Wednesday 2 August 2017

ಚಳ್ಳೆಹಣ್ಣು ತಿಂದಿದ್ದೀರಾ!

          ಹಣ್ಣಿನ ಗೊಂಚಲುಗಳ ಭಾರಕ್ಕೆ ಬಾಗಿದ್ದ ರೆಂಬೆ. ಸಣ್ಣ ಸಣ್ಣ ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಗಳು, ನೋಡಲಂತು ತುಂಬಾ ಆಕರ್ಷಣೀಯವಾಗಿದ್ದವು. ಕುತೂಹಲದಿಂದ ಹಣ್ಣು ತಿಂದು ನೋಡಿದರೆ, ಒಗರು, ಹುಳಿ, ಸಿಹಿ ಮಿಶ್ರಿತ ಅಂಟು ರುಚಿ. ಇದರ ಹೆಸರೇ ಹೇಳುವಂತೆ ಒಂದು ಕ್ಷಣ ಚಳ್ಳೆ ಹಣ್ಣು ತಿಂದಂತೇ ಆಯಿತು! ಆದರೆ ತಿನ್ನುವುದರಲ್ಲಿ ಯಾವುದೇ ದೋಷವಿಲ್ಲ.
          ಹತ್ತರಿಂದ ಹದಿನೈದು ಮೀಟರ್ ಎತ್ತರ ಬೆಳೆಯುವ ಈ ಮರವನ್ನು ಮಣ್ಣಡಕೆ, ಕಿರಿಚೆಳ್ಳೆ ಮರ, ತುಳುವಿನಲ್ಲಿ ಉರ್ಸಲ್ಲೆ, ಇಂಗ್ಲಿಷ್‍ನಲ್ಲಿ ಸೆಬೆಸ್ಟನ್ ಪ್ಲಮ್ (Sebestan Plum), ಆಸ್ಸಿರಿಯನ್ ಪ್ಲಮ್ (Assyrian Plum) ಎಂದು ಕರೆಯುತ್ತಾರೆ. ಕನ್ನಡದಲ್ಲಿ ಚೆಡ್ಲು, ಚಳ್ಳಂಟ ಎಂದು ಸಂಸ್ಕøತದಲ್ಲಿ ಉದ್ಖಾಲಕ, ಬೌವರಕ ಎಂತಲೂ ಕರೆಯುತ್ತಾರೆ. ಬೊರಾಜಿನೇಸಿ (Boraginaceae) ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಕಾರ್ಡಿಯಾ ಮಿಕ್ಸ ಎಲ್. ಸಿ. (Cordia myxa L. C.)
          ಏಷ್ಯಾ ಮೂಲದ ಗಿಡವಾಗಿರುವ ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದಾಗಿದೆ. ನಯವಾದ ಕಾಂಡವನ್ನು ಹೊಂದಿರುವ ಮರ. ತಳ್ಳನೆಯ ಇಳಿ ಬಿದ್ದ ರೆಂಬೆಗಳಲ್ಲಿ ಅಂಡಾಕಾರದ ಚೂಪು ತುದಿಯ ದಟ್ಟ ಹಸಿರು ಎಲೆಗಳು 6-10 ಸೆಂ.ಮೀ ಉದ್ದವಿರುತ್ತವೆ. ಎಪ್ರಿಲ್ ಮೇ ತಿಂಗಳಲ್ಲಿ ಮರ ಹೂ ಬಿಡುತ್ತದೆ.  ತೊಟ್ಟನ್ನು ಹೊಂದಿಲ್ಲದ, ನಸು ಹಳದಿ ಅಥವಾ ಬಿಳಿಯ ಬಣ್ಣದ ಚಿಕ್ಕ ಹೂಗಳ ಗೊಂಚಲುಗಳು ಹಸಿರು ಕಾಯಿಗಳಾಗಿ ಜುಲೈ ಹೊತ್ತಿಗೆ ಮಾಗಿದ ಹಣ್ಣುಗಳಾಗಿರುತ್ತವೆ. ಹಣ್ಣಗಳು ತಿಳಿ ಹಳದಿ ಅಥವಾ ತಿಳಿ ಕೆಂಪು ಬಣ್ಣದಿಂದಲೂ ಕೂಡಿರುತ್ತವೆ.
          ಹಣ್ಣಿನೊಳಗೊಂದು ಬೀಜವಿದ್ದು, ಬೀಜವು ಅರೆಪಾರದರ್ಶಕವಾದ ಸಿಹಿ ಮತ್ತು ಅಂಟು ತಿರುಳಿನಿಂದ ಸುತ್ತುವರೆದಿರುತ್ತದೆ. ತಿರುಳಿಗೆ ಸಿಪ್ಪೆಯು ರಕ್ಷಾ ಕವಚವಾಗಿ ರಚನೆಗೊಂಡಿದೆ. ಸಿಪ್ಪೆಯಿಂದ ಹಣ್ಣನ್ನು ಹೊರತೆಗೆದು ತಿನ್ನಲಾಗುತ್ತದೆ. ಹಣ್ಣಿನ ತುದಿಯಲ್ಲಿ ಎರಡು ಬೆರಳುಗಳಿಂದ ಒತ್ತಿದರೆ, ಹಣ್ಣು ಸಿಪ್ಪೆಯ ಒಳಗಿಂದ ಒಮ್ಮೆಲೆ ಹೊರ ಬರುತ್ತದೆ. ಒಳಗೆ ಅಂಟು ನೀರು ಇರುವುದರಿಂದ ಕೈಗೆ ಲೋಳೆಯ ಅನುಭವ ನೀಡುತ್ತದೆ. ಹಲವಾರು ಔಷಧೀಯ ಗುಣಗಳುಳ್ಳ ಈ ಅಂಟು ತಿರುಳು, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ, ಕಫ, ಕೆಮ್ಮು, ಕರುಳುರೋಗ, ಪಿತ್ತಕೋಶದ ಕಾಯಿಲೆಗಳಿಗೆ ಉತ್ತಮ ಶಮನಕಾರಿ ಎನ್ನುತ್ತಾರೆ ತಜ್ಞರು. ಹಣ್ಣು ಪ್ರೋಟೀನ್, ಶರ್ಕರಪಿಷ್ಟ, ಕಬ್ಬಿಣ, ಪೊಟ್ಯಾಷಿಯಂ, ಮೆಗ್ನೇಷಿಯಂಗಳಂತಹ ಅಂಶಗಳಿಂದ ಪೌಷ್ಟಿಕಾಂಶಯುಕ್ತವಾಗಿದೆ. ಹಣ್ಣು ಒಗರಾಗಿರುವುದರಿಂದ ಹೆಚ್ಚಿನವರು ತಿನ್ನಲು ಹಿಂಜರಿಯುತ್ತಾರೆ. ತಿನ್ನುವವರ ನಾಲಗೆ ಇದು ಸಿಹಿಯ ಅನುಭವವನ್ನೂ ನೀಡುತ್ತದೆ. ಬೀಜದೊಂದಿಗೆ ಹಣ್ಣನು ನುಂಗುವ ಮೂಲಕ ಹಣ್ಣು ತಿನ್ನಬಹುದು. ಕೆಲವರು ಹಣ್ಣಿನ ತಿರುಳನ್ನು ನಾಲಗೆಯಿಂದ ಚಪ್ಪರಿಸಿ ಬೀಜವನ್ನು ಉಗುಳುತ್ತಾರೆ.
