಜೊತೆ ಮಿಲನವಾಗಿತ್ತು. ಆ ಕಣ್ಣಿರಿಗಿದ್ದ ಭಾಗ್ಯ ಆಗ ನನಗಿಲ್ಲದಾಗಿತ್ತು.
          ನಾನು ಭಾವನಾಜೀವಿ. ಎದುರಿಸಲಾಗದ ನೋವುಗಳಿಗೆ ಮನಸ್ಸಲ್ಲೇ ಅತ್ತು ಕಂಬನಿ ಸುರಿಸುವುದಷ್ಟೇ ಗೊತ್ತು. ಆದರೆ ನೀನು ನಗುತ್ತಲೇ ಬದುಕುವವನು, ನೋವು ಮರೆಯುವವನು, ನೋವು ಮರೆಸುವವನು. ಅರಳುವ ಹೂಗಳ ಚಂದವನ್ನು ಬಣ್ಣಿಸುತ್ತಾ ನಿನ್ನ ಮಾತುಗಳಲ್ಲೇ, ಬೊಗಸೇ ಪ್ರೀತಿಯ ಸ್ಪರ್ಶದಲ್ಲೇ ನನ್ನ ನೋವುಗಳನ್ನೆಲ್ಲಾ ಮರೆಸುತ್ತಿರುವವನು. ಅಲ್ಲೆಲ್ಲೋ ದೂರದಲ್ಲಿರುವ ನಿನ್ನನ್ನು ನನ್ನ ವಿಶಾಲವಾದ ಹೃದಯಮಂದಿರದಲ್ಲಿ ಹಂತ ಹಂತವಾಗಿ ಬೆರೆಸುವ ಕೆಲಸ ಮಾಡಿದ್ದು ಈ ಮೊಬೈಲ್ ನಮ್ಮಿಬ್ಬರ ನಡುವಿನ ಪ್ರೀತಿ ಸೇತುವೆಯಾಗಿ ಮೊಬೈಲ್ ಅದೆಂಥಾ ಮಹತ್ಕಾರ್ಯ ಮಾಡಿದೆ ಅಲ್ವಾ!
ಅಂದಿನಿಂದ ನನಗೆ ಚಾತಕ ಪಕ್ಷಿಯ ಕೆಲಸ. ಸುರಿವ ಮಳೆಹನಿಗಾಗಿ ಭೂಮಿ ಕಾದಂತೆ, ಅರಳುವ ಹೂಗಳಿಗಾಗಿ ದುಂಬಿ ಕಾದಂತೆ ನನ್ನೊಳಗಿರುವ ನೀನು, ಹೊತ್ತು ತರುವ ಆ ಪ್ರೀತಿಯ ಮಹಾಪೂರಕ್ಕಾಗಿ ನಾನು ಹಾತೊರೆಯುತ್ತಿದ್ದೇನೆ. ಅದೊಂದು ದಿನ ಸರ್‍ಪ್ರೈಸ್ ಕೊಡುವ ನೆಪದಲ್ಲಿ ನೆನೆಯದೆ ಊರಿಗ ಬಂದಾಗ, ಆ ಕ್ಷಣದಲ್ಲಿ ನಿನ್ನನ್ನು ಕಂಡ ನನ್ನ ಕಂಗಳಿಗೆ, ತುಡಿಯುತ್ತಿದ್ದ ಮನದ ಭಾವನೆಗಳಿಗೆ, ಮರುಭೂಮಿಯಲ್ಲಿ ನೀರಿನ ಚಿಲುಮೆ ಪುಟಿದಂತಾಯಿತು. ಆಗಿನ ನನ್ನ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.
