Wednesday 31 January 2018

ಕಲಾಸಕ್ತಿಯೇ ಗುರು

         
          ಕೈಯಲ್ಲಿ ಪೆನ್ಸಿಲ್, ಕುಂಚ ಹಿಡಿದೊಡನೆ ಎಲ್ಲರೂ ಕಲಾವಿದರಾಗಲು ಸಾದ್ಯವಿಲ್ಲ. ಜೀವನದ ಏಳು ಬೀಳಿನ ಅನುಭವ, ಶ್ರಮ, ಪ್ರಯತ್ನ, ಶ್ರದ್ಧೆ, ತಾಳ್ಮೆ, ಏಕಾಗ್ರತೆಯಿಂದ ಮಾತ್ರ ವಿನೂತನ ಕಲೆ ಹುಟ್ಟಲು ಸಾಧ್ಯ. ಇವೆಲ್ಲದರ ಜೊತೆಗೆ ಕಲೆಯ ಮೇಲಿರುವ ಆಸಕ್ತಿ ಪ್ರಮುಖವಾಗುತ್ತದೆ. ಹೀಗೆ ಆಸಕ್ತಿಯಿಂದ ತಮ್ಮಲ್ಲಿದ್ದ ಹವ್ಯಾಸಗಳತ್ತ ಹೆಚ್ಚು ಒಲವು ಹರಿಸಿ ಕಲಾಶಾರದೆಯನ್ನು ಒಲಿಸಿಕೊಂಡವರು ಧನಂಜಯ ಮರ್ಕಂಜ.
          ತಮ್ಮ ಬಾಲ್ಯದ ಆಟಗಳಲ್ಲೇ ಇದ್ದ ಸೃಜನಶೀಲತೆ ಇಂದು ಕಲೆಯ ರೂಪದಲ್ಲಿ ಬೆಳೆದು ಹೆಮ್ಮರವಾಗಿ ನಿಂತಿದೆ. ಕಲಾರಾಧನೆಯಲ್ಲಿ ಹೊಸ ಹೊಸ ಕ್ರಿಯಾತ್ಮಕ ಕಲೆಗಳನ್ನು ಕಲಿತು, ಅವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಸಂಪೂರ್ಣವಾಗಿ ಕಲೆಗೆ ಮೀಸಲಿಟ್ಟದ್ದಾರೆ. ಇವರಿಗೆ ಇವರ ಕಲೆಯ ಮೇಲಿನ ಆಸಕ್ತಿಯೇ ಗುರು. ಒಬ್ಬರನ್ನು ಚಿತ್ರಕಲಾವಿದನೆಂದರೆ, ಇನ್ನೊಬ್ಬರನ್ನು ನೃತ್ಯಕಲಾವಿದನೆಂದರೆ, ಇವರನ್ನು ಮಾತ್ರ ಚಿತ್ರಕಲಾವಿದನೆಂದು ಒಂದು ಕ್ಷೇತ್ರಕ್ಕೆ ಸೀಮಿತವಾಗಿರಿಸಲು ಸಾಧ್ಯವಿಲ್ಲ. ಯಾಕೆಂದರೆ ತಮ್ಮ ಅಂಗೈಯಲ್ಲಿ ಹಲವಾರು ಕಲಾರೇಖೆಗಳನ್ನು ತಾವೇ ಎಳೆದುಕೊಂಡಿದ್ದಾರೆ. ಹೊಳೆಯ ಬದಿಯ ಮಣ್ಣಿನಲ್ಲಿ, ಮರದ ಬೇರುಗಳಲ್ಲಿ ಆಕೃತಿಗಳನ್ನು ಮಾಡುತ್ತಾ ಸೃಜನಶೀಲತೆಯನ್ನು ಹೆಚ್ಚಿಸಿಕೊಂಡ ಇವರಿಗೆ ಒಲಿದ ಕಲೆಗಳು ಹಲವಾರು.          
ಯಾರಲ್ಲೂ ಹುಟ್ಟಿನಿಂದ ಕಲೆ ಅರಳಲು ಸಾಧ್ಯವಿಲ್ಲ. ದನಿವರಿಯದ ಅಭ್ಯಾಸ ಕೆಲಸಗಳಿಂದ ಮಾತ್ರ ಅವುಗಳನ್ನು ತಮ್ಮ ಅಂಕುಶಕ್ಕೆ ತರಲು ಸಾಧ್ಯ ಎನ್ನುವುದುಕ್ಕೆ ಧನಂಜಯ ಅವರು ಸ್ಪಷ್ಟ ಉದಾಹರಣೆ ಎಂದರೆ ತಪ್ಪಾಗಲಾರದು. ತಮ್ಮ ಅನಿರತ ಪ್ರಯತ್ನದಿಂದ ಗಳಿಸಿಕೊಂಡ ಕಲಾಕೌಶಲ್ಯಗಳನ್ನು ನೋಡಿದರೆ ಒಮ್ಮೆ ಅಚ್ಚರಿಯಾಗುವುದು ಸಹಜ. ಕುಂಚದಿಂದ ಬಣ್ಣ ಚೆಲ್ಲುವುದು ಮಾತ್ರವಲ್ಲದೆ, ಪೆನ್ಸಿಲ್‍ನ ರೇಖೆಗಳಿಂದ ಮೂಡುವ ಅಬ್ದುಲ್ ಕಲಾಂನಂತವರ ಚಿತ್ರಗಳಿಂದ ಹಿಡಿದು, ಮಣ್ಣಿನಲ್ಲಿ ಕೈ ಮೆದ್ದಿ ಕ್ಲೇಮಾಡೆಲ್‍ಗಳನ್ನು, ಯೋಚನೆಗೆ ನಿಲುಕದ ಗೆರೆಟೆ ಶಿಲ್ಪ, ಕ್ವೆಲ್ಲಿಂಗ್ ಆರ್ಟ್, ಎಸ್.ಒ.ಪಿ.ಡಬ್ಲ್ಯೂ. ಕಸದಿಂದ ರಸ, ಬೊಂಬೆಗಳ ತಯಾರಿ, ಸಿಮೆಂಟ್ ಕಲಾಕೃತಿ, ವರ್ಲಿ ಆರ್ಟ್‍ಗಳಲ್ಲೂ ತಮ್ಮ ಕೌಶಲ್ಯ ಮೆರೆದಿದ್ದಾರೆ.          
          ಪ್ರಸ್ತುತ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಚಿತ್ರಕಲಾ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವ ಧನಂಜಯ ಮರ್ಕಂಜ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ. ಮಕ್ಕಳ ಪ್ರತಿಭೆಗಳಿಗೆ ನೀರೆರೆಯುವಲ್ಲಿ ಸಫಲರು. ಅನೇಕ ಕಲಾಶಿಬಿರಗಳಲ್ಲಿ ಸಂಪನ್ಮೂಲಕ ವ್ಯಕ್ತಿಗಳಾಗಿ ಮಕ್ಕಳಲ್ಲಿ ಕಲೆಯ ಅಭಿರುಚಿಯನ್ನು ಬೆಳೆಸಿದವರು. ಕಡಿದು ಬರಿದಾಗಿದ್ದ ಮರದ ಟೊಂಗೆಗೆ ಸಂಗೀತ ಉಪಕರಣವಾದ ತಬಲದ ಹೊಳಪನ್ನು ಕೊಟ್ಟ ಅಪರೂಪದ ಕಲೆಗಾರ ಇವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸ್ಥಳೀಯ ಮರ್ಕಂಜದಲ್ಲಿ ಮುಗಿಸಿ ನಂತರ ಇಲೆಕ್ಟ್ರಿಕ್‍ನಲ್ಲಿ ಡಿಪೆÇ್ಲಮೊ ಪದವಿ ಪಡೆದು ನಂತರ ಮಂಗಳೂರಿನ ಮಹಾಲಸ ಚಿತ್ರಕಲಾ ಕಾಲೇಜಿನಲ್ಲಿ ಡಿ.ಎಂ.ಸಿ. ಡ್ರಾಯಿಂಗ್ ಮಾಸ್ಟರ್ ಕೋರ್ಸ್ ನಂತರ ಮೈಸೂರ್ ವಿಶ್ವವಿದ್ಯಾಲಯದಲ್ಲಿ ಬಿ.ಎಫ್.ಎ ಪದವಿ ಪಡೆದಿರುವರು. ಹವ್ಯಾಸವಾಗಿ ರೂಪುಗೊಂಡ ಕಲೆ ಈಗ ವೃತ್ತಿಯಾಗಿ ಕಲಾಸಿರಿಯನ್ನು ಇನ್ನಷ್ಟು ಬೆಳೆಸಿ ಶ್ರೀಮಂತಗೊಳಿಸುವ ಔದಾರ್ಯ ಇವರದು.         
           ಸನ್ಮಾನಗಳಿಗಾಗಿ ಕಲೆಯ ಮೊರೆ ಹೋದವರಲ್ಲ ಇವರು. ಆದರೆ ಸನ್ಮಾನಗಳು ಇವರ ಕಲಾಸೇವೆಯನ್ನು ಅಭಿನಂದಿಸುವುದನ್ನು ಮಾತ್ರ ಮರೆಯಲಿಲ್ಲ. ಮರದ ಮೇಲೆ ಚಿತ್ತಾರ ಬರೆದು ಕ್ರಿಯಾತ್ಮಕ ಕಲೆಗಳಿಗೆ ಬೆಳಕು ಚೆಲ್ಲುವ ಮೂಲಕ ವಿಶೇಷವೆನಿಸಿರುವ ಇವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ತಯಾರಿಸಿದ ಗೆರಟೆ ಶಿಲ್ಪ ಹಾಗೂ ಇತರ ಕರಕುಶಲ ಕಲೆಗೆ, ಫ್ರೆಂಡ್ಸ್ ಕ್ಲಬ್ ಪೈಲೂರು, ಜಿಲ್ಲಾ ಮಟ್ಟದ ಯುವಜನೋತ್ಸವ ಮೇಳದಲ್ಲಿ, ಸುಳ್ಯದ ವಿಕಾಸ ಸ್ಕೂಲ್ ಆಫ್ ಆಟ್ರ್ಸ್ ಇವರಿಂದ ಸನ್ಮಾನಗಳು ಸಂದಿವೆ. ಪಿಳಿಕುಳದಲ್ಲಿ ನಡೆದ ಥರ್ಮೋ.ಪೋಂ ಆರ್ಟ್ ಕಾರ್ಯಾಗಾರದಲ್ಲಿ ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ನಲಿ ಕಲಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಕಲಾ ನೈಪುಣ್ಯತೆಗೆ ಮಾದರಿಯಾಗಿದ್ದಾರೆ.       
