ಕಲಾಸಕ್ತಿಯೇ ಗುರು
ಕೈಯಲ್ಲಿ ಪೆನ್ಸಿಲ್, ಕುಂಚ ಹಿಡಿದೊಡನೆ ಎಲ್ಲರೂ ಕಲಾವಿದರಾಗಲು ಸಾದ್ಯವಿಲ್ಲ. ಜೀವನದ ಏಳು ಬೀಳಿನ ಅನುಭವ, ಶ್ರಮ, ಪ್ರಯತ್ನ, ಶ್ರದ್ಧೆ, ತಾಳ್ಮೆ, ಏಕಾಗ್ರತೆಯಿಂದ ಮಾತ್ರ ವಿನೂತನ ಕಲೆ ಹುಟ್ಟಲು ಸಾಧ್ಯ. ಇವೆಲ್ಲದರ ಜೊತೆಗೆ ಕಲೆಯ ಮೇಲಿರುವ ಆಸಕ್ತಿ ಪ್ರಮುಖವಾಗುತ್ತದೆ. ಹೀಗೆ ಆಸಕ್ತಿಯಿಂದ ತಮ್ಮಲ್ಲಿದ್ದ ಹವ್ಯಾಸಗಳತ್ತ ಹೆಚ್ಚು ಒಲವು ಹರಿಸಿ ಕಲಾಶಾರದೆಯನ್ನು ಒಲಿಸಿಕೊಂಡವರು ಧನಂಜಯ ಮರ್ಕಂಜ.
ತಮ್ಮ ಬಾಲ್ಯದ ಆಟಗಳಲ್ಲೇ ಇದ್ದ ಸೃಜನಶೀಲತೆ ಇಂದು ಕಲೆಯ ರೂಪದಲ್ಲಿ ಬೆಳೆದು ಹೆಮ್ಮರವಾಗಿ ನಿಂತಿದೆ. ಕಲಾರಾಧನೆಯಲ್ಲಿ ಹೊಸ ಹೊಸ ಕ್ರಿಯಾತ್ಮಕ ಕಲೆಗಳನ್ನು ಕಲಿತು, ಅವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಸಂಪೂರ್ಣವಾಗಿ ಕಲೆಗೆ ಮೀಸಲಿಟ್ಟದ್ದಾರೆ. ಇವರಿಗೆ ಇವರ ಕಲೆಯ ಮೇಲಿನ ಆಸಕ್ತಿಯೇ ಗುರು. ಒಬ್ಬರನ್ನು ಚಿತ್ರಕಲಾವಿದನೆಂದರೆ, ಇನ್ನೊಬ್ಬರನ್ನು ನೃತ್ಯಕಲಾವಿದನೆಂದರೆ, ಇವರನ್ನು ಮಾತ್ರ ಚಿತ್ರಕಲಾವಿದನೆಂದು ಒಂದು ಕ್ಷೇತ್ರಕ್ಕೆ ಸೀಮಿತವಾಗಿರಿಸಲು ಸಾಧ್ಯವಿಲ್ಲ. ಯಾಕೆಂದರೆ ತಮ್ಮ ಅಂಗೈಯಲ್ಲಿ ಹಲವಾರು ಕಲಾರೇಖೆಗಳನ್ನು ತಾವೇ ಎಳೆದುಕೊಂಡಿದ್ದಾರೆ. ಹೊಳೆಯ ಬದಿಯ ಮಣ್ಣಿನಲ್ಲಿ, ಮರದ ಬೇರುಗಳಲ್ಲಿ ಆಕೃತಿಗಳನ್ನು ಮಾಡುತ್ತಾ ಸೃಜನಶೀಲತೆಯನ್ನು ಹೆಚ್ಚಿಸಿಕೊಂಡ ಇವರಿಗೆ ಒಲಿದ ಕಲೆಗಳು ಹಲವಾರು.
ಯಾರಲ್ಲೂ ಹುಟ್ಟಿನಿಂದ ಕಲೆ ಅರಳಲು ಸಾಧ್ಯವಿಲ್ಲ. ದನಿವರಿಯದ ಅಭ್ಯಾಸ ಕೆಲಸಗಳಿಂದ ಮಾತ್ರ ಅವುಗಳನ್ನು ತಮ್ಮ ಅಂಕುಶಕ್ಕೆ ತರಲು ಸಾಧ್ಯ ಎನ್ನುವುದುಕ್ಕೆ ಧನಂಜಯ ಅವರು ಸ್ಪಷ್ಟ ಉದಾಹರಣೆ ಎಂದರೆ ತಪ್ಪಾಗಲಾರದು. ತಮ್ಮ ಅನಿರತ ಪ್ರಯತ್ನದಿಂದ ಗಳಿಸಿಕೊಂಡ ಕಲಾಕೌಶಲ್ಯಗಳನ್ನು ನೋಡಿದರೆ ಒಮ್ಮೆ ಅಚ್ಚರಿಯಾಗುವುದು ಸಹಜ. ಕುಂಚದಿಂದ ಬಣ್ಣ ಚೆಲ್ಲುವುದು ಮಾತ್ರವಲ್ಲದೆ, ಪೆನ್ಸಿಲ್ನ ರೇಖೆಗಳಿಂದ ಮೂಡುವ ಅಬ್ದುಲ್ ಕಲಾಂನಂತವರ ಚಿತ್ರಗಳಿಂದ ಹಿಡಿದು, ಮಣ್ಣಿನಲ್ಲಿ ಕೈ ಮೆದ್ದಿ ಕ್ಲೇಮಾಡೆಲ್ಗಳನ್ನು, ಯೋಚನೆಗೆ ನಿಲುಕದ ಗೆರೆಟೆ ಶಿಲ್ಪ, ಕ್ವೆಲ್ಲಿಂಗ್ ಆರ್ಟ್, ಎಸ್.ಒ.ಪಿ.ಡಬ್ಲ್ಯೂ. ಕಸದಿಂದ ರಸ, ಬೊಂಬೆಗಳ ತಯಾರಿ, ಸಿಮೆಂಟ್ ಕಲಾಕೃತಿ, ವರ್ಲಿ ಆರ್ಟ್ಗಳಲ್ಲೂ ತಮ್ಮ ಕೌಶಲ್ಯ ಮೆರೆದಿದ್ದಾರೆ.