          ಮಣ್ಣಡಕೆ ಮರದ ಸೊಪ್ಪನ್ನು ಪಶುಗಳಿಗೆ ಮೇವಾಗಿ ಉಪಯೋಗಿಸುತ್ತಾರೆ. ಮರದ ತೊಗಟೆಯಿಂದ ಮಾಡಿದ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖವಾಗುವುದು. ಗಾಯಗಳಿದ್ದಲ್ಲಿ ಅದಕ್ಕೆ ಮರದ ತೊಗಟೆಯಿಂದ ಮಾಡಿದ ಗಂಧವನ್ನು ಲೇಪಿಸಿದರೆ ಗಾಯ ಕಡಿಮೆಯಾಗುವುದು. ಚಳ್ಳೆಹಣ್ಣಿನ ಎಳೆಮಿಡಿಗಳಿಂದ ಉಪ್ಪಿನಕಾಯಿ ತಯಾರಿಸಲಾಗುವುದು. ಹಣ್ಣಿನಿಂದ ಮದ್ಯ ತಯಾರಿಕೆ ಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಅಕ್ಕಿಹಿಟ್ಟಿನೊಂದಿಗೆ ಮಣ್ಣಡಕೆ ಹಣ್ಣನ್ನು ಸೇರಿಸಿ ದೋಸೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಣ್ಣಡಕೆ ಮರ ಎಲ್ಲೂ ಕಾಣದಾಗಿದೆ. ಅಳಿವಿನತ್ತ ಸಾಗುತ್ತಿದೆ. ಇದರ ರೆಂಬೆಗಳಿಂದ ಅಥವಾ ಬೀಜಗಳಿಂದ ಹೊಸ ಗಿಡಗಳನ್ನು ಪಡೆಯಬಹುದು. ಕೋತಿ, ಪಕ್ಷಿಗಳು ಇದರ ಹಣ್ಣನ್ನು ತಿಂದು ಬೀಜಗಳನ್ನು ಪಸರಿಸುವ ಮೂಲಕ ಗಿಡಗಳ ಅಭಿವೃದ್ಧಿಗೆ ಕಾರಣವಾಗುತ್ತಿವೆ. ಹಣ್ಣಿನಲ್ಲಿರುವ ಗಮ್‍ನಂತಹ ಪದಾರ್ಥವನ್ನು ಕಾಗದಗಳನ್ನು ಅಂಟಿಸಲು ಉಪಯೋಗಿಸುತ್ತಾರೆ. ಕೃಷಿ ಪುಕರಣಗಳಿಗಾಗಿ ಮತ್ತು ಕೆಲವು ಕೆತ್ತನೆ ಕೆಲಸಗಳಿಗಾಗಿ ಈ ಮರ ಬಳಕೆಯಾಗುತ್ತದೆ.

ಕರಾವಳಿಯಲ್ಲಿ ನರ್ತೆ ವಿಶೇಷತೆ

         
ಪೃಥ್ವಿಯ ಪ್ರಾಣಿ ಸಮ್ರಾಜ್ಯದಲ್ಲಿ ಬೆನ್ನೆಲುಬುಗಳಿಲ್ಲದ ಪ್ರಾಣಿಗಳ ಪ್ರಧಾನ ವರ್ಗ ಮೃದ್ವಂಗಿಗಳದು. ಹೆಸರೇ ಸೂಚಿಸುವಂತೆ ಈ ವರ್ಗದ ಪ್ರಾಣಿಗಳದು ಮೆತ್ತನೆಯ ಮುದ್ದೆಯಂತಹ ಶರೀರ, ಅಸ್ಥಿಪಂಜರ ರಹಿತ ದೇಹ ನಿರ್ಮಿತಿ. ತಮ್ಮ ಇಡೀ ಶರೀರವನ್ನು ಆವರಿಸುವಂತೆ, ತಮ್ಮ ಶರೀರ ರಕ್ಷಣೆಗೂ ಆಹಾರ ಗಳಿಕೆಗೂ, ಚಲನಶೀಲತೆಗೂ ಒಪ್ಪವಾಗುವಂತೆ ಗಟ್ಟಿಯಾದ ಬಾಹ್ಯ ಕವಚವೊಂದು ರಚನೆಗೊಂಡಿರುತ್ತದೆ. ಆ ಚಿಪ್ಪಿನೊಳಗೆ ಬದುಕುತ್ತವೆ. ಹೀಗೆ ಬೇಸಿಗೆಯಲ್ಲಿ ಮಣ್ಣಿನಡಿಯಲ್ಲಿ ಮಾಯವಾಗಿ, ಮುಂಗಾರು ಮಳೆ ಪ್ರಾರಂಭವಾಗಿ, ಗದ್ದೆಗಳಲ್ಲಿ ನೀರು ನಿಲ್ಲುತ್ತಿದ್ದಂತೆ, ಮಣ್ಣು ಮೆದುವಾಗತೊಡಗುತ್ತದೆ. ಆಗ ಮೆಲ್ಲಗೆ ಮಣ್ಣಿನಿಂದ ಹೊರಬಂದು, ಒಂದುಕಡೆಯಿಂದ ಇನ್ನೊಂದು ಕಡೆಗೆ ನೀರಿನ ಹರಿವಿನೊಂದಿಗೆ ಸಂಚರಿಸಲು ಶುರು ಮಾಡುವುದೇ ಸುಂದರ ಮೃದ್ವಂಗಿ ನರ್ತೆ. ಕರಾವಳಿಯ ಆಡುಭಾಷೆ ತುಳುವಿನಲ್ಲಿ ಇದು ನರ್ತೆ ಎಂದೇ ಚಿರಪರಿಚಿತ. ಗಾತ್ರದಲ್ಲಿ ತುಂಬಾ ಚಿಕ್ಕದಿದ್ದರೆ ಅವುಗಳನ್ನು ಗುಳ್ಳ ಎಂದು ಕರೆಯುತ್ತಾರೆ.
          ಸಾಮಾನ್ಯವಾಗಿ ಹೊಲ ಗದ್ದೆಗಳಲ್ಲಿ, ಗದ್ದೆ ಬದುಗಳಲ್ಲಿ, ನೀರಿನ ಚಿಕ್ಕ ಕಣಿವೆಗಳ ಬದಿಯಲ್ಲಿ, ಮಾತ್ರ ಕಾಣಸಿಗುವ ನರ್ತೆಗಳಿಗೆ ಎಲೆ, ಕೆಸರು, ಮಣ್ಣು, ಪಾಚಿಗಳೇ ಆಹಾರ. ಹುಲ್ಲು ತೋಪುಗಳಲ್ಲಿ ಅಂಟಿಕೊಂಡು, ನಿಧಾನವಾಗಿ, ತನ್ನ ಅಂಟು ದೇಹಕ್ಕೆ ರಕ್ಷಣಾ ಕವಚವನ್ನು ಸುತ್ತಿಕೊಂಡು ಸಾಗುವ ಇವುಗಳು, ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಆಕರ್ಷಣೀಯ ಮೃದ್ವಂಗಿ. ಆದರೀಗ ಮಳೆಗಾಲದಲ್ಲಿಯೂ ಅಪರೂಪದ ಜೀವಿಯಾಗಿ ಬಿಟ್ಟಿವೆ ಇವುಗಳು.    
          ಹಟ್ಟಿ ಗೊಬ್ಬರ ಹಾಕುತ್ತಿದ್ದ ಒಂದು ಕಾಲದಲ್ಲಿ ಧಾರಾಳವಾಗಿ ಸಿಗುತ್ತಿದ್ದ ನರ್ತೆ, ಈಗ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಅದರ ಸಂತತಿ ಅಳಿವಿನಂಚಿನಲ್ಲಿದೆ. ಇಷ್ಟೇ ಅಲ್ಲದೆ ಅವುಗಳು ಭೂಮಿ ಮೇಲೆ ಬಂದು ಸಂತಾನಭಿವೃದ್ಧಿ ಮಾಡುವ ಅವಧಿಯಲ್ಲೇ ಅವುಗಳನ್ನು ಹಿಡಿದು, ನಾವು ಆಹಾರವಾಗಿ ಬಳಸುವುದರಿಂದ ಹಾಗೂ ಗದ್ದೆಗಳೇ ಮಾಯವಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ನರ್ತೆ ಅಪರೂಪದ ಅತಿಥಿಯಾಗಿ ಪರಿಣಮಿಸಿದೆ.