          ಥರ್ಮೋಕೋಲ್‍ನಿಂದ ಇವರು ತಯಾರಿಸಿದ ಬೋಧನಾ ಉಪಕರಣ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು. ವಿಜ್ಞಾನ ಮಾದರಿ ತಯಾರಿ, ಬೊಂಬೆ ತಯಾರಿ, ಬೆರಳು ಬೊಂಬೆ ತಯಾರಿ, ಒರಿಗಾಮಿ ಕಲೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಲ್ಲೂ ಈ ಎಲ್ಲಾ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಕಲೆಗಾರ.         
          ಬೇಸಿಗೆ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹೋಗುತ್ತಿದ್ದ ಇವರು ಕೃಷಿ ಮೇಳ, ಸಾಹಿತ್ಯ ಸಮ್ಮೇಳನ, ಪ್ರತಿಭಾ ಕಾರಂಜಿ, ಯುವಜನೋತ್ಸವ, ಯುವಜನಮೇಳ, ಬ್ರಹ್ಮಕಳಸಗಳಲ್ಲಿ ತಮ್ಮದೇ ಶೈಲಿಯಲ್ಲಿ ವೇದಿಕೆ ನಿರ್ಮಾಣ ಮಾಡುವ ಮೂಲಕ ಜನಮಾನಸದಲ್ಲೂ ಪ್ರವೇಶಿಸಿದವರು. ಕಿನ್ನರ ಮೇಳ ತುಮರಿಯಲ್ಲಿ ನಾಟಕ ಟ್ರೈನಿಂಗ್, ಪ್ರತಿಭಾ ಕಾರಂಜಿ ಹಾಗೂ ನಾಟಕ ನಿರ್ದೇಶನ ಹಾಗೂ ರಂಗ ಪರಿಕರಗಳನ್ನು ತಯಾರಿಸುವ ಮಾಡುವ ಮೂಲಕ ನಾಟಕ ರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ನಿರ್ದೇಶಿಸಿದ ‘ಎ ಮ್ಯಾನ್’ ಇಂಗ್ಲೀಷ್ ನಾಟಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು. 
 ಪ್ರೌಢ ಶಿಕ್ಷಣದ ವರೆಗೆ ಆಸಕ್ತಿಯನ್ನೇ ಗುರುವಾಗಿಸಿಕೊಂಡು ಹವ್ಯಾಸವಾಗಿದ್ದ ಕಲೆಗೆ ಪ್ರಭಾವ ಬೀರಿದವರು ಕಲಾವಿದ ಗೋಪಾಡ್ಕರ್. ಅವರಿಂದ ಪ್ರಭಾವಿತಗೊಂಡು ಥರ್ಮೋ.ಪೋಂ ಆರ್ಟ್‍ನ್ನು ಕಲಿತರು. ಕಲಾಶಿಕ್ಷಕನಾಗಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿಯಲ್ಲಿ 3 ವರ್ಷ ಹಾಗೂ ವಿದ್ಯಾರಶ್ಮಿ ಡಿ.ಎಡ್ ಕಾಲೇಜಿನಲ್ಲಿ 17 ವರುಷಗಳ ಸೇವೆ ಸಲ್ಲಿಸಿರುವರು. ವಿಶೇಷ ಕಲೆಯಾದ ಗೆರಟೆ ಶಿಲ್ಪ ತಯಾರಿಗೆ ಹಲವು ಸನ್ಮಾನಗಳು ಬಂದಿವೆ. ಮುಖವಾಡ ತಯಾರಿ, ಯಕ್ಷಗಾನ, ನಾಟಕ, ಬೀದಿ ನಾಟಕ, ಛದ್ಮವೇಷ, ಲೋಗೋ ತಯಾರಿ, ಮುಖಪುಟ ವಿನ್ಯಾಸ ಹೀಗೆ ಹಲವಾರು ಕಲಾ ಪ್ರಕಾರಗಳಲ್ಲಿ ತಮ್ಮನ್ನು ತಾವು ಅಳವಡಿಸಿಕೊಂಡು ಕಲಾಸೇವೆ ಗೈದಿರುವರು. ಪ್ರತಿಭಾ ಕಾರಂಜಿಗಳಲ್ಲಿ, ಯುವಜನ ಮೇಳಗಳಲ್ಲಿ, ಯಕ್ಷಗಾನದಲ್ಲಿ, ನಾಟಕಗಳಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿರುವ ಇವರನ್ನು, ಹಲವಾರು ಪ್ರಶಂಸೆಗಳು ಹರಸಿ ಬಂದಿವೆ. ಕಲಾಶಿಕ್ಷಕ ರತ್ನ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡಿರುವರು. 