ಪ್ರಸ್ತುತ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಚಿತ್ರಕಲಾ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವ ಧನಂಜಯ ಮರ್ಕಂಜ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ. ಮಕ್ಕಳ ಪ್ರತಿಭೆಗಳಿಗೆ ನೀರೆರೆಯುವಲ್ಲಿ ಸಫಲರು. ಅನೇಕ ಕಲಾಶಿಬಿರಗಳಲ್ಲಿ ಸಂಪನ್ಮೂಲಕ ವ್ಯಕ್ತಿಗಳಾಗಿ ಮಕ್ಕಳಲ್ಲಿ ಕಲೆಯ ಅಭಿರುಚಿಯನ್ನು ಬೆಳೆಸಿದವರು. ಕಡಿದು ಬರಿದಾಗಿದ್ದ ಮರದ ಟೊಂಗೆಗೆ ಸಂಗೀತ ಉಪಕರಣವಾದ ತಬಲದ ಹೊಳಪನ್ನು ಕೊಟ್ಟ ಅಪರೂಪದ ಕಲೆಗಾರ ಇವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸ್ಥಳೀಯ ಮರ್ಕಂಜದಲ್ಲಿ ಮುಗಿಸಿ ನಂತರ ಇಲೆಕ್ಟ್ರಿಕ್ನಲ್ಲಿ ಡಿಪೆÇ್ಲಮೊ ಪದವಿ ಪಡೆದು ನಂತರ ಮಂಗಳೂರಿನ ಮಹಾಲಸ ಚಿತ್ರಕಲಾ ಕಾಲೇಜಿನಲ್ಲಿ ಡಿ.ಎಂ.ಸಿ. ಡ್ರಾಯಿಂಗ್ ಮಾಸ್ಟರ್ ಕೋರ್ಸ್ ನಂತರ ಮೈಸೂರ್ ವಿಶ್ವವಿದ್ಯಾಲಯದಲ್ಲಿ ಬಿ.ಎಫ್.ಎ ಪದವಿ ಪಡೆದಿರುವರು. ಹವ್ಯಾಸವಾಗಿ ರೂಪುಗೊಂಡ ಕಲೆ ಈಗ ವೃತ್ತಿಯಾಗಿ ಕಲಾಸಿರಿಯನ್ನು ಇನ್ನಷ್ಟು ಬೆಳೆಸಿ ಶ್ರೀಮಂತಗೊಳಿಸುವ ಔದಾರ್ಯ ಇವರದು.
ಸನ್ಮಾನಗಳಿಗಾಗಿ ಕಲೆಯ ಮೊರೆ ಹೋದವರಲ್ಲ ಇವರು. ಆದರೆ ಸನ್ಮಾನಗಳು ಇವರ ಕಲಾಸೇವೆಯನ್ನು ಅಭಿನಂದಿಸುವುದನ್ನು ಮಾತ್ರ ಮರೆಯಲಿಲ್ಲ. ಮರದ ಮೇಲೆ ಚಿತ್ತಾರ ಬರೆದು ಕ್ರಿಯಾತ್ಮಕ ಕಲೆಗಳಿಗೆ ಬೆಳಕು ಚೆಲ್ಲುವ ಮೂಲಕ ವಿಶೇಷವೆನಿಸಿರುವ ಇವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ತಯಾರಿಸಿದ ಗೆರಟೆ ಶಿಲ್ಪ ಹಾಗೂ ಇತರ ಕರಕುಶಲ ಕಲೆಗೆ, ಫ್ರೆಂಡ್ಸ್ ಕ್ಲಬ್ ಪೈಲೂರು, ಜಿಲ್ಲಾ ಮಟ್ಟದ ಯುವಜನೋತ್ಸವ ಮೇಳದಲ್ಲಿ, ಸುಳ್ಯದ ವಿಕಾಸ ಸ್ಕೂಲ್ ಆಫ್ ಆಟ್ರ್ಸ್ ಇವರಿಂದ ಸನ್ಮಾನಗಳು ಸಂದಿವೆ. ಪಿಳಿಕುಳದಲ್ಲಿ ನಡೆದ ಥರ್ಮೋ.ಪೋಂ ಆರ್ಟ್ ಕಾರ್ಯಾಗಾರದಲ್ಲಿ ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ನಲಿ ಕಲಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಕಲಾ ನೈಪುಣ್ಯತೆಗೆ ಮಾದರಿಯಾಗಿದ್ದಾರೆ.