          ಗದ್ದೆಯಲ್ಲಿರುವ ಕ್ರಿಮಿಕೀಟಗಳನ್ನು ತಿಂದು ಬದುಕುವ ಇವುಗಳು ಮಣ್ಣಿನ ಒಳಗೂ ಕ್ರಿಯಾಶೀಲವಾಗಿರುವುದರಿಂದ ರೈತನಿಗೆ ತುಂಬಾ ಸಹಕಾರಿಯಾಗಿದ್ದವು. ಹಾಗಾಗಿ ಇವುಗಳನ್ನು ಗದ್ದೆಯಲ್ಲಿ ಬಿಟ್ಟು ಬೆಳೆಸುತ್ತಿದ್ದರು. ಹೀಗೆ ಪರೋಕ್ಷವಾಗಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ, ಉತ್ತಮ ಬೆಳೆ ಬರುವಲ್ಲಿ ಇದೂ ಒಂದು ಕಾರಣವಾಗುತ್ತಿತ್ತು. ಆದ್ದರಿಂದ ನರ್ತೆಯನ್ನು ರೈತನ ಮಿತ್ರ ಎಂದೇ ಕರೆಯುತ್ತಿದ್ದರು. ಆದರೆ ಇದು ರೈತನಿಗೆ ಶತ್ರುವೂ ಹೌದು. ಯಾಕೆಂದು ಕೇಳುತ್ತೀರಾ? ನರ್ತೆ ಇರುವ ಗದ್ದೆಯಲ್ಲಿ ಬೀಜ ಬಿತ್ತನೆ ಮಾಡಿ, ಮೊಳಕೆಯೊಡೆಯುತ್ತಿದ್ದಂತೆ ನರ್ತೆಗಳು ಮೊಳಕೆ ತಿನ್ನಲು ಶುರು ಹಚ್ಚುತ್ತವೆ. ಬೆಳೆ ನಾಶಮಾಡುತ್ತವೆ. ಹಾಗಾಗಿ ಹೆಚ್ಚಿನ ಭಾಗಗಳಲ್ಲಿ ಉಳುಮೆ ಸಮಯದಲ್ಲಿಯೇ ನರ್ತೆಗಳನ್ನು ಗದ್ದೆಯಿಂದ ತೆಗೆದು ಹೊರಹಾಕಿ, ನಂತರ ಬಿತ್ತನೆ ಮಾಡುತ್ತಾರೆ. ಇಲ್ಲದಿದ್ದಲ್ಲಿ ನರ್ತೆ ಇರುವ ಗದ್ದೆಯಲ್ಲಿ ಹೆಚ್ಚಾಗಿ ನೇಜಿ ನೆಡುವುದನ್ನೇ ರೂಢಿಸಿಕೊಂಡಿರುತ್ತಾರೆ. 15 ರಿಂದ 20 ವರ್ಷಗಳವರೆಗೆ ಬದುಕಬಲ್ಲ ನರ್ತೆ, ನೀರಿನಿಂದ ಬೇರ್ಪಡಿಸಿದ ಎರಡು ಮೂರು ದಿನಗಳವರೆಗೆ ಮಾತ್ರವೇ ಜೀವಂತವಾಗಿರುತ್ತವೆ. ಈಗ ಗದ್ದೆ ಉಳುಮೆಗೆ ರೈತರು ಯಂತ್ರೋಪಕರಣಗಳನ್ನು ಅವಲಂಭಿಸಿರುವುದರಿಂದ, ಒಂದು ರೀತಿಯಲ್ಲಿ ರೈತರೇ ಇದರ ನಾಶಕರಾಗಿದ್ದಾರೆ.
          ಉದ್ದ ಮೀಸೆಯನ್ನು ಹೊರಹಾಕುತ್ತಾ, ಮಳೆಹನಿ ಬೀಳುತ್ತಿದ್ದಂತೆ, ಗದ್ದೆಗಳಲ್ಲಿ ಅಲ್ಲಿ ಇಲ್ಲಿ ನರ್ತೆಗಳು ಕಾಣತೊಡಗುತ್ತದೆ. ಉಲುಮೆ ಮಾಡಿದ ನಂತರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ.  ನೇಜಿ ನೆಡುವ ಹೊತ್ತಲ್ಲಿ ಮಹಿಳೆಯರೆಲ್ಲಾ ನೇಜಿ ನೆಡುತ್ತಾ ತಮ್ಮ ಸೆರಗಿನಲ್ಲಿ ನರ್ತೆಗಳನ್ನು ಆಯ್ದು ತುಂಬಿಸುವ ವೈಖರಿ ಬೇರೆಲ್ಲೂ ನೋಡಲು ಸಿಗದ ವೈಭವ. ಆದರೆ ಅದೆಲ್ಲಾ ಈಗ ತಾಂತ್ರಿಕ ಯುಗದ ಸೆರೆಯಾಗಿಬಿಟ್ಟಿವೆ. ಆದರೆ ಇತ್ತೀಚೆಗೆ ಉಳುಮೆ ಮಾಡಿದ ಹೊಲದಿಂದ ಪಾಳುಬಿದ್ದ ಗದ್ದೆಯಲ್ಲಿ ಹೆಚ್ಚು ದೊರೆಯುತ್ತದೆ. ರಾಸಾಯನಿಕಗಳ ಹಾವಳಿಯಿಂದ ಆ ಗದ್ದೆಗಳು ದೂರವಿರುವುದೇ ಇದಕ್ಕೆ ಪ್ರಮುಖ ಕಾರಣ. ಉಳುಮೆ ಮಾಡದ ಹೊಲಗಳಲ್ಲಿ ನೀರು ತಿಳಿಯಾಗಿರುವುದರಿಂದ ಬಹುಬೇಗನೆ ನರ್ತೆಗಳು ಕಣ್ಣಿಗೆ ಗೋಚರಿಸುತ್ತವೆ. ತಂಪಾದ ಜಾಗವನ್ನು ನರ್ತೆಗಳು ಬಯಸುವುದರಿಂದ, ಸೂರ್ಯನ ಬಿಸಿಲು ಬೀಳುತ್ತಿದ್ದಂತೆ, ಹುಲ್ಲಿನೆಡೆಗೋ, ಮಣ್ಣಿನಡಿಗೋ ಹೋಗಿ ಅವಿತುಕುಳಿತುಕೊಳ್ಳುತ್ತವೆ. ರಾತ್ರಿಯ ಹೊತ್ತಲ್ಲಿ ಎಲ್ಲವೂ ಹೊರಬರುತ್ತವೆ. ಮುಂಜಾವಿನಲ್ಲಿ ಮತ್ತು ಇಳಿಸಂಜೆ ಹೊತ್ತಲ್ಲಿ ತಂಪು ವಾತಾವರಣಕ್ಕೆ ಮಣ್ಣಿನೊಳಗೆ, ಹುಲ್ಲಿನೆಡೆಯಲ್ಲಿ ಅವಿತುಕುಳಿತ ನರ್ತೆಗಳೆಲ್ಲವೂ ಮೆಲ್ಲಗೆ  ಹೊರಬರತೊಡಗುತ್ತವೆ ನರ್ತೆಗಳು ಮೂರು ನಾಲ್ಕು ಒಂದಕ್ಕೊಂದು ಅಂಟಿಕೊಂಡು ಇರುವುದನ್ನು ನೋಡಲು ಬಲು ಸೊಗಸು. ಬೆಳ್ಳಂಬೆಳಗ್ಗಿನ ಹೊತ್ತಲ್ಲೇ ಹೆಚ್ಚಿನವರು ನರ್ತೆಗಳನ್ನರಸಿ ಗದ್ದೆಗಿಳಿಯುತ್ತಾರೆ. ಆರಾಮವಾಗಿ ಚಿಪ್ಪಿನೊಳಗಿಂದ ತನ್ನ ದೇಹವನ್ನು ಹೊರಹಾಕಿ ವಿರಮಿಸುತ್ತಾ ವಿಹಾರ ಮಾಡುತ್ತಿರುವ ನರ್ತೆಗಳಿಗೆ ಮಾನವನ ಸುಳಿವು ಬೇಗನೆ ತಿಳಿಯುತ್ತದೆ. ನೀರಿನಲ್ಲಾಗುವ ಶಬ್ಧ ಮತ್ತು ಬೇರೆ ವಸ್ತುಗಳಿಂದ ಅಥವಾ ಕೈಗಳಿಂದ ಅವುಗಳನ್ನು ಸ್ಪರ್ಶಿಸುತ್ತಿದ್ದಂತೆ, ಬಸವನಹುಳು, ಸಹಸ್ರಪದಿಗಳಂತೆ ಇವುಗಳೂ ನಾಚಿಕೆಯಿಂದಲೋ, ಜೀವ ಭಯದಿಂದಲೋ ತಕ್ಷಣ ದೇಹವನ್ನು ತನ್ನ ಗಟ್ಟಿಯಾದ ಶಂಖಾಕೃತಿಯ ಚಿಪ್ಪಿನೊಳಗೆ ಹಾಕಿ ಮುಚ್ಚಳದಿಂದ ಗಟ್ಟಿಯಾಗಿ ಮುಚ್ಚಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ತನ್ನ ದೇಹವನ್ನು ಮಾತ್ರವೇ ರಕ್ಷಾ ಕವಚದೊಳಗೆ ಭದ್ರ ಮಾಡಿಕೊಳ್ಳುತ್ತವೆಯೇ ಹೊರತಾಗಿ ಮನುಷ್ಯನಿಂದ ತಪ್ಪಿಸಿಕೊಂಡು ತಕ್ಷಣ ಮಣ್ಣಿನೊಳಗೆ ಸೇರಿಕೊಳ್ಳುವ ಸಾಮಥ್ರ್ಯ ನರ್ತೆಗಳಿಗಿಲ್ಲ. ನೀರಿನಲ್ಲೂ, ಮಣ್ಣಿನೊಳಗೂ ಜೀವಿಸಬಲ್ಲ ಇದೊಂದು ಉಭಯವಾಸಿ ಪ್ರಾಣಿ.