Friday 12 January 2018

ಆಧ್ಯಾತ್ಮಿಕ ಕೋಟೆಗೆ ರವಿಯೇ ಚಿತ್ರಕಾರ

         

          ಪ್ರತಿಯೊಂದು ಪರಿಸ್ಥಿತಿಗಳಿಂದ ಕೆಲವರಿಗೆ ಒಮ್ಮೆ ಹೊರಬಂದು ಬಿಡುವ ಎಂದೆನಿಸಿ ಅದರಿಂದ ಹೊರಬಂದು ನೋಡಿದರೆ ಆ ಪರಿಸ್ಥಿತಿ ಈ ಹಿಂದೆಗಿಂತ ಇನ್ನೂ ಕಠಿಣವಾಗಿ ಕಾಣುತ್ತದೆ. ಇನ್ನೂ ಕೆಲವರಿಗೆ ತಾವಿರುವ ಸ್ಥಿತಿಯೇ ಮೆಚ್ಚುಗೆಯಾಗುತ್ತದೆ. ಅದೇ ರೀತಿ ನೀರಿನೊಳಗಿರುವ ಮೀನಿಗೆ ಹೊರಗಿನ ಪ್ರಪಂಚವನ್ನು ನೋಡುವ ತವಕ. ಅದೇ ಉತ್ಸುಕತೆಯಿಂದ ಹೊರಚಿಮ್ಮಿದ ಮೀನಿಗೆ ತಾನಿದ್ದ ಪರಿಸ್ಥಿತಿಯೇ ಚೆಂದ ಈ ಪ್ರಪಂಚದಲ್ಲಿ ಬದುಕಲು ತನ್ನಿಂದ ಸಾಧ್ಯವಿಲ್ಲ ಎನ್ನುವ ಚಿತ್ರಣದೊಂದಿಗೆ ಮಾನವ ದಿನನಿತ್ಯ ತನ್ನದಾಗಿರುವುದನ್ನು ಬಿಟ್ಟು, ತನ್ನದಲ್ಲದ್ದಕ್ಕೆ ಪರದಾಡುವುದನ್ನು ಮಾರ್ಮಿಕವಾಗಿ ತಮ್ಮ ಚಿತ್ರದ ಮೂಲಕ ಹೇಳುತ್ತಾರೆ ಕೋಟೆಗದ್ದೆ ರವಿ.         
           ಮಹಾತ್ಮಗಾಂಧಿ ರಸ್ತೆಯ ನವರತನ್ ಗ್ಯಾಲರಿಯಲ್ಲಿ ಟೆಕ್ಸ್ಚರ್ ಆ್ಯಂಡ್ ಮ್ಯೂಸೆಸ್ ಎನ್ನುವ ಶೀರ್ಷಿಕೆಯಡಿ ನಡೆದ ಕಲಾಪ್ರದರ್ಶನದಲ್ಲಿ ತಮ್ಮ ಆಧ್ಯಾತ್ಮಿಕ ನಿಲುವನ್ನು ಬಣ್ಣಗಳಲ್ಲಿ ತುಂಬಿಟ್ಟು, ಬಂದ ಕಲಾವಿದರನ್ನು ಮಾತಿನಿಂದ ಮತ್ತು ಮುಖದಲ್ಲಿ ನಗು ಹೊತ್ತು ಸ್ವಾಗತಿಸುವ ರವಿ ಕುಂಚಗಳಿಗೆ ಭಾಷೆ ಕಲಿಸಿದ ಕಲಾವಿದ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಚಿಕ್ಕಹಳ್ಳಿಯಿಂದ ಬಂದು ಇಂದು ನಗರ ಮಾತ್ರವಲ್ಲದೆ ರಾಜ್ಯ, ದೇಶದಾದ್ಯಂತ ಹೆಸರುವಾಸಿವಾಗಿದ್ದಾರೆ. ಬಾಲ್ಯದಿಂದಲೇ ಧ್ಯಾನ, ಪುರಾಣ, ಮಹಾಕಾವ್ಯಗಳು, ಆಧ್ಯಾತ್ಮಿಕತೆಯಲ್ಲಿ ಅಪಾರ ಒಲವು ಹೊಂದಿದ್ದ ಇವರು ತಮ್ಮ ಕುಂಚ, ಬಣ್ಣಗಳ ಆಟದಲ್ಲೂ ಆಧ್ಯಾತ್ಮಿಕತೆಯಿಂದಲೇ ಚೆಂಡಾಡಿದ್ದಾರೆ.         
ಕಳೆದ ನಾಲ್ಕು ವರ್ಷಗಳಿಂದ ಇದುವರೆಗೆ ದೆಹಲಿ, ಮುಂಬೈ, ಕೋಲಾರ ಮುಂತಾದ ದೇಶದ ಹಲವೆಡೆ ತಮ್ಮ ಚಿತ್ರಕಲಾ ಪ್ರದರ್ಶನವನ್ನು ನೀಡುತ್ತಾ ಹಲವು ಕಲಾರಸಿಕರಿಗೂ ತಮ್ಮ ಆಧ್ಯಾತ್ಮದ ಬೀಜವನ್ನೂ ಬಿತ್ತಿದ್ದಾರೆ. 2017ರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದ ಚಿತ್ರಕಲಾ ಕಾರ್ಯಗಾರದಲ್ಲಿ ಭಾತರದಿಂದ ಆಯ್ಕೆಯಾದ 15 ಕಲಾವಿದರಲ್ಲಿ ಒಬ್ಬರಾಗಿ ಹಾಗೂ ಕರ್ನಾಟಕದಿಂದ ಆಯ್ಕೆಯಾದ ಇಬ್ಬರಲ್ಲಿ ಒಬ್ಬರಾಗಿ ಜೈಲಿನಲ್ಲಿದ್ದ ಕಲಾವಿದರಾಗಿದ್ದ ಖೈದಿಗಳಿಗೂ ತಮ್ಮ ಚಿತ್ರಕಲೆಯನ್ನು ಧಾರೆ ಎರೆದಿದ್ದಾರೆ. ಇದುವರೆಗೆ ಕಲಾಪ್ರದರ್ಶನ ನೀಡಿದ ಕಡೆಯಲ್ಲೆಲ್ಲಾ ಸನ್ಮಾನಗಳನ್ನು ಮುಡಿಗೇರಿಸಿಕೊಂಡರೂ ತುಳುಕುದ ತುಂಬಿದ ಕೊಡದಂತೆ ಸಧಾ ಚೈತನ್ಯಯುಕ್ತವಾಗಿರುವ ಕಲಾರಾಧಕ.