          ನಿಜ ಪ್ರೀತಿಯ ಭಾಷೆ ಅರಿಯೋಕ್ಕಾಗದ್ದು, ವಿವರಿಸಲಾಗದ್ದು ಅದನ್ನು ಅನುಭವಿಸಿಯೇ ತೀರಬೇಕು. ಅದು ನಿನ್ನಿಂದಲೇ ನನಗೆ ಅರಿವಾದದ್ದು. ನನ್ನದು ಹುಚ್ಚು ಮನಸ್ಸು. ಪ್ರೀತಿ ಎಂದರೆ ಕನಸಿನಲೋಕ. ಅದರಲ್ಲಿ ಎಲ್ಲವೂ ಸಂತೋಷ. ಎಂದೇ ನಾನು ಭಾವಿಸಿದ್ದೆ. ಅದಕ್ಕೆ ಕಾರಣವೂ ಇತ್ತು. ಕಾಲೇಜು ಓದುತ್ತಿರುವ ಹುಡುಗಿ ನಾನು. ಗೆಳೆಯ ಗೆಳತಿಯರ ಪ್ರೀತಿ ಪ್ರೇಮ ಸಲ್ಲಾಪಗಳ ಅರಿವು ಮಾತ್ರವೇ ಇತ್ತು. ಮೊದಮೊದಲಿಗೆ ನಿನ್ನ ಪ್ರತಿಯೊಂದು ಪ್ರೀತಿ ತುಂಬಿದ ಮಾತುಗಳು ನನ್ನಲ್ಲಿ ಸಂತೋಷವನ್ನು ಇಮ್ಮಡಿಯಾಗಿಸುತ್ತಿತ್ತು. ಅವುಗಳೆಡೆಯಲ್ಲಿ ನಿನ್ನ ಒಂದು ಬೈಗುಳದ ಮಾತು ಇಡೀ ದಿನ ನನ್ನನ್ನು ಕಣ್ಣಿರಿಡುತ್ತಾ ಕೂರುವಂತೆ ಮಾಡುತ್ತಿತ್ತು. ನನ್ನ ಮೂಗಿನ ಮೇಲಿನ ಕೋಪ, ನಿನ್ನ ಸಮಾಧಾನಿಸುವ ಮಾತುಗಳಿಗೆ ಪ್ರತಿಕ್ರಿಯಿಸುತ್ತಲೇ ಇರಲಿಲ್ಲ. ಆಗ ನನ್ನನ್ನು ಮುದ್ದಿಸುವ ನಿನ್ನ ಮುದ್ದು ಮನಸು ಅಮ್ಮನಂತೆ ಕಂಡಿತ್ತು. ‘ಪ್ರೀತಿ ಭಾವನೆಗಳ ಬಂಧನ ನಿಜ. ಆದರೆ ಜೀವನ ಹಾಗಲ್ಲ. ಜೀವನ ಎಂದರೆ ಕಷ್ಟ ಸುಖಗಳ ಸಮ್ಮಿಲನ ಆ ಕಷ್ಟ ಸುಖಗಳ ಸಾಗರದಲ್ಲಿ ನಾವಿಬ್ಬರು ಜೊತೆಯಾಗಿ ಈಜಿ ದಡ ಸೇರಬೇಕು. ಆಗಲೇ ನಮ್ಮ ಪ್ರೀತಿಗೆ ನಮ್ಮ ಜೀವನಕ್ಕೊಂದು ಸಾರ್ಥಕತೆ. ಮನಸ್ಸನ್ನು ಭಾವನೆಗಳ ಕೈಯ್ಯಲ್ಲಿ ಕೊಡಬೇಡ. ಬುದ್ಧಿಯಿಂದ ಮನಸ್ಸನ್ನು ಭಾವನೆಗಳಿಂದ ಹಿಡಿತದಲ್ಲಿಟ್ಟುಕೊಳ್ಳಬೇಕು. ಭಾವನೆಗಳ ಜೊತೆ ಬೆರೆತು ಓದಿಗೆ ಘಾಸಿ ಮಾಡಿಕೊಳ್ಳಬೇಡ. ನಾನೆಂದಿಗೂ ನಿನ್ನವನು. ನಾನು ನಿನ್ನನ್ನು ಮರೆತುಬಿಡುವುದಿಲ್ಲ. ಅದೇ ರೀತಿ ನೀನು ನನ್ನನ್ನು ತೊರೆದು ಬಿಡುವುದಿಲ್ಲ ಎಂಬ ನಂಬಿಕೆ ಇನಗಿದೆ ತಾನೇ? ಆ ನಂಬಿಕೆಯೊಂದಿದ್ದರೆ ಅದೇ ನಿಜವಾದ ಪ್ರೀತಿ. ಏಳು ಸಾಗರದಾಚೆ ಇದ್ದರೂ ನಮ್ಮನ್ನೆಂದೂ ಬೇರೆ ಆಗಲು ಬಿಡುವುದಿಲ್ಲ. ಪ್ರತಿಕ್ಷಣವೂ ನಾನು ನಿನ್ನ ಬಗ್ಗೆ, ನೀನು ನನ್ನ ಬಗ್ಗೆ ಕನಸು ಕಾಣುತ್ತಾ, ಯೋಚಿಸುತ್ತಿರುವುದು ಪ್ರೀತಿಯಲ್ಲ. ಆ ಪ್ರೀತಿಯಲ್ಲಿ ಭದ್ರತೆ ಇಲ್ಲ. ಕನಸು ಖಾಲಿಯಾದಾಗ ಪ್ರೀತಿ ಮರೆಯಾಗಿರುತ್ತದೆ. ನನ್ನ ಹೃದಯವನ್ನು ನಿನ್ನ ಹೃದಯದೊಳಗೆ ಆ ದಿನವೇ ಬಂಧಿಸಿ ಬೀಗ ಹಾಕಿ ಕೀಲಿಕೈ ಎಸೆದಾಗಿದೆ. ಬೆರೆತ ನಮ್ಮಿಬ್ಬರ ಹೃದಯಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಓದಿನತ್ತ ಗಮನ ಕೊಡು.’ ಎನ್ನುವಾ ನಿನ್ನ ಮಾತುಗಳು. ಆಗೆಲ್ಲಾ ನಿನ್ನ ಬುದ್ಧಿಮಾತುಗಳು ನಿನ್ನ ಮೇಲಿನ ಗೌರವವನ್ನು ದುಪ್ಪಟ್ಟು ಮಾಡುತ್ತಿತ್ತು.
          ನಿನ್ನದು ಮಗುವಿನಂಥಾ ಮನಸ್ಸು ಕಣೋ ನಾ ನೊಂದುಕೊಂಡರೆ ನೀನು ಕಣ್ಣೀರು ಸುರಿಸುವೆ. ನಿನ್ನ ಮನಸ್ಸಲ್ಲಿ ಮಡುಗಿರುವ ನೋವುಗಳನ್ನೆಲ್ಲಾ ಮರೆಮಾಚಿ ನಿಲ್ಲುವೆ. ಎಲ್ಲಿ ನಿನ್ನ ನೋವುಗಳಿಗೆ ನನ್ನ ಮನಸ್ಸು ಅಳುವುದೋ ಎಂದು ನಗು ನಗುತ್ತಲೇ ಮಾತಾಡಿಸುವೆ. ನಿನಗೋ ನನ್ನ ಮಡಿಲಲ್ಲಿ ಬೆಚ್ಚಗೆ ಮಲಗುವಾಸೆ. ನನಗೋ ನಿನ್ನ ಹೆಗಲಿಗೊರಗಿ ನಿಶ್ಚಿಂತೆಯಾಗಿ ನಿದ್ದೆ ಮಾಡುವಾಸೆ. ಪ್ರೀತಿ ಅನಿಯಮಿತವಾದಾಗ ಕೋಪ ಸಹಜವಂತೆ. ಆ ನಿನ್ನ ಕೋಪ ಕೆಂಡದಂತಿದ್ದರೂ ಅದು ಕ್ಷಣಿಕ ಅಷ್ಟೇ. ತಕ್ಷಣವೇ ಮುದ್ದು ಪೆದ್ದು ಪ್ರೀತಿ ಮಾತುಗಳಿಂದ ನಿನ್ನ ಕೆಂಡದಂಥ ಕೋಪದ ಮೇಲೋ ಅಥವಾ ನನ್ನ ಬಾಡಿದ ಮನಸ್ಸಿಗೋ ನೀರೆರೆಯುವ ಕೆಲಸ ಮಾಡುವೆ. ಈ ನಿನ್ನ ಅತಿಯಾದ ಮೌನದ ಪ್ರೀತಿಯ ಮುಂದೆ ನಾನು ಕುಬ್ಜಳು ಕಣೋ.