          ಹಿಂದಿನ ಕಾಲದಲ್ಲಿ ಕರಾವಳಿ ಭಾಗದ ಕೆಲವೆಡೆ, ಮಳೆಗಾಲದ ಸಮಯದಲ್ಲಿ ಹೆಚ್ಚಿನ ಮನೆಗಳಲ್ಲಿ ದಿನನಿತ್ಯದ ವಿಶೇಷ ಆಹಾರ ಇದಾಗಿತ್ತು. ಇಂದಿಗೂ ನರ್ತೆಯ ರುಚಿ ಬಲ್ಲ ಕೆಲವರು, ನರ್ತೆ ಹುಡುಕಾಟಕ್ಕಿಳಿಯುತ್ತಾರೆ. ಇವುಗಳನ್ನು ಹುಡುಕುವುದು ಸುಲಭದ ಮಾತಲ್ಲ. ಕೆಸರೇ ಆಹಾರವಾಗಿರುವ ಇದನ್ನು ಗದ್ದೆಯಿಂದ ಆಯ್ದ ತಕ್ಷಣ ಆಹಾರವಾಗಿ ಉಪಯೋಗಿಸಲು ಸಾಧ್ಯವಿಲ್ಲ. ಆಯ್ದ ನರ್ತೆಗಳನ್ನು ಒಂದು ಪಾತ್ರದಲ್ಲಿ ಹಾಕಿ, ನೀರನ್ನು ಹಾಕಿ ಮುಚ್ಚಳದಿಂದ ಎರಡು ದಿನಗಳವರೆಗೆ ಹಾಗೇ ಬಿಡಬೇಕು. ಎರಡು ದಿನದಲ್ಲಿ ನರ್ತೆಯೊಳಗಿದ್ದ ಕೆಸರು, ಪಾಚಿ ಬೇರ್ಪಟ್ಟಿರುವುದನ್ನು ಕಾಣಬಹುದು. ನಂತರ ಇದನ್ನು ಶುಚಿಗೊಳಿಸಿ ಖಾದ್ಯದಲ್ಲಿ ಬಳಸುವುದು ವಾಡಿಕೆ. ಖಾಲಿ ನೀರಿನಲ್ಲಿ ಬೇಯಿಸಿದಾಗ ಚಿಪ್ಪಿನ ಮುಚ್ಚಳ ಸುಲಭವಾಗಿ ತೆಗೆಯಲು ಸಾಧ್ಯ. ಚಿಪ್ಪಿನೊಳಗಿಂದ ಮಾಂಸವನ್ನು ತೆಗೆದು ಅಥವಾ ಚಿಪ್ಪಿನೊಂದಿಗೆ ನರ್ತೆಯನ್ನು ವಿವಿಧ ಖಾದ್ಯಗಳಲ್ಲಿ ಬಳಸಬಹುದು. ಇಂದಿಗೂ ಕರಾವಳಿ ಭಾಗದಲ್ಲಿ ನರ್ತೆಯಿಂದ ಬಗೆ ಬಗೆಯ ರುಚಿ ರುಚಿಯಾದ ಖಾದ್ಯಗಳನ್ನು ಮಾಡುವವರಿದ್ದಾರೆ. ಇದೊಂದು ಮಳೆಗಾಲದ ಒಳ್ಳೆಯ ಆಹಾರವೂ ಹೌದು. ಸೌತೆನರ್ತೆ, ಬಸಲೆನರ್ತೆ, ನರ್ತೆಪುಂಡಿ, ನರ್ತೆಗಸಿ ಇತ್ಯಾದಿಗಳಿಂದ ನರ್ತೆ ಇಂದಿಗೂ ಜನರ ಬಾಯಲ್ಲಿ ನೀರೂರಿಸುತ್ತದೆ. ಇದರ ರುಚಿ ತಿಂದವನೇ ಬಲ್ಲ. ನರ್ತೆ ಖಾದ್ಯ ರುಚಿಕರ ಮಾತ್ರವಲ್ಲದೆ ಆರೋಗ್ಯಕರವೂ ಹೌದು. ನರ್ತೆಯ ಖಾದ್ಯ ಸೊಂಟನೋವು, ಬೆನ್ನುನೋವು, ಮುಂತಾದ ನೋವುಗಳಿಗೆ ಸಿದ್ಧೌಷಧ ಎನ್ನುವುದು ಹಳ್ಳಿಗರ ನಂಬಿಕೆ. ಹಳ್ಳಿ ಪ್ರದೇಶದಲ್ಲಿ ಸಾಮಾನ್ಯವೆನಿಸಿಕೊಂಡಿರುವ ನರ್ತೆ, ಪೇಟೆಗಳಲ್ಲಿ ಬಲು ಬೇಡಿಕೆಯನ್ನು ಉಳಿಸಿಕೊಂಡಿದೆ. ಹಳ್ಳಿಯ ಕೆಲ ಮಹಿಳೆಯರು ಮಳೆಗಾಲದಲ್ಲಿ ನರ್ತೆಗಳನ್ನು ಹಿಡಿದು ಮಾರಾಟ ಮಾಡುವುದನ್ನೂ ಒಂದು ಉದ್ಯೋಗವನ್ನಾಗಿಸಿಕೊಂಡಿರುವರು. ಎಲ್ಲಾ ಕಾಲದಲ್ಲಿ ಸಿಗದೆ, ಮಳೆಗಾಲದಲ್ಲಿ ಮಾತ್ರ ಸಿಗುವುದರಿಂದ ಹೆಚ್ಚಿನ ಬೇಡಿಕೆಯನ್ನು ಇದು ನಿರ್ಮಿಸಿಕೊಂಡಿದೆ. ಹಾಗೂ ಉಳಿದ ಮೀನು, ಮರುವಾಯಿಗಳಿಗಿಂತಲೂ ಅಧಿಕ ಬೆಲೆಗೆ ಮಾರಾಟವಾಗುವುದೇ ಒಂದು ವಿಶೇಷ.
          ಗದ್ದೆ ಬದುಗಳಲ್ಲಿ ಬೆಳೆದ ಹುಲ್ಲುಗಳ ಎಡೆಯಲ್ಲಿ, ಬಿಲಗಳಲ್ಲಿ ರಾಶಿ ರಾಶಿ ಮೊಟ್ಟೆಗಳನ್ನಿಟ್ಟು ತನ್ನ ಸಂತತಿಯನ್ನು ಬೆಳೆಸತೊಡಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮೊಟ್ಟೆಗಳ ಗುಂಪು, ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಸುಮಾರು 200 ರಿಂದ 300 ಮೊಟ್ಟೆಗಳನ್ನಿಟ್ಟು ಸಂತತಿಯನ್ನು ವೃದ್ಧಿಸುತ್ತವೆ ಇವುಗಳು.