ಪ್ರಸ್ತುತ ಬೆಂಗಳೂರಿನ ಫಿಡಿಲಿಟಸ್ ಆರ್ಟ್ ಗ್ಯಾಲರಿಯಲ್ಲಿ ಮುಖ್ಯನ ಕಲಾವಿದನಾಗಿ, ಎಲ್ಲಾ ಯುವ ಕಲಾವಿದರಿಗು ಮುಕುಟಮಣಿಯಂತಿದ್ದಾರೆ. 2013ರಲ್ಲಿ ದೇವರಾಜು ಅರಸ್ ಭವನದಲ್ಲಿ ಪ್ರಾರಂಭವಾದ ಇವರ ಕಲಾಪ್ರದರ್ಶನ ಒಂದಾದ ಮೇಲೊಂದರಂತೆ ಫಿಡಿಲಿಟಸ್ ಗ್ಯಾಲರಿಯ ನೇತೃತ್ವದಲ್ಲಿ ಹೊಸ ಮಾದರಿಗಳಲ್ಲಿ ಮುಂದುವರಿಯುತ್ತಲೇ ಇದೆ. ಮಿಸ್ಟಿಕ್ ಲೋಟಸ್, ಸ್ಪಿರಿಚುವಲ್ ಸ್ಟೋಕ್, ಟೆಕ್ಸ್ಚರ್ ಆ್ಯಂಡ್ ಮ್ಯೂಸೆಸ್ ಎನ್ನುವ ಆಧ್ಯಾತ್ಮಿಕ ಶೀರ್ಷಿಕೆಗಳಡಿಯಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ.         
          ಬಾಲ್ಯದಲ್ಲಿ ಶಾಲೆಯಲ್ಲಿ ಗುರುಗಳು ಹೇಳಿಕೊಡುತ್ತಿದ್ದ ಚಿತ್ರಕಲೆಯನ್ನು ಶ್ರದ್ಧೆಯಿಂದ ಕಲಿತು, ಸ್ಪರ್ಧೆಯಲ್ಲಿ ಬಹುಮಾನ ದೊರೆತಾಗ ಇದರಲ್ಲೇ ತನ್ನನ್ನು ತೊಡಗಿಸಿಕೊಳ್ಳಬೇಕು, ತಾನೊಬ್ಬ ಕಲಾವಿದನಲ್ಲದೆ ಬೇರೇನು ಆಗಲು ಸಾಧ್ಯವಿಲ್ಲ ಎಂಬ ಅಚಲ ನಿರ್ಧಾರದೊಂದಿಗೆ ಪಿಯುಸಿ ಶಿಕ್ಷಣ ಮುಗಿದ ಕೂಡಲೆ ಮೈಸೂರಿನ ಡಿಎಮ್‍ಎಸ್ ಲಲಿತಕಲಾ ಮಹಾಸಂಸ್ಥಾನದಲ್ಲಿ ಚಿತ್ರಕಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪೂರೈಸುತ್ತಾರೆ. ಪ್ರಾರಂಭದಲ್ಲಿ ಕೊಡಗಿನ ವಿರಾಜ್‍ಪೇಟೆಯ ಮಹೀಂದ್ರ ಆ್ಯಂಡ್ ಮಹೀಂದ್ರ ಹಾಲಿಡೇ ರೆಸಾರ್ಟ್‍ನಲ್ಲಿ ಕಲಾಗಾರನಾಗಿ ಬಂದ ಅತಿಥಿಗಳ ಭಾವಚಿತ್ರಗಳನ್ನು ಬರೆದು, ಅಲ್ಲೊಂದು ಕಲಾ ಗ್ಯಾಲರಿಯನ್ನೂ ಪ್ರಾರಂಭಿಸಿ ತಮ್ಮ ಚಿತ್ರಕಲೆಗೆ ಒಂದು ವೇದಿಕೆಯನ್ನು ಸೃಷ್ಟಿಸಿಕೊಂಡರು. ನಂತರದಲ್ಲಿ ಫಿಡಿಲಿಟಸ್‍ನ ಸ್ಥಾಪಕ ಅಚ್ಚುತ್‍ಗೌಡ ಅವರ ಪ್ರೇರಣೆ, ಪ್ರೋತ್ಸಾಹದಿಂದ ಬೆಂಗಳೂರಿನಲ್ಲಿ ಕಲಾಪ್ರದರ್ಶನಗಳನ್ನು ಪ್ರಾರಂಭಿಸಿದರು.