          ಮುಡಿಗೆ ಮಲ್ಲಿಗೆ ಮುಡಿಸಿದ, ನನ್ನೆದೆಯ ಸರದಾರ ನೀನು. ಅಂದು ಫೆಬ್ರವರಿ 14 ಪ್ರೇಮಿಗಳ ದಿನ. ಬೆಳ್ಳಂಬೆಳಗ್ಗೆಯೇ ಪ್ರೇಮಿಗಳ ದಿನಾಚರಣೆಯ ಶುಭಾಶಯದೊಂದಿಗೆ ಪ್ರೀತಿಯ ಮಾತುಗಳು ಹಾಗೂ ಸಿಹಿಮುತ್ತುಗಳು ರವಾನೆಯಾಗಿದ್ದವು. ದೂರವಿದ್ದರೂ ನಮ್ಮ ಆಚರಣೆಯೇನು ಕಡಿಮೆ ಇರಲಿಲ್ಲ.  ಜೊತೆಗೆ ಒಂದು ಶರತ್ತೂ ನಮ್ಮಿಬ್ಬರಲ್ಲಿ ರುಜುವಾಗಿತ್ತು ನೆನಪಿದೆ ತಾನೇ? ನೀನೆ ಹೇಳಿದಂತೆ ಪ್ರೇಮಿಗಳ ದಿನದಂದು ಇಬ್ಬರೂ ಒಂದೊಂದು ಉಡುಗೊರೆ ತೊಗೊಂಡು, ಯಾವ ಉಡುಗೊರೆಯೆಂದು ತಿಳಿಸದೆ, ನೀನು ಊರಿಗೆ ಬಂದಾಗ ವಿನಿಮಯ ಮಾಡಿಕೊಳ್ಳುವುದು. ಅದರಂತೆ ತೃತೀಯ ವರ್ಷದ ತರಗತಿಗಳೆಲ್ಲಾ ಮುಗಿದಿದೆ, ಪರೀಕ್ಷಾ ತಯಾರಿಯ ಜೊತೆ, ನಾನೊಂದು ಪುಟ್ಟ ಪ್ರೇಮದ ಕಾಣಿಕೆಯೊಂದನ್ನು ಹಿಡಿದು ಭಾವನೆಗಳನ್ನೆಲ್ಲ ಅದರಲ್ಲಿ ತುಂಬಿ, ನೀ ಹೊತ್ತು ತರುವ ಶೃತಿ ತುಂಬಿದ ಪೇಮದ ಕಾಣಿಕೆಯನ್ನು ಸ್ವೀಕರಿಸಿ ನನ್ನ ಭಾವನೆಗಳಿಗೆ ನಿನ್ನ ಶೃತಿ ಸೇರಿ ಭಾವಗೀತೆಯಾಗುವ ಆ ಘಳಿಗೆಗೆ ಕಾತರದಿಂದ ತುದಿಗಾಲಲ್ಲಿ ಕಾದು ನಿಂತಿರುವೆ. ನೀನು ನನ್ನ ಪ್ರೇಮದ ಕಾಣಿಕೆಗಾಗಿ ಓಡೋಡಿ ಬರುವೆ ತಾನೇ ಇನಿಯ...
ಇಂತಿ ನಿನ್ನೆದೆಯರಸಿ.

No comments:

Post a Comment