ನರ್ತೆಯನ್ನು ತಿಂದ ನಂತರ ಚಿಪ್ಪನ್ನು ಎಸೆಯುವ ಬದಲು ಅದರಿಂದ ಕಲಾತ್ಮಕ ಚಿತ್ರಗಳನ್ನು ಬರೆಯಬಹುದು. ಚಿಪ್ಪುಗಳನ್ನು ಪೋಣಿಸಿ ಉದ್ದನೆಯ ಹಾರಗಳಾಗಿ ಮಾಡುತ್ತಾರೆ. ಚಿಪ್ಪಿನ ಮುಚ್ಚಳದಿಂದ ವಿವಿಧಾಕೃತಿಗಳನ್ನು ಬರೆದು ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸುವರು. ಇವುಗಳು ನೋಡಲು ತುಂಬಾ ಆಕರ್ಷಣೀಯವಾಗಿರುವುದು. ಜೊತೆಗೆ ಮನೆಯ ಅಂದವನ್ನೂ ಹೆಚ್ಚಿಸುತ್ತವೆ.

ಬಿದಿರಿನ ಕುಡಿ ಕಣಿಲೆ

          ಕೃಷ್ಣನ ಕೈಯ್ಯಲ್ಲಿರುವ ಕೊಳಲಿನಿಂದ ಹಿಡಿದು, ಬಿಳಿಹಾಳೆಗಳು, ಪೀಠೋಪಕರಣಗಳು, ಮನೆಗಳು, ಕರಕುಶಲವಸ್ತುಗಳ ನಿರ್ಮಾಣದ ವರೆಗೆ ವಿವಿಧ ಕ್ಷೇತ್ರದಲ್ಲಿ ಉಪಯೋಗಿಸಲ್ಪಡುವ ಬಿದಿರು ಆಹಾರವಾಗಿಯೂ ಉಪಯೋಗಿಸಲ್ಪಡುತ್ತವೆ. ಕರಾವಳಿಯಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಆಹಾರದಲ್ಲಿ ಬಳಸಲಾಗುತ್ತಿರುವ ವಿಶೇಷ ತರಕಾರಿ ಕಳಲೆ. ಆದರೆ ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿನ, ಅದ್ಭುತ ಆಹಾರ ಪದಾರ್ಥ ಎಂದರೆ ಎಳೆ ಬಿದಿರು. ತುಳುವಿನಲ್ಲಿ ಕಣಿಲೆ ಎನ್ನುವ ಇದು ಘಟ್ಟಪ್ರದೇಶ, ಮಲೆನಾಡಿನಲ್ಲಿ ಪುಷ್ಕಳವಾಗಿ ದೊರೆಯುವ ಸಸ್ಯರಾಶಿ.
          ವರ್ಷಋತುವಿನ ನೆಂಟನಿವನು. ಮಳೆಯೊಂದಿಗೆ ಆಗಮಿಸುವ ಇದು ಸಪ್ಟಂಬರ್ ತಿಂಗಳವರೆಗೆ ಲಭ್ಯವಿರುತ್ತದೆ. ದಟ್ಟವಾಗಿ ಬೆಳೆದ ಬಿದಿರ ಮೆಳೆಗಳ ಬುಡದಲ್ಲಿ, ಮಳೆ ಬಿದ್ದು ಮಣ್ಣು ಮೆದುವಾದಂತೆ ಹೊರ ಬರುವ ಬಿದಿರ ಮೊಳಕೆಗಳು ನೋಡಲೂ ಬಹಳ ಆಕರ್ಷಣೀಯವಾಗಿ ಕಾಣಿಸುತ್ತವೆ. ಮೊಳಕೆ ಬಂದ ಒಂದರಿಂದ ಎರಡು ವಾರಗಳ ನಂತರದಲ್ಲಿ ತಿನ್ನಲು ಯೋಗ್ಯವಾದ ಕಳಲೆಯಾಗಿ ದೊರೆಯುತ್ತದೆ.
          ಶ್ರಾವಣ ಮಾಸ(ಸೋನ ತಿಂಗಳು) ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನವರು ಗುಡ್ಡ ಕಾಡುಗಳಲ್ಲಿರುವ ಬಿದಿರ ಮೆಳೆಗಳ ಬುಡದಲ್ಲಿರುತ್ತಾರೆ. ಕಣಿಲೆಯನ್ನು ಹುಡುಕಿ ತರುವುದು ಅಷ್ಟು ಸುಲಭದ ಮಾತಲ್ಲ. ಇದು ಸುಲಭವಾಗಿ ಕಣ್ಣಿಗೆ ಗೋಚರಿಸಿದರೂ ಕೈಗೆಟಕುವುದು ಕಷ್ಟ. ವರ್ಷವಿಡೀ ಸೊಂಪಾಗಿ ಬೆಳೆದ ಬಿದಿರು ತನ್ನ ಮುಳ್ಳಿನ ಕೊಂಬೆಗಳನ್ನು ಸ್ವತಂತ್ರವಾಗಿ ಎಲ್ಲೆಂದರಲ್ಲಿ ತನಗಿಷ್ಟ ಬಂದಂತೆ ಚಾಚಿಕೊಂಡಿರುತ್ತದೆ. ಹೀಗೆ ಚಾಚಿಕೊಂಡ ಮುಳ್ಳಿನ ಕೊಂಬೆಗಳ ನಡುವೆ ಒಂದೊಂದೆ ಕೊಂಬೆಗಳನ್ನು ಬಿಡಿಸುತ್ತಾ, ಮುಳ್ಳಿನಿಂದ ದೇಹವನ್ನು ರಕ್ಷಿಸುತ್ತಾ ಪೊದೆಯೊಳಗೆ ನುಗ್ಗುವುದೇ ಒಂದು ಸಾಹಸದ ಕೆಲಸ.
          ಮಳೆಗಾಲದಲ್ಲಿ ಊರೆಲ್ಲಾ ತಿರುಗಿ, ಕಾಣಿಸಿದ ಎಲ್ಲಾ ಬಿದಿರ ಮೆಳೆಗಳನ್ನೆಲ್ಲಾ ತಡಕಾಡಿ ಕಣ್ಣಿಗೆ ಗೋಚರಿಸಿದ ಕಣಿಲೆಗಳನ್ನೆಲ್ಲಾ ಕೊಯ್ದು ಕೊಂಡ್ಹೋಗಿ ಪೇಟೆಯಲ್ಲಿ ಮಾರಾಟ ಮಾಡುವ ಸಾಹಸಿಗರು ಹಲವರಿದ್ದಾರೆ. ಪಟ್ಟಣಗಳಲ್ಲಿ ಕಣಿಲೆ ಸಿಗದಿರುವುದರಿಂದ, ಇವುಗಳಿಗೆ ಬೇಡಿಕೆ ಹೆಚ್ಚು. ದರ ಕೂಡ ಅಧಿಕವಾಗಿರುತ್ತದೆ. ಕಣಿಲೆಯನ್ನು ಇಷ್ಟ ಪಡುವ ಪಟ್ಟಣಿಗರು ಎಷ್ಟೇ ಹಣವಾದರೂ ಕೊಟ್ಟು ಖರೀದಿಸುತ್ತಾರೆ. ಹೀಗೆ ಮಳೆಗಾಲದಲ್ಲಿ ಕಣಿಲೆಯಿಂದ ಸಂಪಾದನೆ ಮಾಡಿಕೊಳ್ಳುವರು ಕೆಲವು ಚಾಣಾಕ್ಷರು. ಹೆಚ್ಚಾಗಿ ಪುರುಷರು ಕಣಿಲೆಯನ್ನು ಕಡಿದು ತಂದರೆ, ಮಹಿಳೆಯರು ಸಂತೆಯಲ್ಲಿ ಕುಳಿತು ಮಾರಾಟ ಮಾಡುತ್ತಾರೆ. ಬಂಡವಾಳವಿಲ್ಲದೆ, ಲಾಭ ಪಡೆಯುವ ಉದ್ಯೋಗವಿದು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಕಣಿಲೆ ವ್ಯಾಪಾರಿಗಳನ್ನು ಕಾಣುವುದು ಅತಿ ವಿರಳ. ಅದಕ್ಕೆ ಲಾರಣವೂ ಇದೆ. ಬಿದಿರನ್ನು ಕಡಿಯುವುದು ಕಾನೂನಿನ ರೀತಿಯಲ್ಲಿ ಅಪರಾಧವೂ ಹೌದು. ಮಾತ್ರವಲ್ಲದೆ ಬಿದಿರ ಕಣಿಲೆ ಪಡೆಯಬೇಕಾದರೆ ಹರಸಾಹಸವೇ ಮಾಡಬೇಕಾಗುತ್ತದೆ. ಅಂತಹ ಸಾಹಸಕ್ಕೆ ಕೈ ಹಾಕುವ ಮನಸ್ಸಿನವರೂ ಕಡಿಮೆಯಾಗಿದ್ದಾರೆ. ಇಷ್ಟಲ್ಲದೆ ಸಸ್ಯರಾಶಿಗಳಲ್ಲಿ ಅತೀವೇಗವಾಗಿ ಬೆಳೆಯುವ ಸಸ್ಯ ಬಿದಿರು ಎನಿಸಿಕೊಂಡಿದ್ದರೂ, ಅತಿಯಾದ ಬಳಸುವಿಕೆಯಿಂದ ಸಂತತಿ ನಾಶವಾಗುತ್ತಾ ಬಂದಿದೆ. ಹಾಗಾಗಿ ಕಣಿಲೆ ಅಪರೂಪವಾಗಿ ಬಿಟ್ಟಿವೆ.
          ಇಂಗ್ಲೀಷ್‍ನಲ್ಲಿ ಬ್ಯಾಂಬೂ ಶೂಟ್ಸ್ ಎಂದು ಕರೆಯಲ್ಪಡುವ ಬಿದಿರಿನ ಕುಡಿಗೆ ಕಳಲೆ, ಕಳಿಲು ಎಂತಲೂ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಮಳೆ ನೀರು ಮಾಡುತ್ತಿದ್ದಂತೆ ಹಳ್ಳಿಗರು ಬೇಸಾಯದಲ್ಲಿ ತೊಡಗುತ್ತಿದ್ದರು. ಜೊತೆಗೆ ಬಿಡದೇ ಮಳೆ ಸುರಿಯುತ್ತಿದ್ದ ಕಾರಣ, ತರಕಾರಿಗಾಗಿ ಪಟ್ಟಣ್ಣಕ್ಕೆ ಹೋಗಲು ಸಮಯವಿರುತ್ತಿರಲಿಲ್ಲ. ಆಗ ಹಳ್ಳಿಗರೆಲ್ಲಾ ಕಾಡಿನಲ್ಲಿ ದೊರೆಯುವ ಸಸ್ಯ ತರಕಾರಿಗಳನ್ನೇ ಅವಲಂಬಿಸುತ್ತಿದ್ದರು. ಅವುಗಳಲ್ಲಿ ಕಣಿಲೆಯೂ ಒಂದು. ಮಳೆಗಾಲದ ವಿಶೇಷ ಆಹಾರವಾಗಿ ಕಳಲೆಯನ್ನು ಬಳಸುತ್ತಿದ್ದರು. ವಿವಿಧ ಬಗೆಯ ರುಚಿಕರ ಖಾದ್ಯಗಳನ್ನು ತಯಾರಿಸುತ್ತಿದ್ದರು. ಹೀಗೆ ಕಣಿಲೆ ಆಹಾರದಲ್ಲಿ ಬಳಕೆಯಾಯಿತು ಎನ್ನುತ್ತಾರೆ. ಕಣಿಲೆ ಖಾದ್ಯಗಳು ಆರೋಗ್ಯಕರವೂ ಹೌದು. ಯಾಕೆಂದರೆ ಕಣಿಲೆ ಉಷ್ಣಾಂಶ ಹೊಂದಿರುವುದರಿಂದ ಮಳೆಗಾಲದಲ್ಲಿ ಶಿತದಿಂದ ಶರೀರವನ್ನು ಬೆಚ್ಚಗೆಯಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ್ಯವಾದ ತರಕಾರಿ ಇದು. ಹಾಗೆಂದು ಅತಿಯಾಗಿ ತಿನ್ನುವಂತಿಲ್ಲ. ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ.
ವರ್ಷಋತುವಿನಲ್ಲಿ ಬಿದಿರಿಗೆ ಬಿಡುವಿಲ್ಲದ ಕೆಲಸ. ತನ್ನ ವಂಶವನ್ನು ವೃದ್ಧಿಗೊಳಿಸುವ, ಒಂದು ಬಿದಿರಿನ ಮೆಳೆಯಲ್ಲಿ ಸುಮಾರು 5 ರಿಂದ 10 ಕಣಿಲೆಗಳು ಮೂಡುತ್ತವೆ. ಭಾದ್ರಪದ ಮಾಸದಲ್ಲಿ ಕಣಿಲೆಯನ್ನು ಕೊಯ್ಯಬಾರದು ಎಂಬ ನಂಬಿಕೆಯಿದೆ. ಅದು ಅಳಿಯುತ್ತಿರುವ ಸಂತತಿಯನ್ನು ಉಳಿಸುವ ನಿಟ್ಟಿನಿಂದಲೂ ಆಗಿರಬಹುದು. ಕತ್ತಿಯಿಂದ ಕತ್ತರಿಸಿದ ಕಣಿಲೆಯನ್ನು ಅದರ ಬಿಳಿಯ ತಿರುಳನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಬೇಕು. ಹೊರಗಿನ ಕವಚ ತೆಗೆದಂತೆ ಒಳಗೆ ಬಿಳಿಯ ತಿರುಳು ಹೆಚ್ಚಾಗುತ್ತಾ ಹೋಗುತ್ತದೆ. ಗಟ್ಟಿ ಇರುವ ಭಾಗವನ್ನು ಕತ್ತರಿಸಿ ಎಸೆಯಬೇಕು. ಕಣಿಲೆಯನ್ನು ಕತ್ತಿಯಿಂದ ಸಣ್ಣಕ್ಕೆ ಕೊಚ್ಚಿಯೂ ಉಪಯೋಗಿಸಬಹುದು. ಸುಂದರವಾಗಿ ಚಕ್ರಾಕಾರವಾಗಿಯೂ ತುಂಡರಿಸಿ ಬಳಸಬಹುದು. ಕಣಿಲೆಯ ಕಚ್ಛಾ ಭಾಗಗಳನ್ನು ದನ ಕರುಗಳಿಗೆ ಹಾಕುವಂತಿಲ್ಲ. ಯಾಕೆಂದರೆ ಕತ್ತಿಯಿಂದ ಕಡಿಯುವುದರಿಂದ, ಕಬ್ಬಿಣ ಮುಟ್ಟಿದ ಬಿದಿರು ವಿಷ ಎನ್ನುತ್ತಾರೆ ತಿಳಿದವರು.
          ಕೊಚ್ಚಿದ ಕಣಿಲೆಯನ್ನು ಅವತ್ತೇ ಉಪಯೋಗಿಸುವಂತಿಲ್ಲ. ಮೂರು ದಿನ ನೀರಲ್ಲಿ ಹಾಕಿಟ್ಟು, ನಂತರ ಖಾದ್ಯದಲ್ಲಿ ಬಳಸುವುದು. ನೀರಲ್ಲಿ ಹಾಕಿಟ್ಟ ಪ್ರತಿದಿನವೂ ನೀರು ಬದಲಾಯಿಸಬೇಕು. ನೀರಲ್ಲಿ ಹಾಕಿಡುವುದರಿಂದ ಅದರಲ್ಲಿನ ವಿಷ ತೊಳೆದುಹೋಗುವುದು. ಅವತ್ತೇ ಉಪಯೋಗಿಸಬೇಕು ಎನ್ನುವವರು ಕಣಿಲೆಯನ್ನು ಬೇಯಿಸಿ ನೀರು ತೆಗೆದು ನಂತರ ಉಪಯೋಗಿಸಬಹುದು. ಕಣಿಲೆ ಉಷ್ಣಾಂಶವಾಗಿರುವುದರಿಂದ ಹೆಚ್ಚಾಗಿ ಕಣಿಲೆಯ ಜೊತೆಗೆ ಮೊಳಕೆ ಬರಿಸಿದ ಹೆಸ್ರು ಕಾಳನ್ನು ಹಾಕಿ, ವಿವಿದ ರುಚಿಯಾದ ಖಾದ್ಯಗಳನ್ನು ತಯಾರಿಸುತ್ತಾರೆ. ಕಣಿಲೆಯಿಂದ ಉಪ್ಪಿನಕಾಯಿ, ಪಲ್ಯ, ಸಾಂಬಾರು ಇತ್ಯಾದಿಗಳನ್ನು ಮಾಡುತ್ತಾರೆ.
          ಬಿದಿರು ಹೂ ಬಿಡುವ ಸಸ್ಯರಾಶಿ. ಒಮ್ಮೆ ಒಂದು ಬಿದಿರಿನ ಮೆಳೆ ಹೂಬಿಟ್ಟರೆ ನಂತರ ಆ ಬಿದಿರುಗಳೆಲ್ಲಾ ಸಾಯುತ್ತವೆ. ಹೂಬಿಟ್ಟ ಬಿದಿರಿನ ಮೆಳೆಯಲ್ಲಿ ಮತ್ತೆಂದೂ ಕಣಿಲೆ ಹುಟ್ಟುವುದಿಲ್ಲ. ಇತ್ತೀಚೆಗೆ ಹೆಚ್ಚಿನ ಬಿದಿರ ಮೆಳೆಗಳು ಹೂಬಿಟ್ಟು ಸಾಯುತ್ತಿವೆ. ಹಾಗಾಗಿ ಕಣಿಲೆಯ ಸಂಖ್ಯೆಯೂ ಕಡಿಮೆಯಾಗಿವೆ ಎನ್ನಬಹುದು.

ಬಲು ರುಚಿಕರ ಕುಂಟಾಲ ಹಣ್ಣು


          ವರ್ಷದಲ್ಲಿ ಒಂದೇ ಬಾರಿ ಹಣ್ಣು ಬಿಡುವ ಇದು, ಮಳೆಗಾಲವನ್ನು ತನ್ನ ಹಣ್ಣಿನ ಪರ್ವಕಾಲಕ್ಕೆ ಆಯ್ಕೆ ಮಾಡಿಕೊಂಡಿದೆ. ಎಲ್ಲರಿಗೂ ಬಲು ಇಷ್ಟದ ಹಣ್ಣು. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗಂತು ಅತಿ ಪ್ರಿಯವಾದ ಹಣ್ಣು ಈ ಕುಂಟಾಲ ಹಣ್ಣು. ಒಥಿಡಿಣಚಿಛಿeಚಿe ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು Syzygium caryophyllatum L.  ಭಾರತದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೇರಳವಾಗಿ ಕಂಡು ಬರುವ ಇದು, ಕೇರಳ, ಕರ್ನಾಟಕ, ತಮಿಳುನಾಡಿನ ಘಟ್ಟ ಪ್ರದೇಶಗಳಲ್ಲಿ ಕಾಡಿನಂತೆ ಬೆಳೆದು ನಿಂತಿವೆ. ಆದರೆ ಇದರ ತವರೂರು ಶ್ರೀಲಂಕಾದ ಪಶ್ಚಿಮ ಘಟ್ಟದ ಒಳ ಹೊರ ತಪ್ಪಲು, ಜಾವ, ಬರ್ನಿಯಾ ದ್ವೀಪಗಳು. ಪೊದೆಯಂತೆ ಬೆಳೆದು ಕಾಡನ್ನೇ ಸೃಷ್ಟಿಸುವ ಕುಂಟಾಲ ಗಿಡ ಕುರುಚಲು ಸಸ್ಯಗಳ ಜಾತಿಗೆ ಸೇರಿದೆ. ಇದನ್ನು ಕನ್ನಡದಲ್ಲಿ ಕುಂಟಾಂಗಿಲ, ಕುಂಟು ನೇರಳೆ, ನಾಯಿನೇರಳೆ, ಸಂಸ್ಕøತದಲ್ಲಿ ಭೂಮಿಜಂಬು, ತುಳುವಲ್ಲಿ ಕುಂಟಲ ಎಂದು ಕರೆಯಲಾಗುತ್ತದೆ.
          ಜೂನ್ ತಿಂಗಳಲ್ಲಿ ಕುಂಟಾಲ ಹಣ್ಣಿನ ಋತು ಪ್ರಾರಂಭ. ಎಪ್ರಿಲ್ ತಿಂಗಳ ಅಂತ್ಯದಲ್ಲಿ ಗಿಡ ಮರಗಳೆಲ್ಲವೂ ಹೂವಿನಿಂದ ಕಂಗೊಳಿಸುವ ದೃಶ್ಯ. ಅಂದಿನಿಂದ ಪಕ್ಷಿಗಳ ಜೊತೆಗೂಡಿ ಮಕ್ಕಳೂ ಕೂಡ ಹೂ ಕಾಯಾಗಿ, ಕಾಯಿ ಹಣ್ಣಾಗಲು ದಿನ ಲೆಕ್ಕ ಹಾಕಲು ಶುರು ಮಾಡುತ್ತಾರೆ. ಯಾಕೆಂದರೆ ಇದರ ಹಣ್ಣುಗಳು ಸವಿಯಲು ಅತ್ಯಂತ ರುಚಿಕರ ಮತ್ತು ಅದನ್ನು ತಿಂದೊಡನೆ ತಿಂದವರ ಬಾಯಿಯೂ ನೇರಳೆ ಮಯವಾಗಿಬಿಡುತ್ತದೆ. ಮಕ್ಕಳಿಗಂತು ನಾಲಗೆಯ ಬಣ್ಣವನ್ನು ಕಡುವಾಗಿಸಿಕೊಳ್ಳುವಲ್ಲಿ ಪೈಪೋಟಿ.
          ಕುಂಟಾಲ ಮರಗಳು ಸಣ್ಣ ಪೊದೆಯಾಗಿಯೂ ಹಬ್ಬಿಕೊಳ್ಳುತ್ತವೆ. ಕೆಲವೊಂದು ಮರವಾಗಿ ಎತ್ತರಕ್ಕೂ ಬೆಳೆದು ನಿಲ್ಲುತ್ತವೆ. ಕುಂಟಾಲ ಮರದ ಎಳೆ ಚಿಗುರು ತಿನ್ನಲು ರುಚಿಕರವೂ ಹೌದು. ಜೊತೆಗೆ ಪರಿಮಳ ಭರಿತವೂ ಹೌದು. ಬಾಲ್ಯದಲ್ಲಿ ಅಮ್ಮ ಕುಂಟು ನೇರಳೆಯ ಎಳೆಚಿಗುರಿನಿಂದ ಜೀರಿಗೆ, ಹಾಲು ಸೇರಿಸಿ ಆಹಾ! ಘಮ್ಮೆನ್ನುವ ರುಚಿಯಾದ ಕಾಫಿ ಮಾಡಿಕೊಡುತ್ತಿದ್ದ ನೆನಪು. ಅದು ಮಾತ್ರವಲ್ಲದೆ ಶಾಲೆಯಿಂದ ಮನೆಗೆ ಹೋಗಿ ಬರುವ ದಾರಿಯಲ್ಲಿ ಸಿಗುವ ಕುಂಟು ನೇರಳೆಯ ಚಿಗುರನ್ನು ಗೆಳಯರೆಲ್ಲಾ ಸೇರಿ ಬಾಯೊಳಗೆ ಹಾಕಿ ಜಗಿಯುತ್ತಾ ಬರುತ್ತಿದ್ದೆವು.
          ಮರವು ಗೊಂಚಲಾಗಿ ಬಿಳಿ ಬಣ್ಣದ ಹೂಗಳನ್ನು ಬಿಟ್ಟು, ಸುವಾಸನೆ ರಹಿತವಾಗಿವೆ. ಹಸಿರಾಗಿರುವ ಕಾಯಿಗಳಿಗಿಂತ, ಕಣ್ಣು ಕುಕ್ಕುವಂತೆ ಕಡು ನೇರಳೆ ಬಣ್ಣದಿಂದ ಕಂಗೊಳಿಸುವ ಹಣ್ಣನ್ನು ಗೊಂಚಲು ಗೊಂಚಲಾಗಿ ನೋಡುವಾಗ, ಬಾಯಿಯಲ್ಲಿ ನೀರೂರಿ, ಒಮ್ಮೆಲೆ ಗೊಂಚಲಿನ ಎಲ್ಲಾ ಹಣ್ಣುಗಳನ್ನು ಬಾಯೊಳಗೆ ಹಾಕಿ ಬಿಡುವ ಮನಸ್ಸಂತು ಖಂಡಿತಾ ಆಗುವುದು. ವಯಸ್ಸಿನ ಅರಿವನ್ನೂ ಮರೆಸಿಬಿಡುತ್ತವೆ. ಸಣ್ಣ ಸಣ್ಣ ಹಣ್ಣುಗಳಾಗಿರುವುದರಿಂದ ಏಕಕಾಲದಲ್ಲಿ ಬಾಯಿ ತುಂಬಾ ಸುಮಾರು ಹತ್ತು ಹಣ್ಣುಗಳನ್ನು ಹಾಕಿಕೊಂಡು ರುಚಿ ಸವಿಯಬಹುದು.
          ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಕಾಯಿಗಳು ಹಣ್ಣಾಗಲು ಶುರುವಾಗುತ್ತವೆ. ಮಳೆ ನೀರು ಬಿದ್ದ ಮೇಲೆ ಒಮ್ಮೆಲೆ ಎಲ್ಲಾ ಕಾಯಿಗಳು ಹಣ್ಣಾಗತೊಡಗುತ್ತವೆ. ಆಗ ನೋಡಬೇಕು, ಮರದ ತುಂಬಾ ಕಪ್ಪು ಮಣಿ ಪೋಣಿಸಿದಂತೆ, ಮಣಿ ಮೇಲೆ ಮಳೆ ಹನಿ ನಿಂತು ಸುಂದರವಾಗಿ ಮಿನುಗುವ ಸೊಬಗು. ಮಳೆ ಬೀಳುವ ಮೊದಲು ಬಲಿತ ಹಣ್ಣುಗಳು ಬಹಳ ರುಚಿಕರ. ಮಳೆ ನೀರು ಬಿದ್ದ ಮೇಲೆ ಹಣ್ಣುಗಳೆಲ್ಲವೂ ಮಳೆ ನೀರು ತುಂಬಿ, ಉಬ್ಬಿ ನೋಡಲು ಗುಂಡು ಗುಂಡಾಗಿ ಹೊಳೆಯುತ್ತಾ, ಹೊಳೆಯುತ್ತಾ ಕಣ್ಮನಗಳನ್ನು ಸೆಳೆಯುತ್ತವೆ. ಆದರೆ ರುಚಿ ಕಳೆದುಕೊಂಡು ನೀರು ತುಂಬಿ ಸಪ್ಪೆಯಾಗಿರುತ್ತವೆ. ಆದರೆ ಪೂರ್ತಿ ರುಚಿ ಕಳೆದುಕೊಳ್ಳುವುದಿಲ್ಲ. ಎಲ್ಲಾ ಮರದ ಹಣ್ಣುಗಳು ಒಂದೇ ರೀತಿಯಾದ ರುಚಿ ಹೊಂದಿರುದಿಲ್ಲ, ಕೆಲವು ಸಿಹಿಯಾದರೆ, ಕೆಲವು ಹುಳಿಯಾಗಿರುತ್ತವೆ. ಇನ್ನು ಕೆಲವು ರಸಭರಿತವಾಗಿರುತ್ತವೆ. ಮಳೆ ನೀರು ತುಂಬಿದ ಕುಂಟಾಲ ಹಣ್ಣು ತಿನ್ನು ಎನ್ನುತ್ತಿರುತ್ತವೆ, ತಿಂದರೆ ಶೀತ, ಕೆಮ್ಮು, ಗಂಟಲು ನೋವು ನಮ್ಮ ಬೆನ್ನು ಹಿಡಿಯುವುದು. ಸ್ವಲ್ಪ ತಿನ್ನುವುದರಲ್ಲಿ ಯಾವುದೇ ದೋಷವಿಲ್ಲ.
                    ತಿರುಳಿನಿಂದ ಕೂಡಿರುವ ಈ ಕುಂಟಾಲ ಹಣ್ಣಿನೊಳಗೆ ಸಣ್ಣದೊಂದು ಬೀಜ. ಆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಅದರಿಂದಲೂ ಕಾಫಿ ಮಾಡಿ ಕುಡಿಯಬಹುದು. ಚಿಗುರೆಲೆಯಿಂದ ಜೀರಿಗೆ ಸೇರಿಸಿ ಹಾಲು ಹಾಕಿ ಮಾಡಿದ ಕಾಫಿಯ ಮುಂದೆ ಉಳಿದೆಲ್ಲವೂ ಶೂನ್ಯ. ಹಿಂದೆ ಹಳ್ಳಿಯವರು ನಿರ್ವಿಷವಾಗಿ ದೊರೆಯುತ್ತಿದ್ದ ಈ ಕುಂಟಾಲದ ಚಿಗುರಿನಿಂಲೇ ಕಾಫಿ ಮಾಡಿ ಕುಡಿಯುತ್ತಿದ್ದರು. ಆರೋಗ್ಯಕರವೂ ಆಗಿತ್ತು. ಇಂದಿಗೂ ಹಳ್ಳಿ ಭಾಗದಲ್ಲಿ ಈ ರೀತಿಯ ಕಾಫಿ ಮಾಡಿ ಕುಡಿಯುವವರಿದ್ದಾರೆ. ಕುಂಟಾಲ ಚಿಗುರೆಲೆಯಿಂದ ಕಷಾಯ ಮಾಡಿ ಅದರಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ. ವಸಡು ಗಟ್ಟಿಯಾಗುತ್ತದೆ. ಜೊತೆಗೆ ಬಾಯಿ ವಾಸನೆಯನ್ನು ಹೋಗಲಾಡಿಸುವ ಉತ್ತಮ, ರಾಸಾಯನಿಕ ಮುಕ್ತ ಮೌತ್ ಫ್ರೆಶ್‍ನರ್ ಕೂಡ, ಎಂಬುದು ಹಳ್ಳಿಗರ ನಂಬಿಕೆ. ಇದರ ಚಿಗುರಿನಿಂದ ಮಾಡಿದ ಚಟ್ನಿಯು ಬಲು ರುಚಿಕರ. ಸಣ್ಣ ಮಕ್ಕಳ ನಾಲಗೆಯಿಂದ ಅಗ್ರ ನಿವಾರಿಸಲು ಕೇಪುಳ, ನೆಕ್ಕರೆ, ಮತ್ತು ಇತರ ಚಿಗುರುಗಳ ಜೊತೆಗೆ ಕುಂಟಾಲದ ಚಿಗುರನ್ನೂ ಸೇರಿಸಿ ಜಜ್ಜಿ ರಸ ತೆಗೆದು ಶುದ್ಧ ಬಟ್ಟೆಗೆ ರಸವನ್ನು ಹಾಕಿ ನಾಲಗೆಯನ್ನು ಉಜ್ಜುತ್ತಾರೆ. ಕಫದೋಷಕ್ಕೂ ಇದನ್ನು ಉಪಯೋಗಿಸುತ್ತಾರೆ. ದೇಹದಿಂದ ನಂಜಿನಂಶವನ್ನು ಹೋಗಲಾಡಿಸುತ್ತದೆ. ಇದರ ರೆಂಬೆಗಳನ್ನು ಬಳ್ಳಿ ತರಕಾರಿಗಳಿಗೆ ಆಧಾರಗಳಾಗಿ ಬಳಸಲಾಗುತ್ತದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳಾದಾಗ ಇದರ ಚಿಗುರೆಲೆಯ ಕಷಾಯವೇ ಔಷಧಿಯಾಗಿತ್ತು ಎನ್ನುತ್ತಾರೆ ಹಿರಿಯರು.
          ಕಾಡುಗಳೇ ನಾಶವಾಗುತ್ತಿರುವ ಈ ಹೊತ್ತಲ್ಲಿ, ಹೆಚ್ಚಿನವರಿಗೆ ಇದು ಅಪರೂಪವಾಗಿ ಬಿಟ್ಟಿದೆ. ಅದಕ್ಕಿಂತ ಹೆಚ್ಚಾಗಿ ಪೇಟೆ ಹಣ್ಣುಗಳ ಮಧ್ಯೆ ಈ ಕಾಡು ಹಣ್ಣುಗಳಿಗೆ ಬೆಲೆಯೇ ಇಲ್ಲವಾಗಿದೆ. ಮತ್ತು ಅಪರಿಚಿತವಾಗಿವೆ.