          ಗ್ರಾಹಕರಿಗೆ ಬೇಕಾದ ವಿಷಯಗಳನ್ನು ಚಿತ್ರರೂಪಕ್ಕೆ ತರುತ್ತಿದ್ದ ಕೋಟೆಗದ್ದೆ ರವಿ ಇಂದು ತಮ್ಮದೇ ಹೊಸ ಚಂತನೆ, ಆಶಯಗಳನ್ನು ಕುಂಚದಿಂದ ಕ್ಯಾನ್ವಾಸ್‍ನ ಮೇಲೆ ಬರೆಯುತ್ತಿದ್ದಾರೆ. ಬಾಲ್ಯದಲ್ಲೇ ಕಲೆಯ ಮೇಲೆ ಸ್ವಯಂ ಆಸಕ್ತಿಯನ್ನು ಬೆಳೆಸಿಕೊಂಡು ತಮ್ಮ ಕಲೆಗೆ ಯಾವುದೇ ಗುರುಗಳನ್ನು ನಿಗಧಿಪಡಿಸಿಕೊಳ್ಳದೆ, ನಿರಂತರವಾಗಿ ಕಲೆಯ ತಪಸ್ಸು ಮಾಡುತ್ತಲೇ ಇದ್ದಾರೆ. ಇಂದಿಗೂ ಬಿಚ್ಚು ಮನಸ್ಸಿನಿಂದ ಕಲಾಪ್ರಕಾರಗಳಿಗೆ ತಮ್ಮನ್ನು ತೆರೆದುಕೊಂಡು, ಕಲಿಕೆ ನಿರಂತರ ಪ್ರಕ್ರಿಯೆ ಎಂಬಂತೆ, ಚಿಕ್ಕವಯಸ್ಸಿನಿಂದ ಬೇರೆ ಕಲಾವಿದರ ಚಿತ್ರಗಳನ್ನು ನೋಡಿ ಅದೇ ಥರಾ ಚಿತ್ರಗಳನ್ನು ಮಾಡುತ್ತಾ ಬಂದ ಇವರು ಎಲ್ಲಾ ಹಿರಿಯ ಕಲಾವಿದರನ್ನು ತಮ್ಮ ಗುರುಗಳಾಗಿ ನೆಚ್ಚಿಕೊಂಡ ಏಕಲವ್ಯ.      
          ಎಲ್ಲಾ ವೃತ್ತಿಗೂ ಒಂದು ನಿಗಧಿತ ಸಮಯವಿದೆ. ಕಲಾವಿದನಿಗೆ ಸಮಯದ ಪರಿಧಿ ಇಲ್ಲ. ಕಲಾವಿದನಿಗೆ ಕಲೆಯೆ ಜೀವನವಾಗಬೇಕು ಎನ್ನುವ ನಿಟ್ಟಿನಲ್ಲಿ ಹಳ್ಳಿಯಿಂದ ಬಂದ ಇವರಿಗೆ ಅದನ್ನು ಸಾಧಿಸುವುದು ಹೇಗೆ ಎಂಬುದು ತಿಳಿದಿರಲಿಲ್ಲ. ಆದರೆ ಫಿಡಿಲಿಟಸ್ ಸಂಸ್ಥೆ ಸಹಾಯದಿಂದ ಒಬ್ಬ ವೃತ್ತಿ ಕಲಾವಿದನಾಗಿ ಇಂದು ಹಲವಾರು ಗಣ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರತಿಯೊಬ್ಬ ಕಲಾವಿದನೂ, ಒಬ್ಬ ಕತೆಗಾರ ತನ್ನ ಪರಿಸರವನ್ನು ಅಕ್ಷರಗಳಲ್ಲಿ ತರಲು ಪ್ರಯತ್ನಿಸುವಂತೆ, ತನ್ನ ಆಲೋಚನೆಗಳನ್ನು ಬಣ್ಣಗಳಲ್ಲಿ ಮೂಡಿಸಲು ಪ್ರಯತ್ನಿಸುತ್ತಾನೆ. ಎಲ್ಲಾ ಧರ್ಮಗಳಿಗೂ ತಿರುಳು ಆಧ್ಯಾತ್ಮಿಕತೆ. ಆ ಆಧ್ಯಾತ್ಮಿಕತೆಯನ್ನೇ ಮೆಚ್ಚಿ ಅವುಗಳಿಗೆ ಬಣ್ಣಗಳಿಂದ ಸಾಂಕೇತಿಕ ರೂಪ ನೀಡಿ ರಿಯಲಿಸ್ಟಿಕ್ ಚಿತ್ರಗಳ ಬದಲಾಗಿ ಸಮಕಾಲೀನ ಶೈಲಿಯ ಮೂಲಕ ತಮ್ಮದೇ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.
          ಚಿತ್ರಕಲೆ ನಾವು ಮಾಡಿದ್ದಾಗಿರಬಾರದು, ನಮ್ಮ ಕೈಯ್ಯಲ್ಲಿರುವ ಕುಂಚದಿಂದ ಸಹಜವಾಗಿಯೇ ಅಲ್ಲೊಂದು ಚಿತ್ರ ಸೃಷ್ಟಿಯಾಗಬೇಕು. ಕಷ್ಟ ಪಟ್ಟು ಕಲ್ಪನೆ ಮಾಡಿ ಅದನ್ನು ಬಿಡಿಸುವ ಬದಲು, ತಾನಾಗಿಯೇ ಚಿತ್ರ ಸೃಷ್ಟಿಯಾಗುವುದೇ ಸುಂದರ ಎಂದುಕೊಂಡು, ಟೆಕ್ಸ್ಚರ್ ಮತ್ತು ಮ್ಯೂಸೆಸ್ ಶೀರ್ಷಿಕೆಯಲ್ಲಿ, ಕ್ಯಾನ್ವಾಸ್ ಮೇಲೆ ಚೆಲ್ಲಿದ ಬಣ್ಣಗಳನ್ನೇ ದಿಟ್ಟಿಸಿ ನೋಡುತ್ತಾ ಅದರೊಳಗಿಂದ ಹೊಸ ಚಿತ್ರವನ್ನು ಹೊರತೆಗೆದು ತಮ್ಮದೆ ಹೊಸ ಚಿತ್ರಣ ಶೈಲಿಯನ್ನು ಸೃಷ್ಟಿಸಿದ ಮಾಂತ್ರಿಕ ಕಲಾವಿದ ಕೋಟೆಗದ್ದೆ ರವಿ. 

  •   ಕೋಟೆಗದ್ದೆ ರವಿ, ಚಿತ್ರಕಲಾವಿದ
ಕಲೆಗೆ ಒಂದು ವ್ಯಾಕರಣವಿರುತ್ತದೆ. ಒಂದು ಭಾಷೆಯ ವ್ಯಾಕರಣವನ್ನು ಚೆನ್ನಾಗಿ ಕಲಿತರೆ ಆ ಭಾಷೆಯನ್ನು ಹೇಗೆ ಬೇಕಾದರೂ ಒಬ್ಬ ಬರಹಗಾರ ಬಳಸಬಹುದು. ಕಲಾವಿದ ಕಲೆಯ ವ್ಯಾಕರಣವನ್ನು ಅರ್ಥ ಮಾಡಿಕೊಂಡು, ಪ್ರಾರಂಭದಲ್ಲೇ ಒಂದು ಶೈಲಿಗೆ ಸೀಮಿತವಾಗದೆ, ಎಲ್ಲಾ ಶೈಲಿಯ ಚಿತ್ರಕಲೆಯನ್ನು ಮಾಡಿ ಕಲಿಯಬೇಕು. ನಿರಂತರ ಅಭ್ಯಾಸದಿಂದ ತಾನಾಗಿಯೇ ಅವರದ್ದೇ ಒಂದು ಶೈಲಿಯ ಚಿತ್ರಕಲೆಯ ಹುಟ್ಟು ಸಾಧ್ಯವಾಗುತ್ತದೆ. 

                                                                 

Tuesday 2 January 2018

          ನನ್ನ ಹೆಜ್ಜೆಗೆ ಗೆಜ್ಜೆಯಾಗೋ ಓ ಇನಿಯ...

          ಪ್ರತಿ ಹೆಣ್ಣು ತನ್ನ ಬಾಳಿಗೆ ಜತೆಯಾಗಿ ಬರುವ ಹುಡುಗನ ಬಗ್ಗೆ ಹೀಗೇ ಇರಬೇಕು ಎನ್ನುವ ಹಲವಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ಆದರೆ ಎಲ್ಲವೂ ಈಡೇರುವುದು ಕನಸಿನ ಮಾತೇ ಬಿಡಿ. ಒಂದು ಮರಕ್ಕೆ ಅಂಕುಡೊಂಕುಗಳಿಲ್ಲದೆ ರೆಂಬೆಗಳಿರಲು ಹೇಗೆ ಸಾಧ್ಯವಿಲ್ಲವೋ ಹಾಗೇಯೇ ಮಾನವನಾದವನು ಎಲ್ಲಾ ರೀತಿಯಲ್ಲು ಪರ್ಫೆಕ್ಟ್ ಆಗಿರಲು ಸಾಧ್ಯವೇ ಇಲ್ಲ. ಹೆಚ್ಚಿನವರಿಗೆ ಬಾಳ ಸಂಗಾತಿಯಾಗುವವ ಹಾಗಿರಬೇಕು ಹೀಗಿರಬೇಕು ಉಳಿದವರಿಗಿಂತ ಭಿನ್ನವಾಗಿರಬೇಕು ಎಂಬ ಆಸೆಯಿರುತ್ತದೆ. ಅಷ್ಟು ದೊಡ್ಡ ಆಸೆ ನನಗಿಲ್ಲ. ನನ್ನ ಜತೆಗಾರ ವಿಶಾಲವಾದ ಆಕಾಶದಲ್ಲಿ ಎಲ್ಲರನ್ನು ಕೇಂದ್ರಿಕರಿಸುವ ಚಂದಿರನೇ ಆಗಿರಬೇಕಿಲ್ಲ. ಚಂದಿರನಿಲ್ಲದ ರಾತ್ರಿಗೆ ಆಕಾಶಕ್ಕೆ ಬೆಳಕು ತುಂಬುವ ಕೋಟಿ ನಕ್ಷತ್ರಗಳಲ್ಲಿ ಒಂದು ನಕ್ಷತ್ರ ನನ್ನವನಾಗಿದ್ದರೆ, ಆ ಕ್ಷಣಕ್ಕೆ ಮುದ್ದಾಗಿ ಅರಳೋ ನೈದಿಲೆ ನಾನಾಗಿರ್ತೀನಿ ಅಷ್ಟೆ. 
          ಎಲ್ಲಾ ವಿಷಯಗಳ ಕುರಿತು ಒಂದೇ ರೀತಿಯ ಭಾವನೆ, ಯೋಚನೆಗಳಿರುವ ಹುಡುಗ ಹುಡುಗಿ ಜೋಡಿಯಾಗುವುದು ಅಪರೂಪದ ಮಾತು. ಹಾಗಿರುವಾಗ ಎಲ್ಲಾ ರೀತಿಯಲ್ಲೂ ನನ್ನ ಯೋಚನೆಯಂತೆಯೇ ಅವನ ಯೋಚನೆಯೂ ಇರಬೇಕು ಎಂಬ ಆಸೆಯಿಲ್ಲ. ಯೋಚನೆಗಳು ವಿಭಿನ್ನವಾಗಿದ್ದು, ಚರ್ಚೆಯಾಗಬೇಕು, ಕೋಪ ನೆತ್ತಿಗೇರಿ, ಊಟಕ್ಕೆ ಉಪ್ಪಿನಕಾಯಿ ರುಚಿಕೊಡುವಂತೆ ಜಗಳವೂ ಆಗಬೇಕು. ಆಗ ಮಾತ್ರ ನನ್ನ ಮುನಿಸಿಗೆ ಮುಲಾಮು ಹಚ್ಚುವ ಅವನ ಪ್ರೀತಿ ಮಾತುಗಳು ಏನೋ ವಿಶೇಷವಾಗಿರುತ್ತೆ. ಜೀವನದಲ್ಲಿ ಖುಷಿಯೊಂದೇ ಇದ್ದರೆ ಆ ಖುಷಿಯ ಮಹತ್ವ ನಮಗರಿವಾಗುವುದೇ ಇಲ್ಲವಂತೆ. ಅದೇ ಕಷ್ಟದ ರುಚಿಯುಂಡವನಿಗೆ ಒಮ್ಮೆ ಸಿಗುವ ಸಂತೋಷ ಮೃಷ್ಟಾನ್ನ ಭೋಜನವೇ ಆಗಿರುತ್ತದೆ. ದಿನವಿಡೀ ಪ್ರೀತಿಯಮಳೆ ಸುರಿಸುವುದು ಬೇಡ. ಅಬ್ಬರದ ಗುಡುಗು ಸಿಡಿಲಿನ ಮಧ್ಯೆ ಸುರಿಯುವ ಪ್ರೀತಿಮಳೆ ನನಗೆ ಬೇಕು. ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತಂತೆ, ಅದು ಗೊತ್ತಿದ್ದರೂ ನನ್ನ ಕೈಹಿಡಿಯುವ ಹುಡುಗನ ಬಗ್ಗೆ ಅದೇನೋ ಹುಚ್ಚು ಕನಸುಗಳು. ನನಗಾಗಿ ಅವನ ರುಚಿ, ಅಭಿರುಚಿಗಳನ್ನು ಬದಲಾಯಿಸಬೇಕೆಂದಿಲ್ಲ. ನನ್ನ ಅಭಿರುಚಿಯನ್ನು ಗೌರವಿಸುವವನಾಗಿರಬೇಕು.
ಮದುವೆ ದಿನ ನಾವಿಡುವ ಸಪ್ತಪದಿ, ನಮ್ಮ ಏಳು ಜನ್ಮಗಳು ಇತ್ಯಾದಿ ಇತ್ಯಾದಿ. ಆ ಏಳು ಹೆಜ್ಜೆಗಳಲ್ಲಿ ಏಳು ಜನ್ಮಗಳಲ್ಲಿ ಜತೆಯಿರುವ ಭರವಸೆ ಸಾಲದು ನನಗೆ, ಜೀವನ ಪಯಣದ ಏಳು ಬೀಳಿನ ನನ್ನ ಪ್ರತಿಯೊಂದು ಹೆಜ್ಜೆಗೂ ಜತೆಯಾಗಿ ಹೆಜ್ಜೆಯಿಟ್ಟು, ಆ ಹೆಜ್ಜೆಗಳಿಗೆ ಪ್ರೀತಿ ಗೆಜ್ಜೆನಾದವ ತುಂಬುವ ಇನಿಯನಾಗಿರಬೇಕು. ಅಗೋ ಓ ಅಲ್ಲಿದೆ ನೋಡು ಎಂದು ಕಾಣದ ಧ್ರುವತಾರೆಯ ತೋರಿಸುತ್ತಾ ಪ್ರತಿದಿನ ತೋಳ ತುಂಬ ಪ್ರೀತಿಯ ಅಪ್ಪುಗೆಯನಿಟ್ಟರೆ ಸಾಕು ನನ್ನವನು. 
          ನನ್ ಬರ್ತ್‍ಡೇಗೆ ಅದ್ದೂರಿ ಗಿಫ್ಟ್ ಕೊಡಲೇಬೇಕು ಎನ್ನುವ ಹಠ ನನಗಿಲ್ಲ. ನನಗೆ ದೇಶ ಸುತ್ತೋದು ಕೋಶ ಓದೋದು ಅಂದ್ರೆ ಬಹಳ ಅಚ್ಚು ಮೆಚ್ಚು. ಮನಸ್ಸಿನ ನಿರಾಳಕ್ಕೋ, ಜ್ಞಾನ ವೃದ್ಧಿಗೋ ತಿಂಗಳಿಗೆ ಒಂದಲ್ಲದಿದ್ದರೂ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ, ಪುಟ್ಟ ಪ್ರವಾಸ, ನನ್ ಬರ್ತ್‍ಡೇಗೆ ಪುಸ್ತಕವನ್ನೇ ಗಿಫ್ಟ್ ಕೊಡಬೇಕು. ಎದೆಚಿಪ್ಪಿನೊಳಗೆ ಕನಸಿನ ಹುಡುಗನೆ ಬಗ್ಗೆ ಸಾವಿರಾರು ಕನಸುಗಳು ಇಲ್ಲವೇ ಇಲ್ಲ. ನನ್ನ ಬಾಳಿಗೂ ಒಬ್ಬ ಸಂಗಾತಿ ಬೇಕು ಎನ್ನುವ ಆಸೆ ಇದೆ. ಆ ಹುಡುಗ ಅಂದಕ್ಕೆ ಇನ್ನೊಂದು ಹೆಸರಾಗಿರಬೇಕೆಂದೇನಿಲ್ಲ,  ನನ್ನ ಮನಸ್ಸಿನ ಭಾವನೆಗಳಿಗೆ ಪ್ರತಿರೂಪ ಅವನಾಗಿರಬೇಕು. 
                                                                                                                                    
                                                                                                                                  ಮೇಘದೀಪ...