ಥರ್ಮೋಕೋಲ್ನಿಂದ ಇವರು ತಯಾರಿಸಿದ ಬೋಧನಾ ಉಪಕರಣ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು. ವಿಜ್ಞಾನ ಮಾದರಿ ತಯಾರಿ, ಬೊಂಬೆ ತಯಾರಿ, ಬೆರಳು ಬೊಂಬೆ ತಯಾರಿ, ಒರಿಗಾಮಿ ಕಲೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಲ್ಲೂ ಈ ಎಲ್ಲಾ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಕಲೆಗಾರ.
ಬೇಸಿಗೆ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹೋಗುತ್ತಿದ್ದ ಇವರು ಕೃಷಿ ಮೇಳ, ಸಾಹಿತ್ಯ ಸಮ್ಮೇಳನ, ಪ್ರತಿಭಾ ಕಾರಂಜಿ, ಯುವಜನೋತ್ಸವ, ಯುವಜನಮೇಳ, ಬ್ರಹ್ಮಕಳಸಗಳಲ್ಲಿ ತಮ್ಮದೇ ಶೈಲಿಯಲ್ಲಿ ವೇದಿಕೆ ನಿರ್ಮಾಣ ಮಾಡುವ ಮೂಲಕ ಜನಮಾನಸದಲ್ಲೂ ಪ್ರವೇಶಿಸಿದವರು. ಕಿನ್ನರ ಮೇಳ ತುಮರಿಯಲ್ಲಿ ನಾಟಕ ಟ್ರೈನಿಂಗ್, ಪ್ರತಿಭಾ ಕಾರಂಜಿ ಹಾಗೂ ನಾಟಕ ನಿರ್ದೇಶನ ಹಾಗೂ ರಂಗ ಪರಿಕರಗಳನ್ನು ತಯಾರಿಸುವ ಮಾಡುವ ಮೂಲಕ ನಾಟಕ ರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ನಿರ್ದೇಶಿಸಿದ ‘ಎ ಮ್ಯಾನ್’ ಇಂಗ್ಲೀಷ್ ನಾಟಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು.
ಪ್ರೌಢ ಶಿಕ್ಷಣದ ವರೆಗೆ ಆಸಕ್ತಿಯನ್ನೇ ಗುರುವಾಗಿಸಿಕೊಂಡು ಹವ್ಯಾಸವಾಗಿದ್ದ ಕಲೆಗೆ ಪ್ರಭಾವ ಬೀರಿದವರು ಕಲಾವಿದ ಗೋಪಾಡ್ಕರ್. ಅವರಿಂದ ಪ್ರಭಾವಿತಗೊಂಡು ಥರ್ಮೋ.ಪೋಂ ಆರ್ಟ್ನ್ನು ಕಲಿತರು. ಕಲಾಶಿಕ್ಷಕನಾಗಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿಯಲ್ಲಿ 3 ವರ್ಷ ಹಾಗೂ ವಿದ್ಯಾರಶ್ಮಿ ಡಿ.ಎಡ್ ಕಾಲೇಜಿನಲ್ಲಿ 17 ವರುಷಗಳ ಸೇವೆ ಸಲ್ಲಿಸಿರುವರು. ವಿಶೇಷ ಕಲೆಯಾದ ಗೆರಟೆ ಶಿಲ್ಪ ತಯಾರಿಗೆ ಹಲವು ಸನ್ಮಾನಗಳು ಬಂದಿವೆ. ಮುಖವಾಡ ತಯಾರಿ, ಯಕ್ಷಗಾನ, ನಾಟಕ, ಬೀದಿ ನಾಟಕ, ಛದ್ಮವೇಷ, ಲೋಗೋ ತಯಾರಿ, ಮುಖಪುಟ ವಿನ್ಯಾಸ ಹೀಗೆ ಹಲವಾರು ಕಲಾ ಪ್ರಕಾರಗಳಲ್ಲಿ ತಮ್ಮನ್ನು ತಾವು ಅಳವಡಿಸಿಕೊಂಡು ಕಲಾಸೇವೆ ಗೈದಿರುವರು. ಪ್ರತಿಭಾ ಕಾರಂಜಿಗಳಲ್ಲಿ, ಯುವಜನ ಮೇಳಗಳಲ್ಲಿ, ಯಕ್ಷಗಾನದಲ್ಲಿ, ನಾಟಕಗಳಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿರುವ ಇವರನ್ನು, ಹಲವಾರು ಪ್ರಶಂಸೆಗಳು ಹರಸಿ ಬಂದಿವೆ. ಕಲಾಶಿಕ್ಷಕ ರತ್ನ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡಿರುವರು.